ಸಾರಾಂಶ
ಧಾರವಾಡ: ಮುಖ್ಯಮಂತ್ರಿ ಅಂತಹ ರಾಜ್ಯದ ಉನ್ನತ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಮನಸ್ಸು ಮಾಡಿದ್ದರೆ 14 ನಿವೇಶನ ಮಾಡಿಕೊಳ್ಳುವುದು ಅವರಿಗೆ ದೊಡ್ಡ ವಿಷಯವೇ? ಮುಡಾ ಪ್ರಕರಣದಲ್ಲಿ ಅವರ ಪಾತ್ರ ಏನೂ ಇಲ್ಲ. ಹೀಗಾಗಿ ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ಪ್ರಾಸಿಕ್ಯೂಶನ್ದಿಂದ ಅವರು ಮುಕ್ತರಾಗುತ್ತಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ, ತಂತ್ರಜ್ಞಾನ ಸಚಿವ ಎಸ್.ಎಸ್. ಬೋಸರಾಜು ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಹಿತಾಸಕ್ತಿಗೋಸ್ಕರ ನಿವೇಶನ ಪಡೆಯಬೇಕಿದ್ದರೆ ಗಡಿಬಿಡಿಯಲ್ಲಿ ಪಡೆಯುತ್ತಿದ್ದರು. ಬಿಜೆಪಿ ಅಧಿಕಾರದ ಸಮಯದಲ್ಲಿಯೇ ಪಡೆದಿರುವ ಸೈಟ್ಗಳಾಗಿದ್ದು, ಇಷ್ಟೊಂದು ವರ್ಷಗಳ ನಂತರ ಬಿಜೆಪಿ ಸಿದ್ದರಾಮಯ್ಯನವರ ಮೇಲೆ ಮಾಡುತ್ತಿರುವ ಆರೋಪ ತಪ್ಪು ಎಂದು ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿ ಸ್ಥಾನದ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರ ಹೇಳಿಕೆಗೆ, ಅವರು ಪಕ್ಷದ ಹಿರಿಯರು. 8 ಬಾರಿ ಶಾಸಕರಾದವರು. ಪಕ್ಷದಲ್ಲಿ ನಾನು ಹಿರಿಯ. ಮಂತ್ರಿಯಾಗಿ ಬಹಳ ದಣಿದುಕೊಂಡಿದ್ದೀನಿ. ಸಿದ್ದರಾಮಯ್ಯನವರು ಹೇಳಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ ಹೊರತು ಮುಖ್ಯಮಂತ್ರಿಗಳ ಬಗ್ಗೆ ಯಾರೂ ಅಪಸ್ವರ ಎತ್ತಿಲ್ಲ. ಇಲ್ಲಿ ಮುಖ್ಯಮಂತ್ರಿ ಆಗಬೇಕೆಂಬ ಆಶಯ ಯಾರೂ ವ್ಯಕ್ತಪಡಿಸಿಲ್ಲ. ಪ್ರಸ್ತುತವಾಗಿ ಸಿದ್ದರಾಮಯ್ಯ ಆ ಸ್ಥಾನದಲ್ಲಿದ್ದು 136 ಶಾಸಕರು ಅವರ ಪರವಾಗಿದ್ದಾರೆ. ಜತೆಗೆ ಅವರ ಪರವಾಗಿ ಹೈಕಮಾಂಡ್ ಸಹ ಇದೆ. ಹೀಗಾಗಿ ಇನ್ನೊಬ್ಬರು ಮುಖ್ಯಮಂತ್ರಿ ಆಗುವುದು ಈಗ ಅಪ್ರಸ್ತುತ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ಆರಂಭಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಎಸ್. ಬೋಸರಾಜು ಹೇಳಿದರು. ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಈ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ 24 ಎಕರೆ ಜಾಗ ಇದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು. ತಾರಾಲಯ ಸ್ಥಾಪನೆಗೆ ₹ 9 ಕೋಟಿ ಬಿಡುಗಡೆ ಆಗಿದೆ ಎಂದರು. ಕೇರಳ ಮತ್ತು ಗುಜರಾತ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಸೈನ್ಸ್ ಸಿಟಿ ಸ್ಥಾಪನೆ ಮಾಡಲಾಗುತ್ತಿದ್ದು, ₹ 200 ಕೋಟಿ ವೆಚ್ಚದಲ್ಲಿ ಸೈನ್ಸ್ ಸಿಟಿ ಸ್ಥಾಪಿಸಲಾಗುವುದು ಎಂದರು.