ಗುಜರಾತ್‌ನ ಅಹಮದಾಬಾದ್‌ಗೆ ಸಾಗಿಸಬೇಕಿದ್ದ ಬಾಗಲಕೋಟೆ ಜಿಲ್ಲೆ ಮುಧೋಳದ ಕಾರ್ಖಾನೆಯ ಸಕ್ಕರೆಯನ್ನು ಮಾರ್ಗ ಮಧ್ಯೆಯೇ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದ ಲಾರಿ ಚಾಲಕ ಹಾಗೂ ಕ್ಲೀನರ್‌ ನನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುಧೋಳ

ಗುಜರಾತ್‌ನ ಅಹಮದಾಬಾದ್‌ಗೆ ಸಾಗಿಸಬೇಕಿದ್ದ ಬಾಗಲಕೋಟೆ ಜಿಲ್ಲೆ ಮುಧೋಳದ ಕಾರ್ಖಾನೆಯ ಸಕ್ಕರೆಯನ್ನು ಮಾರ್ಗ ಮಧ್ಯೆಯೇ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದ ಲಾರಿ ಚಾಲಕ ಹಾಗೂ ಕ್ಲೀನರ್‌ ನನ್ನು ಮುಧೋಳ ಪೊಲೀಸರು ಬಂಧಿಸಿದ್ದು, ಸಕ್ಕರೆ ಮಾರಾಟದಿಂದ ಬಂದ ₹90 ಸಾವಿರ ನಗದು ಹಾಗೂ ಆ ಹಣದಲ್ಲಿ ಖರೀದಿಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ರಾಜಸ್ಥಾನ ಮೂಲದ ದನ್ನುರಾಮ ದೇವಾಸಿ (27) ಹಾಗೂ ಗುಲಾಬಸಿಂಗ್ ರಜಪೂತ ಬಂಧಿತರು.

ನಡೆದಿದ್ದೇನು? :

2025ರ ನವೆಂಬರ್ 11ರಂದು ನಗರದ ಕಾರ್ಖಾನೆಯಲ್ಲಿನ ಸಕ್ಕರೆಯನ್ನು ಗುಜರಾತ್‌ನ ಅಹ್ಮದಾಬಾದ್‌ಗೆ ಸಾಗಿಸಲು ₹12,74,332 ಮೌಲ್ಯದ 50 ಕೆಜಿಯ 620 ಸಕ್ಕರೆ ಬ್ಯಾಗ್‌ಗಳನ್ನು ಲಾರಿಯಲ್ಲಿ ಲೋಡ್‌ ಮಾಡಿ ಕಳಿಸಲಾಗಿತ್ತು. ಆದರೆ ಲಾರಿ ಚಾಲಕ ಹಾಗೂ ಕ್ಲೀನರ್‌ ಸಕ್ಕರೆಯನ್ನು ಗುಜರಾತ್‌ಗೆ ಸಾಗಿಸದೆ ಮಾರ್ಗಮಧ್ಯೆ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ‌ದ ಕೆಲ ಕಡೆಗಳಲ್ಲಿ ಸಂತೆಯಲ್ಲಿ ₹12.50 ಲಕ್ಷಕ್ಕೆ ಸಕ್ಕರೆ ಮಾರಾಟ‌ ಮಾಡಿ ಪರಾರಿಯಾಗಿದ್ದರು. ಈ ಕುರಿತು ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಬೆಟ್ಟಜೇವರ್ಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲಿಂದ ಪ್ರಕರಣ ಮುಧೋಳ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಮುಧೋಳ‌ ಪೊಲೀಸರು ಸಕ್ಕರೆ ಕಳ್ಳರನ್ನು ಬಲೆಗೆ ಕೆಡವಿದ್ದಾರೆ.

ಮುಧೋಳ ಪೊಲೀಸರ ಕಾರ್ಯಕ್ಕೆ‌ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಸಯ್ಯದ್ ರೋಷನ್ ಜಮೀರ್‌ ಪ್ರಕರಣ ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್ಐಗಳಾದ ಅಜಿತಕುಮಾರ ಹೊಸಮನಿ, ಪಿ.ಎಸ್. ಮುರನಾಳ ಹಾಗೂ ಪೊಲೀಸ್ ಸಿಬ್ಬಂದಿ‌ ಆರ್.ಬಿ. ಕಟಗೇರಿ, ಕೆ.ಎನ್. ಬುದ್ನಿ, ಬೀರಪ್ಪ ಕುರಿ, ಹನುಮಂತ ಮಾದರ, ದಾದಾಪೀರ್‌ ಅತ್ರಾವತ, ಮಾರುತಿ ದಳವಾಯಿ, ರವೀಂದ್ರ ತಳವಾರ, ಶ್ರೀಕಾಂತ ಬೆನಕಟ್ಟಿ, ಎಸ್.ಎನ್.ಬದ್ರಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ.