ಕನ್ನಡಪ್ರಭ ವಾರ್ತೆ ಚಾಮರಾಜನಗರ

ಯುವಕರು ಶ್ರದ್ಧೆ, ಛಲ ಪರಿಶ್ರಮ ರೂಢಿಸಿಕೊಂಡು ಗುರಿಯತ್ತ ಸಾಗಿದರೆ ಅಸಾಧ್ಯವಾದುದನ್ನೂ ಸಾಧಿಸಬಹುದಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್‌ ಅಭಿಪ್ರಾಯಪಟ್ಟರು.ತಾಲೂಕಿನ ಮಲಿಯೂರು ಗ್ರಾಮದ ಜೆಇಇ ಮೇನ್ಸ್‌ನ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಎಂಜಿ ನಾಗದೇವ ಅವರನ್ನು ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿದರು.

ಯುವಕರು ವಿದ್ಯಾರ್ಥಿ ದೆಸೆಯಲ್ಲಿ ಏಕಾಗ್ರತೆ ಬೆಳೆಸಿಕೊಂಡು ಗುರಿಯತ್ತ ಸಾಗಿದರೆ ಏನನ್ನಾದರೂ ಸಾಧಿಸಬಹುದು. ಪರಿಶ್ರಮಪಟ್ಟು ಗುರಿಯೆಡೆಗೆ ಸಾಗಲು ಛಲ ಒಂದಿದ್ದರೆ ಸಾಧಕರಾಗಬಹುದು ಎಂದರು. ಶಿಕ್ಷಣ ಇಂದು ಸ್ಪರ್ಧಾತ್ಮಕವಾಗಿದ್ದು, ಉದ್ಯೋಗ ಕೇಂದ್ರೀಕೃತವಾಗುತ್ತಿದೆ. ಹೀಗಾಗಿ ಪರಿಶ್ರಮವೇ ವಿದ್ಯಾರ್ಥಿ ಯಶಸ್ಸಿನ ಗುಟ್ಟಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಹೆಮ್ಮೆಯ ಪುತ್ರ ನಾಗದೇವ ಜೆಇಇ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಸರು ತಂದಿದ್ದಾನೆ. ಈತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಮುಂದಿನ ದಿನಗಳಲ್ಲಿ ತರಬೇತಿ ಕೇಂದ್ರ ತೆರೆದು ಗ್ರಾಮೀಣ ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗದೇವ, ಬಾಲ್ಯದಿಂದಲೂ ನನಗೆ ಏನನ್ನಾದರೂ ಸಾಧಿಸಬೇಕೆಂಬ ಛಲ ಇತ್ತು. ಇದಕ್ಕೆ ಪೂರಕವಾಗಿ ನನ್ನ ತಂದೆ ತಾಯಿ ಗುರುಗಳು ಮಾರ್ಗದರ್ಶನ ನೀಡಿದರು. ಅದು ಇಂದು ಸಾರ್ಥಕವಾಗಿದೆ ಎಂದರು. ಮುಂದೆ ದೇಶದ ಪ್ರಸಿದ್ಧ ಐಐಟಿಯಲ್ಲಿ ಶಿಕ್ಷಣ ಮುಂದುವರಿಸಿ ಒಳ್ಳೆಯ ಜ್ಞಾನ ಸಂಪಾದಿಸಿ ಉದ್ಯೋಗದ ಜೊತೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂದರು.ಎಂಜಿ ನಾಗದೇವ ಪ್ರತಿಷ್ಠಿತ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿರುವ ಮಲೆಯೂರು ಗ್ರಾಮದ ಗುರು ಮತ್ತು ನೇತ್ರಾವತಿಯವರ ಪುತ್ರ. ಜೆಇಇ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ್‍ಯಾಂಕ್‌ ಪಡೆದಿರುವ ಈತ ತನ್ನ ಶಿಕ್ಷಣವನ್ನು ಮೈಸೂರು ಹಾಗೂ ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪಡೆದಿದ್ದು, ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆಯಲ್ಲೂ 28ನೇ ರ್‍ಯಾಂಕ್‌ ಪಡೆದಿದ್ದಾನೆ.ಈ ಸಂದರ್ಭದಲ್ಲಿ ನಗರದ ಶ್ರೀ ಸಿದ್ದಮಲ್ಲೇಶ್ವರ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಚಂದಕವಾಡಿ ನಂದೀಶ್, ನಾಗದೇವ ಅವರ ತಂದೆ ಗುರು ತಾಯಿ ಏ.ಸಿ. ನೇತಾವತಿ ಸೇರಿದಂತೆ ಇತರರು ಹಾಜರಿದ್ದರು.

---

7ಸಿಎಚ್‌ಎನ್‌51


ಚಾಮರಾಜನಗರ ತಾಲೂಕಿನ ಮಲಿಯೂರು ಗ್ರಾಮದ ಜೆಇಇ ಮೇನ್ಸ್‌ನಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಎಂಜಿ ನಾಗದೇವರನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್‌ ಸನ್ಮಾನಿಸಿದರು.