ಸಾರಾಂಶ
ಕಾರವಾರ:
ಯುವಪೀಳಿಗೆಯು ಮೊಬೈಲ್ ಎಂಬ ಮಾಯಾಜಾಲದಲ್ಲಿ ಮುಳುಗಿ ಹೋಗುತ್ತಿರುವುದು ಅತ್ಯಂತ ಕಳವಳ ಸಂಗತಿಯಾಗಿದೆ. ಯುವಜನೋತ್ಸವ ಕಾರ್ಯಕ್ರಮದ ಮೂಲಕ ಅವರಿಗೆ ನಮ್ಮ ಕಲೆ, ಸಂಸ್ಕೃತಿ ಪರಿಚಯಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಹೇಳಿದರು.ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಜನತೆ ಮೊಬೈಲ್, ಟಿವಿ ಹಾಗೂ ಅಂತರ್ಜಾಲದಲ್ಲಿ ಮುಳುಗಿ ಹೋಗುತ್ತಿದ್ದಾರೆ. ಅವರಿಗೆ ನಮ್ಮ ನಾಡಿನ ಕಲೆ, ಸಂಗೀತ, ನಾಟಕ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯುವಜನೋತ್ಸವದಂತಹ ಕಾರ್ಯಕ್ರಮ ಅಗತ್ಯವಾಗಿದೆ. ಯುವಕರು ಶಿಕ್ಷಣದ ಜತೆಯಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಉತ್ತಮ ನಡವಳಿಕೆ, ಕೌಶಲ್ಯ ಮತ್ತು ಜ್ಞಾನ ಹೆಚ್ಚಾಗುತ್ತದೆ ಎಂದರು.ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ ಮಾತನಾಡಿ, ಯುವ ಜನತೆಗಾಗಿ ಸರ್ಕಾರವು ಅನೇಕ ಬಗೆಯ ಕಾರ್ಯಕ್ರಮ ಆಯೋಜಿಸುತ್ತಿದೆ. ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ನಗರಸಭೆ ಉದ್ಯಾನವನದಲ್ಲಿ ಪುಸ್ತಕ ಪ್ರಿಯರಿಗೆ ಪತ್ರಿ ಭಾನುವಾರ ಬೆಳಗ್ಗೆ 9ರಿಂದ 11 ಗಂಟೆ ವರೆಗೆ ಕಾರವಾರ ರೀಡ್ಸ್ ಎಂಬ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಯುವಜನತೆ ಪಾಲ್ಗೊಳ್ಳುವಂತೆ ಹೇಳಿದರು.ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲೆ ಗೀತಾ ವಾಲೇಕರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹುದುಗಿರುವ ಕೌಶಲ್ಯವನ್ನು ಪ್ರದರ್ಶಿಸಲು ಯುವಜನೋತ್ಸವ ಸೂಕ್ತ ವೇದಿಕೆವಾಗಿದೆ. ವಿವಿಧೆತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದಾಗಿದೆ. ಇಂದು ಇಲ್ಲಿ ವಿವಿಧ ಕೌಶಲ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ನೆಹರು ಯುವ ಕೇಂದ್ರದ ಸಂಘಟಕ ಲೋಕೇಶ ಕುಮಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ ಮುಂತಾದವರು ಇದ್ದರು.