ಸಾರಾಂಶ
ಹೇಳೋರೋ, ಕೇಳೋರು ಯಾರೂ ಇಲ್ಲ ಈ ಜಿಲ್ಲೆಯಲ್ಲಿ. ಎರಡೂವರೆ ಲಕ್ಷ ಪಾಸ್ ಯಾಕೆ ಕೊಟ್ಟಿದ್ದೀರಾ! ದೇವಸ್ಥಾನವೇನು ಡಿಸಿ ಮನೆ ಆಸ್ತಿನಾ..ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಮ್ಮ ಸಿಟ್ಟನ್ನು ಹೊರ ಹಾಕಿದಲ್ಲದೇ ಬೇಸರ ವ್ಯಕ್ತಪಡಿಸಿದರು.
ಹಾಸನ : ಹೇಳೋರೋ, ಕೇಳೋರು ಯಾರೂ ಇಲ್ಲ ಈ ಜಿಲ್ಲೆಯಲ್ಲಿ. ಎರಡೂವರೆ ಲಕ್ಷ ಪಾಸ್ ಯಾಕೆ ಕೊಟ್ಟಿದ್ದೀರಾ! ದೇವಸ್ಥಾನವೇನು ಡಿಸಿ ಮನೆ ಆಸ್ತಿನಾ..ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಮ್ಮ ಸಿಟ್ಟನ್ನು ಹೊರ ಹಾಕಿದಲ್ಲದೇ ಬೇಸರ ವ್ಯಕ್ತಪಡಿಸಿದರು.
ಹಾಸನಾಂಬೆ ದರ್ಶನ ನಂತರ ಟಿಕೆಟ್ ಕೈಲಿ ಹಿಡಿದುಕೊಂಡು ದೇವಾಲಯದ ಹೊರಗೆ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಎಸಿ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಾವ್ಯಾರು ಪಾಸುಗಳನ್ನು ಮಾಡಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಲ್ಲ. ಡಿಸಿ ಕಚೇರಿ ಸಿಬ್ಬಂದಿ ಶಶಿಯವರನ್ನು ನೂಕಿದರು ಅಂತ ಒಬ್ಬ ಪೊಲೀಸ್ ಅಧಿಕಾರಿ ಮೇಲೆ ಹರಿಹಾಯ್ದಿದ್ದಾರೆ. ದಿನ ಎರಡು ಜೀಪ್ ಇಟ್ಕಂಡು ಜನ ಕರೆದುಕೊಂಡು ಬರಲು ಅವನ್ಯಾರ್ರಿ ಶಶಿ? ನಾವೇನಾದರೂ ಪಾಸು ಕೊಡಿ ಅಂತ ಕೇಳಿದ್ವಾ! ಯಾರನ್ನು ಕೇಳಿ ಪಾಸು ಮಾಡಿದ್ದಾರೆ ಎಂದು ಹರಿಹಾಯ್ದರು.
ಶಾಸಕರಿಗೂ ಬೆಲೆ ಇಲ್ಲ: ಒಬ್ಬ ಪೊಲೀಸ್ ಆಫೀಸರ್ಗೆ ಈ ಹಾಸನಾಂಬ ನನ್ನದು ನನ್ನ ಕೇಳದೆ ಯಾರನ್ನು ಒಳಗಡೆ ಬಿಡಬಾರದು ಅಂತ ಹೇಳಿದ್ಧಾರೆ. ಹಾಸನಾಂಬೆ ಜಿಲ್ಲಾಧಿಕಾರಿಗಳ ಆಸ್ತಿ ಎಂದು ವೈರಲ್ ಆಗಿದೆ. ನನ್ನ ಅಪ್ಪಣೆ ಇಲ್ಲದೆ ಯಾರನ್ನು ಬಿಡಬಾರದು. ವಿರೋಧ ಪಕ್ಷದವರು ರಾಜಕೀಯದವರನ್ನು ಬಿಡಬಾರದು ಎನ್ನುವ ಭಾವನೆ. ಇನ್ನೊಬ್ಬ ಕಂದಾಯ ಇಲಾಖೆ ಅಧಿಕಾರಿ ಮುಸಲ್ಮಾನ್ ಸಮಾಜದ ಅಧಿಕಾರಿಯನ್ನು ಜನರನ್ನು ಬಿಡುತ್ತಿದ್ದೀಯಾ ಎಂದು ನೂಕಿ ಹೊಡೆದ್ದಿದ್ದಾರೆ. ಅಲ್ಪಸಂಖ್ಯಾತರಿಗೆ ಯಾವ ರೀತಿ ರಕ್ಷಣೆ ಇದೆ ಈ ಜಿಲ್ಲೆಯ ಒಳಗೆ. ಅವನಿಂದ ದೂರು ತೆಗೆದುಕೊಳ್ಳಬೇಕು. ನಮ್ಮ ತೋಟದ ಹುಡುಗರು ಪಾಸ್ ಪಡೆದು ಬಂದಿದ್ದರು. ಆರು ಗಂಟೆ ಕಾಯ್ದರು, ಫೋನ್ ಕೊಡು ಎಎಸ್ಪಿಗೆ ಎಂದರೂ ನನ್ನ ಫೋನ್ ಪಡೆಯಲಿಲ್ಲ. ಒಂದು ಕಡೆ ಎಸ್ಪಿ, ಇನ್ನೊಂದು ಕಡೆ ಡಿಸಿ. ಶಾಸಕ ಹುಲ್ಲಹಳ್ಳಿ ಸುರೇಶ್, ಯಾವ ಶಾಸಕರಿಗೂ ಬೆಲೆ ಇಲ್ಲ. ಪೊಲೀಸರೋ ಎರಡು ಜೀಪ್ನಲ್ಲಿ ಅವರು ಕರೆದುಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ನಾಲ್ಕು ಜೀಪ್ನಲ್ಲಿ ಐಬಿಯಿಂದ ಕರೆದುಕೊಂಡು ಬರುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿಗಳಿಗೆ ಹೇಳಿ ಸಸ್ಪೆಂಡ್ ಮಾಡಿಸ್ತೀನಿ ಅಂತ ಡಿಸಿ ಪೊಲೀಸ್ ಅಧಿಕಾರಿಗೆ ಹೇಳಿದ್ದಾರೆ. ಮುಖ್ಯ ಕಾರ್ಯದರ್ಶಿಗಳೇ ನಿಮಗೆ ಧಮ್ ಇದ್ದರೆ ಮಾಡಿ ಎಂದು ಸವಾಲು ಹಾಕಿದರು. ಜಿಲ್ಲಾಧಿಕಾರಿಗಳು ಹಾಸನಾಂಬೆ ಅವ್ಯವಸ್ಥೆ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ಮಾಡಬೇಕು. ವಿಶೇಷ ಪಾಸ್ ಅಂತ ಕೊಟ್ಟು ಎಂಎಲ್ಎಗಳ ಗೌರವವನ್ನು ಗಾಳಿಗೆ ತೂರಿದ್ದಾರೆ. ನಾವೇನಾದರೂ ಇವರನ್ನು ಪಾಸ್ ಕೇಳಲು ಹೋಗಿದ್ದೀವಾ ಎಂದರು.
ನಾನು ಟಿಕೆಟ್ ತಗೊಂಡು ದರ್ಶನ ಮಾಡಿದ್ದೇನೆ. ದೇವಸ್ಥಾನ ಅಮ್ಮನದ್ದಲ್ವಾ. ಪಾಸ್ಗಳನ್ನು ಮಾಡಲು ಯಾರು ಅಧಿಕಾರ ಕೊಟ್ಟರು ಎಂದು ಪ್ರಶ್ನೆ ಮಾಡಿದರು. ದಿನಕ್ಕೆ ಎಷ್ಟು ಪ್ರೋಟೋಕಾಲ್ ವಾಹನ ಬಿಟ್ಟಿದ್ದಾರೆ. ಯಾರನ್ನು ಪ್ರೋಟೋಕಾಲ್ ಎಂದು ತೀರ್ಮಾನ ಮಾಡಿದ್ದೀರಿ. ನಾವೆಲ್ಲ ಹೆದರಿ ಓಡಿ ಹೋಗ್ತೇವೆ ಎಂದು ಈ ಜಿಲ್ಲಾಧಿಕಾರಿ ತಿಳಿದುಕೊಂಡಿದ್ದಾರೆ. ನನ್ನ ಜೀವನದಲ್ಲಿ ಇಂತಹ ಡಿಸಿಗಳನ್ನು ಎಷ್ಟು ಜನ ನೋಡಿದ್ದೀನಿ. ನಂದು ದೇವಸ್ಥಾನ ಅಪ್ಪಣೆ ಇಲ್ಲದೆ ಬರಂಗಿಲ್ಲ ಎಂದರೆ ನಾನೇಕೆ ಬರಲಿ, ಅದಕ್ಕೆ ಟಿಕೆಟ್ ತಗೊಂಡು ಬಂದಿದ್ದೀನಿ. ನಾನು ಶಾಸಕ, ಮಾಜಿ ಸಚಿವ ಎಂದು ಬಂದಿಲ್ಲ, ಭಕ್ತನಾಗಿ ಹಾಸನಾಂಬೆ ತಾಯಿ ಪೂಜೆಗಾಗಿ ಬಂದಿದ್ದೀನಿ. ಈ ಜಿಲ್ಲೆಯಲ್ಲಿ ಏನೇನು ನಡೆಸುತ್ತಿದ್ದಾರೆ ಎಂಬ ಬಗ್ಗೆ ಸಮಗ್ರವಾಗಿ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತೇನೆ. ಅವರಿಗೆ ತಾಕತ್ ಇದ್ದರೆ ಮುಖ್ಯ ಕಾರ್ಯದರ್ಶಿಗಳು ತನಿಖೆಗೆ ಆರ್ಡರ್ ಮಾಡ್ತಾರೆ. ಇಲ್ಲವಾದಲ್ಲಿ ಈ ಡಿಸಿಗೆ ಸೆರೆಂಡರ್ ಆಗವ್ರೆ ಅಂಥ ಚಾಲೆಂಜ್ ಮಾಡ್ತಿನಿ. ಮುಖ್ಯಕಾರ್ಯದರ್ಶಿಗಳು ಈ ಜಿಲ್ಲೆಯೊಳಗೆ ಇಂತಹ ಡಿಸಿ ಇಟ್ಟುಕೊಂಡಿದ್ದಾರೆ. ದೇವೇಗೌಡರು ನಲವತ್ತು ವರ್ಷ ರಾಜಕಾರಣ ಮಾಡಿರುವ ಜಿಲ್ಲೆ ಹಾಸನ ಜಿಲ್ಲೆ ನನ್ನದು, ನನ್ನತ್ವ ಎನ್ನುವ ಭಾವನೆಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ. ಹೇಳೋರೋ, ಕೇಳೋರು ಯಾರು ಇಲ್ಲ ಈ ಜಿಲ್ಲೆಯಲ್ಲಿ. ಎರಡುವರೆ ಲಕ್ಷ ಪಾಸ್ ಯಾಕೆ ಕೊಟ್ಟಿದ್ದೀರಾ! ಸ್ಥಳೀಯ ಎಂಎಲ್ಎಗೆ ಕೇಳಿದ್ದೀರಾ. ಸ್ಥಳಿಯ ಎಂಎಲ್ಎಗಳು ಎರಡೆರಡು ಕಿಲೋಮೀಟರ್ ನಡೆಯಬೇಕು ಹಾಗೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾರೋ ಪುಣ್ಯಾತ್ಮರು ಹೇಳ್ತಾರಲ್ಲಾ ನಾನು ನಾಲ್ಕೈದು ದಿನ ಪ್ರಚಾರಕ್ಕೆ ಹೋಗ್ತಿನಿ ಎಂದು. ಬಡವರ ಕೆಲಸ ಮಾಡುವುದರಲ್ಲಿ ಯಾರಾದರೂ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದ ಅವರು, ನಿಖಿಲ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದೀನಿ ಎಂದರು. ಜಿಲ್ಲಾಧಿಕಾರಿ ಹೇಳಿ ಸಿಎಂ ಅದೆಂತದೋ ಖಡ್ಗ ಪೂಜೆ ಮಾಡಿದ್ರು ಒಳ್ಳೆಯದು ಪಾಪ. ಅರ್ಚಕರನ್ನ ಕೇಳ್ದೆ, ಇಲ್ಲಾ ಸರ್ ಜಿಲ್ಲಾಧಿಕಾರಿಗಳು ಚೀಟಿ ಕೊಟ್ಟು ಮಾಡ್ಸಿದ್ರು ಅಂದ್ರು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ಇತರರು ಉಪಸ್ಥಿತರಿದ್ದರು.* ಬಾಕ್ಸ್: ನಿಖಿಲ್ ಕುಮಾರಸ್ವಾಮಿ ಗೆಲ್ತಾರೆ
ಚನ್ನಪಟ್ಟಣ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ನೂರಕ್ಕೆ ನೂರು ಗೆಲ್ಲುತ್ತಾರೆ. ಯಾರೇ ಹೋಗಿ ಪ್ರಚಾರ ಮಾಡಿದ್ರು ಗೆಲ್ತಾರೆ. ಆ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಇದೆ. ರಾಮನಗರ ಜಿಲ್ಲಾ ಕೇಂದ್ರ ಮಾಡಿದ್ದು ಯಾರು? ಅರವತ್ತು ವರ್ಷ ಆಳಿದ ಕಾಂಗ್ರೆಸ್ ಮಾಡಿದ್ದೆ. ೨೦೧೮ರಲ್ಲಿ ೪೫೦ ಕೋಟಿ ರು. ವೆಚ್ಚದಲ್ಲಿ ಎಲ್ಲಾ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಯಾರು. ಆರ್ಡರ್ ಕಾಪಿ ಕೋಡುತ್ತಿನಿ ಎಂದರು. ೧೨೦ ಕೋಟಿ ವೆಚ್ಚದಲ್ಲಿ ಎಂಜಿನಿಯರ್ ಕಾಲೇಜು, ಚನ್ನಪಟ್ಟಣಕ್ಕೆ ಏನು ಮಾಡವ್ರೆ ಎಂದು ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ರೇವಣ್ಣ ಸವಾಲು ಹಾಕಿದರು.