ಸಾರಾಂಶ
ಪಟ್ಟಣದ ವಿಜಯಪುರ ರಸ್ತೆಯ ಈರಕಾರ ಮುತ್ಯಾ ದೇವಸ್ಥಾನದ ಈರಕಾರ ಮುತ್ಯಾರ ಜಡಿ ತೊಳೆಯುವ ಕಾರ್ಯಕ್ರಮ ಹಾಗೂ ಜಾತ್ರಾಮಹೋತ್ಸವ ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಭಕ್ತಿ ಭಾವದೊಂದಿಗೆ ಜರುಗಿತು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ವಿಜಯಪುರ ರಸ್ತೆಯ ಈರಕಾರ ಮುತ್ಯಾ ದೇವಸ್ಥಾನದ ಈರಕಾರ ಮುತ್ಯಾರ ಜಡಿ ತೊಳೆಯುವ ಕಾರ್ಯಕ್ರಮ ಹಾಗೂ ಜಾತ್ರಾಮಹೋತ್ಸವ ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಭಕ್ತಿ ಭಾವದೊಂದಿಗೆ ಜರುಗಿತು.ಜಾತ್ರಾಮಹೋತ್ಸವದಲ್ಲಿ ಡೊಳ್ಳುವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಶಿವಪ್ಪ ಈರಕಾರ ಮುತ್ಯಾರ ದೇವರಮನಿಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೆರವಣಿಗೆ ಬಳಿಕ ಬಸವ ತೀರ್ಥ ಬಾವಿಗೆ ತೆರಳಿದ್ದು, ಅಲ್ಲಿ ಗಂಗಸ್ಥಳ ಪೂಜೆ ನೆರವೇರಿಸಲಾಯಿತು. ನಂತರ ಮೂಲನಂದೀಶ್ವರ ದೇವರ ದರ್ಶನ ಪಡೆದು ಬಸವೇಶ್ವರರ ಭಾವಚಿತ್ರದೊಂದಿಗೆ ಸಂಜೆ ಮುತ್ಯಾರ ದೇವಸ್ಥಾನಕ್ಕೆ ತಲುಪಿತು.ಪಟ್ಟಣದ ಶಿವಪ್ಪ ಮುತ್ಯಾರ ದೇವರಮನಿಯಿಂದ ಸೋಮವಾರ ಸಂಪ್ರದಾಯದಂತೆ ಶಿವಾನಂದ ಈರಕಾರ ಮುತ್ಯಾರನ್ನು ಡೊಳ್ಳಿನ ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಈರಕಾರ ಮುತ್ಯಾರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಈ ವರ್ಷದ ಮಳೆ-ಬೆಳೆ ಕುರಿತಾಗಿ ಹೇಳಿಕೆಗಳನ್ನು ನುಡಿದರು.ಮಳೆ-ಬೆಳೆ ಕುರಿತು ಮುತ್ಯಾರ ಭವಿಷ್ಯ:
ತುರ್ತು ರೋಹಿಣಿ ಮಿರಗಾ ಮಂಡಿ ಕಟ್ಟಿಸಿನಿ, ಪುಷ್ಯ, ಪುನರ್ವಸು ಮಳಿಗೆ ಕುರಗಿ ಕಡಿಯಾಕ ಆಯಿತು, ಮುಂಗಾರಿ ಹತ್ತು ಕಾಳಿನಲ್ಲಿ ಸಜ್ಜಿ ಬೇಳಿ ಕಟ್ಗೆ ವಕ್ಕಳ ಆಯಿತು, ಆಶ್ಲೇಷ ಮಳಿ ಆಸರಾಯಿತು, ಮಗಿ ಮಳಿ ಸೋಸಿ ನೋಡದರೊಳಗ ಒಂದು ಮೂಲಿ ಉಳಿಯಿತು, ಹಿಂಗಾರಿ ಮಳಿ ಹುಬ್ಬಿ ಉತ್ತರಿ ಮಳಿಗಿ ಮಂಡಿ ಕಟ್ಟೀಸಿನಿ, ಹತ್ತು ಕಾಳಿನಲ್ಲಿ ಬಿಳಿಕಾಳು ಮೇಲು, ಗೋಧಿ, ಕುಸಬಿ, ಕಡಲಿ ಜೋಳದ ಬೆನ್ನು ಹತ್ಯಾವ, ಹಸ್ತ, ಚಿತ್ತಿ ಮಳಿ ಒಕ್ಕಲಿಗ್ಯಾಗ ಹಸ್ತಾಗ ಹಾಲ ಹಾಕಿನಿ, ಸ್ವಾತಿ ಮಳಿ ಸೋಸಿ ನೋಡುವದರೊಳಗ ಒಂದು ಮೂಲಿ ಉಳಿಯಿತು, ಹತ್ತಿ ಸಾಲಾಗ ಹಮಿಣಿ ಒಗದಿನಿ......ಎಂದು ಶಿವಾನಂದ ಈರಕಾರ ಮುತ್ಯಾ ಈ ವರ್ಷದ ಮಳೆ-ಬೆಳೆ ಕುರಿತಾದ ಭವಿಷ್ಯ ನುಡಿದರು.ಜಾತ್ರಾಮಹೋತ್ಸವದಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಜನತೆ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪ್ರಸಾದ ಸ್ವೀಕರಿಸಿದರು. ಜಾತ್ರಾಮಹೋತ್ಸವದಲ್ಲಿ ಬಸವರಾಜ ಹಾರಿವಾಳ, ನಿಂಗಪ್ಪ ಜೈನಾಪುರ, ಶರಣಪ್ಪ ನಾಡಗೌಡ, ಪಾವಡೆಪ್ಪ ಕೊಂಡಗುಳಿ, ಆನಂದ ಇಲ್ಯಾಳ, ಅಪ್ಪಾಸಾಹೇಬ ದೇಸಾಯಿ, ಸಂಗಯ್ಯ ಒಡೆಯರ, ಮುರಗೆಪ್ಪ ಪೂಜಾರಿ, ಮಲ್ಲಪ್ಪ ಅಡಗಿಮನಿ, ಬಸವರಾಜ ಹೆರಕಲ್, ಯಲ್ಲಪ್ಪ ಗುಂಡಿ, ಸಂಗಪ್ಪ ಡಂಬಳ, ಸುರೇಶ ಹಾರಿವಾಳ, ಸಂತೋಷ ಕೂಡಗಿ, ಜಗದೀಶ ನಿಕ್ಕಂ, ಬಾಬು ಕುಂಟೋಜಿ, ಗಿರೀಶ ಹಾರಿವಾಳ, ಮಲಕಾಜಿ ಕುಳಗೇರಿ ಇತರರು ಭಾಗವಹಿಸಿದ್ದರು.