ಕನ್ನಡಪ್ರಭ ವಾರ್ತೆ ಬೆಂಗಳೂರು

ಇಸ್ರೇಲ್‌-ಇರಾನ್ ಯುದ್ಧದ ಪರಿಣಾಮ ರಾಜ್ಯದಲ್ಲೂ ಉಂಟಾಗಿದ್ದು ಅಡುಗೆ ಅನಿಲ ಮತ್ತು ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗುತ್ತಿದ್ದು, ಜನರ ಮೇಲೆ ಬೆಲೆ ಏರಿಕೆ ಹೊರೆ ಬಿದ್ದಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿನ ಬಿಗುವಿನ ವಾತಾವರಣದಿಂದಾಗಿ ವಿಮಾನ, ಹಡಗುಗಳ ಮೂಲಕ ಸಾಗಿಸಲಾಗುವ ಹಲವು ಸರಕುಗಳ ಸಾಗಣೆ ಸ್ಥಗಿತಗೊಂಡಿದೆ. ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಾಗಿರುವ ವ್ಯತ್ಯಯದಿಂದಾಗಿ ಇಂಡೇನ್‌ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ರಿಯಾಯಿತಿ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಏಜೆನ್ಸಿಯೊಂದು ಪ್ರಕಟಣೆ ಹೊರಡಿಸಿದ್ದು, ಇಂಡಿಯನ್‌ ಆಯಿಲ್‌ ಸಂಸ್ಥೆ ನಿರ್ದೇಶನದಂತೆ 19 ಕೆಜಿ ಮತ್ತು 47.5 ಕೆಜಿಯ ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಮುಂದಿನ ಸೂಚನೆವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ಕ್ರಮದಿಂದಾಗಿ ಹೋಟೆಲ್‌ಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಎಣ್ಣೆಯ ಸರಬರಾಜಿನಲ್ಲಿ ವ್ಯತ್ಯವಾಗಿರುವ ಕಾರಣ ಕಳೆದೊಂದು ವಾರದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಸದ್ಯ ಪ್ರತಿ ಲೀಟರ್‌ ಅಡುಗೆ ಎಣ್ಣೆ 6ರಿಂದ 10 ರು. ಹೆಚ್ಚಳವಾಗಿದೆ. ಹೀಗೆಯೇ ಮುಂದುವರಿದರೆ ಮುಂದಿನ ವಾರ 15 ರು.ವರೆಗೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

358 ಮಂದಿ ವಾಪಸ್‌:


ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದ ದುಬೈ ಸೇರಿ ಇನ್ನಿತರ ನಗರಗಳಲ್ಲಿ ಸಿಲುಕಿದ್ದವರು ಇದೀಗ ಹಂತ ಹಂತವಾಗಿ ವಾಪಸಾಗುತ್ತಿದ್ದಾರೆ. ಗುರುವಾರ ದುಬೈನಿಂದ 358 ಮಂದಿ ಎಮಿರೇಟ್ಸ್‌ ವಿಮಾನದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿದ್ದು, 203 ಮಂದಿ ಬೆಂಗಳೂರಿನಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

ದುಬೈ, ಅಬುಧಾಬಿ, ದೋಹಾ ಸೇರಿದಂತೆ ಮತ್ತಿತರ ನಗರಗಳಿಗೆ ವಿಮಾನ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಅನುಮತಿ ಇಲ್ಲದ ಕಾರಣ ಗುರುವಾರ 30 ವಿಮಾನಗಳ ಸೇವೆ ರದ್ದಾಗಿದೆ. ಅದರಲ್ಲಿ 14 ಬರುವ ಮತ್ತು 16 ತೆರಳುವ ವಿಮಾನಗಳಾಗಿವೆ.