ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದ ಅಂತರ್‌ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಶಂಕರಘಟ್ಟದ ತಂಡ ಪ್ರಥಮ ಸ್ಥಾನ ಗಳಿಸಿದೆ.

ಸಾಗರದ ಎಲ್‌ಬಿ ಆ್ಯಂಡ್ ಎಸ್‌ಬಿಎಸ್ ತಂಡ ದ್ವಿತೀಯ ಹಾಗೂ ಶಿವಮೊಗ್ಗ ಯುಸಿಪಿಇ ಶಂಕರಘಟ್ಟ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ಎರಡು ದಿನ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಒಟ್ಟು 29 ತಂಡ ಭಾಗವಹಿಸಿದ್ದವು.

ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎನ್. ಡಿ.ವಿರೂಪಾಕ್ಷ ಹಾಗೂ ಐಡಿಎಸ್‌ಜಿ ಪ್ರಾಂಶುಪಾಲೆ ತಸನಿಮ್ ಕೌಸರ್ ಮನಿಯಾರ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಬಳಿಕ ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎನ್.ಡಿ.ವಿರೂಪಾಕ್ಷ ಮಾತನಾಡಿ, ಎರಡು ದಿನಗಳ ಕಬಡ್ಡಿ ಪಂದ್ಯಾವಳಿ ಕಾಲೇಜು ಆಡಳಿತ ಅಚ್ಚುಕಟ್ಟಿನಿಂದ ಸುವ್ಯವಸ್ಥಿತವಾಗಿ ನಡೆಸಿದೆ. ಕಾರ್ಯಕ್ರಮ ನಡೆಸುವುದು ಸುಲಭದ ಮಾತಲ್ಲ. ಸಕಲ ಜವಾಬ್ದಾರಿ ಹಾಗೂ ಆಟಗಾರರಿಗೆ ಅನುಕೂಲವಾಗುವುದು ಮುಖ್ಯ. ಆ ನಿಟ್ಟಿನಲ್ಲಿ ಕಾಲೇಜು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.


ಕ್ರೀಡಾ ಚಟುವಟಿಕೆ ಜೊತೆಗೆ ಶೈಕ್ಷಣಿಕ ಅರ್ಹತೆ ವಿದ್ಯಾರ್ಥಿಗಳು ಹೊಂದಿರಬೇಕು. ಅರ್ಹತೆಯಿಲ್ಲದಿದ್ದರೆ ಸಮಾಜದಲ್ಲಿ ಬದುಕುವುದು ಕಷ್ಟ. ಉತ್ತರ ಭಾರತದ ಒಬ್ಬರು ಕ್ರೀಡೆಯಲ್ಲಿ ಸಾಧನೆ ಮಾಡಿದ್ದರು. ಆದರೆ ಶೈಕ್ಷಣಿಕ ಅರ್ಹತೆ ಇಲ್ಲದೆ ಅವರ ಜೀವನ ಬೀದಿಗಾಡಿಗಳಲ್ಲಿ ವ್ಯಾಪಾರ ನಡೆಸುವಂತಾಗಿದೆ ಎಂದು ತಿಳಿಸಿದರು.

ಕಾಲೇಜು ಅಧ್ಯಾಪಕ ಡಾ. ಕೆ.ಎನ್.ಲಕ್ಷ್ಮೀಕಾಂತ್ ಮಾತನಾಡಿದರು. ಐಡಿಎಸ್‌ಜಿ ಸರ್ಕಾರಿ ಕಾಲೇಜು ದೈಹಿಕ ಶಿಕ್ಷಕ ಕೆ.ಸಿ. ಕುಮಾರಸ್ವಾಮಿ, ಪ್ರಾಧ್ಯಾಪಕ ಎಸ್.ವಿ.ನಾಗರಾಜ್, ಕ್ರೀಡಾ ಸಮಿತಿ ಸದಸ್ಯರಾದ ಡಾ.ಎಸ್.ಮಹೇಶ್, ಡಾ. ಸೋಮಶೇಖರ್, ಡಾ.ಮೋಹನ್‌ ಕುಮಾರ್, ಸುಧಾ, ದೈಹಿಕ ಶಿಕ್ಷಕ ರವೀಂದ್ರೇಗೌಡ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.