ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯಲ್ಲಿ ಮಣಿಪಾಲದ ಇಂಟಿಗ್ರೇಟಿವ್ ಮೆಡಿಸಿನ್ ಆ್ಯಂಡ್ ರಿಸರ್ಚ್ ಸೆಂಟರ್ನ ಯೋಗ ವಿಭಾಗದ ವತಿಯಿಂದ ಶನಿವಾರ ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ ಎಂಬ ಜಾಗತಿಕ ಧ್ಯೇಯವಾಕ್ಯದಡಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಜಾಗತಿಕ ಸ್ವಾಸ್ಥ್ಯ ಚಳುವಳಿಯಲ್ಲಿ ಭಾರತದ ನಾಯಕತ್ವವನ್ನು ಶ್ಲಾಘಿಸುತ್ತಾ, ಯೋಗವು ಜಗತ್ತಿಗೆ ಭಾರತದ ಶ್ರೇಷ್ಠ ಕೊಡುಗೆಗಳಲ್ಲಿ ಒಂದಾಗಿದೆ, ಯೋಗವು ಇಂದು ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ಯೋಗ ದಿನವನ್ನು ಆಚರಿಸುವುದು ಈ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಮತ್ತು ಭವಿಷ್ಯದ ಪೀಳಿಗೆಗಳು ಯೋಗವನ್ನು ಕೇವಲ ಅಭ್ಯಾಸವಾಗಿ ಮಾತ್ರವಲ್ಲದೆ ಜೀವನ ವಿಧಾನವಾಗಿ ಸ್ವೀಕರಿಸಲು ಪ್ರೇರೇಪಿಸುತ್ತದೆ ಎಂದು ಅಭಿಪ್ರಾಯಪಟ್ಟರು,ಮುಖ್ಯ ಅತಿಥಿಯಾಗಿ ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಅವರು, ಅನಿಶ್ಚಿತತೆಯ ಜಗತ್ತಿನಲ್ಲಿ, ಯೋಗವು ನಮ್ಮ ಯುವಕರ ಜೀವನಕ್ಕೆ ಸಮತೋಲನ ಒದಗಿಸುತ್ತದೆ. ಯೋಗವು ದೈಹಿಕವಾಗಿಯಲ್ಲದೇ ಆಂತರಿಕ ಸ್ಪಷ್ಟತೆ ಮತ್ತು ಆಧ್ಯಾತ್ಮಿಕ ಆಧಾರವನ್ನು ಸಹ ಅಭಿವೃದ್ಧಿಪಡಿಸುತ್ತದೆ. ಒಂದು ಶೈಕ್ಷಣಿಕ ಸಂಸ್ಥೆಯಾಗಿ, ಸಮರ್ಥ ವೃತ್ತಿಪರರನ್ನು ಮಾತ್ರವಲ್ಲದೆ ಜಾಗೃತ ವ್ಯಕ್ತಿಗಳ ರೂಪಣೆಯನ್ನು ಆಧುನಿಕ ಶಿಕ್ಷಣದಲ್ಲಿ ಸಂಯೋಜಿಸುವುದು ಅತ್ಯಗತ್ಯ ಎಂದು ಮಾಹೆ ನಂಬುತ್ತದೆ ಎಂದರು.ಮಾಹೆಯ ಆರೋಗ್ಯ ವಿಜ್ಞಾನಗಳ ಸಹಉಪಕುಲಪತಿ ಡಾ. ಶರತ್ ಕೆ. ರಾವ್, ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರು ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಯೋಗ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು. ಯೋಗ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಅನ್ನಪೂರ್ಣ ಕೆ. ಅವರ ಮಾರ್ದಗರ್ಶನದಲ್ಲಿ ಯೋಗ ಥೆರಪಿ ವಿದ್ಯಾರ್ಥಿಗಳು ಆಕರ್ಷಕ ಯೋಗ ಪ್ರದರ್ಶನ ನೀಡಿದರು. ಯೋಗ ಸಾಧಕಿ ಇಂದಿರಾ ಬಲ್ಲಾಳ್, ಸಹಾಯಕ ಪ್ರಾಧ್ಯಾಪಕಿ ಡಾ. ಲಾವ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ನೀತಿನಕುಮಾರ್ ಜೆ. ಪಾಟೀಲ್ ವಂದಿಸಿದರು.