ಸಾರಾಂಶ
ಹಿರಿಯೂರು; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ನಿಗದಿಪಡಿಸಿರುವ ಪ್ರೌಢಶಾಲೆಗಳಲ್ಲಿ ಅಂತರ ಶಾಲಾ ಸ್ಪರ್ಧೆಗಳನ್ನು ಡಿ.29 ವಿಶ್ವ ಮಾನವ ದಿನಾಚರಣೆಯಂದು ಏಕಕಾಲಕ್ಕೆ ಪ್ರಾರಂಭಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ವಿವಿಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಅಂತರ ಶಾಲಾ ಸ್ಪರ್ಧೆಯು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಗುಣಾತ್ಮಕ ಫಲಿತಾಂಶ ವೃದ್ಧಿಗೆ ಸಹಕಾರಿಯಾಗಲಿದೆ. ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಲು ತಾಲೂಕಿನ ಎಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಕ್ರಮ ವಹಿಸಬೇಕು. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಮಕ್ಕಳು ಸಂತಸದಿಂದ ಬರೆಯಲು ಅನುಕೂಲವಾಗುವಂತೆ ಅಂತರ ಶಾಲಾ ಸ್ಪರ್ಧೆಯನ್ನು ಅಚ್ಚುಕಟ್ಟುತನದಿಂದ ಆಯೋಜಿಸಬೇಕು. ರಸಪ್ರಶ್ನೆ, ಆಶುಭಾಷಣ, ಕಂಠಪಾಠ ಮುಂತಾದ ಸ್ಪರ್ಧೆಗಳನ್ನು ಡಿ.29, ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ನಿಗದಿಪಡಿಸಿದ ದಿನಾಂಕಗಳಂದು ತಾಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲಿ ಆಯೋಜಿಸಬೇಕು.
ಪ್ರಥಮ ಸಂಕಲನಾತ್ಮಕ ಮೌಲ್ಯಮಾಪನದ ಕ್ರೊಢೀಕೃತ ವಿಶ್ಲೇಷಣೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರ ಸಭೆಯಲ್ಲಿ ಸಮಗ್ರವಾಗಿ ತಿಳಿಸಬೇಕು.ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನ ನೀಡಬೇಕು ಎಂದು ಸಿಎಂ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಸಿ.ಮಹೇಶ್ವರ ರೆಡ್ಡಿ, ಕ್ಷೇತ್ರ ಸಮನ್ವಯಾಧಿಕಾರಿ ಈ.ತಿಪ್ಪೇರುದ್ರಪ್ಪ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಪರಶುರಾಮ್, ಶಿಕ್ಷಣಾಧಿಕಾರಿ ಸಂಘದ ಅಧ್ಯಕ್ಷೆ ವಿ.ಭಾಗ್ಯಮ್ಮ ಹಾಗೂ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.