ಸಾರಾಂಶ
ಹೊನ್ನಾವರ: ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ ೨೧ ದಿನಗಳ ಪರಿಚಯಾತ್ಮಕ ಯಕ್ಷಗಾನ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಶ್ರೀಮಯ ಯಕ್ಷಗಾನ ಕಲಾಕೇಂದ್ರ ಕೆರೆಮನೆ - ಗುಣವಂತೆ ಇಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಕಾರವಾರ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಮಾತನಾಡಿ, ತಮ್ಮ ಬಾಲ್ಯ ಜೀವನದಲ್ಲಿ ಯಕ್ಷಗಾನ ನೋಡಿದ ಅನುಭವ ಹಂಚಿಕೊಂಡರು. ಕೆರೆಮನೆ ಮೇಳ ಯಕ್ಷಗಾನಕ್ಕೆ ನೀಡುತ್ತಿರುವ ಸೇವೆಯನ್ನು ಮತ್ತು ಕೆರಮನೆ ಕಲಾವಿದರ ಕಲಾ ಶ್ರೇಷ್ಠತೆ ಸ್ಮರಿಸಿದರು.
ಹಿರಿಯರು ಯಕ್ಷಗಾನ ನೋಡಲು ತಮ್ಮ ಜೊತೆಗೆ ಕಿರಿಯರ ಮತ್ತು ಯುವಕರನ್ನು ಕರೆ ತನ್ನಿ ಎಂದು ಈ ಸಮಯದಲ್ಲಿ ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಗರಾಜ ಹೆಗಡೆ - ಅಪಗಾಲ ಮಾತನಾಡಿ, ಸಾಂಸ್ಕೃತಿಕ ವಿನಮಯ ಮತ್ತು ಸಂಸ್ಕೃತಿಗಳ ವಿನಮಯದಿಂದ ಮಾತ್ರವೇ ಜಾಗತೀಕರಣ ಯಶಸ್ವಿಯಾಗಲು ಸಾಧ್ಯ. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಕಾರ್ಯಕ್ರಮವನ್ನು ಈ ಸಮಯದಲ್ಲಿ ನೆನೆದರು. ಕೆರೆಮನೆ ಮೇಳದ ನಾಲ್ಕು ತಲೆಮಾರು ಯಕ್ಷಗಾನ ಸೇವೆಯಲ್ಲಿ ಇಂದು ನಿರತವಾಗಿರುವುದು ಸಂತಸದ ಸಂಗತಿ.ಭಾರತದ ಕಲೆಗಳಿಗೆ ಒಂದು ಅಂತರ್-ಸಂಬಂಧವಿದೆ. ಈ ರೀತಿಯ ತರಬೇತಿ ಸಾಂಸ್ಕೃತಿಕ ವಿನಿಮಯಕ್ಕೆ ಮತ್ತು ಕಲೆಯ ಸಂಬಂಧ ಇನ್ನು ಗಟ್ಟಿಯಾಗಲು ಕಾರಣವಾಗಲಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಬಾಲಚಂದ್ರ ಗೌಡ ಮುಗಳಿ ಮಾತನಾಡಿ, ಯಕ್ಷಗಾನ ಕಲೆಯ ಬೆಳವಣಿಗೆ ಕೆರೆಮನೆ ಮೇಳ ವಿಶೇಷ ಕೊಡುಗೆ ನೀಡಿದೆ ಎಂದರು. ನಂತರ ದೇಶದ ವಿವಿಧ ಕಡೆಗಳಿಂದ ಆಗಮಿಸಿದ ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಸ್ವಾಗತಿಸಿ, ವಂದಿಸಿದರು. ಮಹೇಶ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಕಾರ್ಯಾಗಾರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಪೂರ್ವರಂಗ, ಪ್ರಯಾಣ, ತೆರೆ ಒಡ್ಡೋಲಗ ಪ್ರದರ್ಶನ ಸೇರಿದ ಜನರ ಮನಸೂರೆಗೊಂಡಿತು.