ದಾವಣಗೆರೆ: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡುವ ಬದಲು, ಪಕ್ಷಕ್ಕಾಗಿ ದುಡಿದ ಬೇರೆಯವರಿಗೆ ಅವಕಾಶ ನೀಡಲಿ ಎಂದು ಮುಸ್ಲಿಂ ಮುಖಂಡ ಮಹಮ್ಮದ್ ಸಿರಾಜ್ ಹೈಕಮಾಂಡ್‌ಗೆ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣ‍ ಕೈಬಿಟ್ಟು, ಪಕ್ಷಕ್ಕಾಗಿ ದುಡಿಯ ಬೇರೆಯವರಿಗೂ ‍ಅವಕಾಶ ನೀಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಜನ ನಿಷ್ಟಾವಂತ ಮುಖಂಡರಿದ್ದಾರೆ. ಅಂತಹವರ ಪರ ಕಾರ್ಯಕರ್ತರೆ ಟಿಕೆಟ್ ಕೇಳುವುದು, ಬೇಡಿಕೆ ಇಡುವುದು ತಪ್ಪೇ ಎಂದು ಮಾಜಿ ಮೇಯರ್ ಕೆ.ಚಮನ್ ಸಾಬ್ ಇತರರಿಗೆ ಪ್ರಶ್ನಿಸಿದರು.

ನಿಮ್ಮ ಅಭಿಪ್ರಾಯದಲ್ಲಿ ಇತರರಿಗೆ ಟಿಕೆಟ್ ಕೇಳುವುದು ತಪ್ಪು. ತಾವು ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುವುದಾಗಿ ಹೇಳಿದ್ದೀರಿ ಸರಿ. ಆದರೆ, ಒತ್ತಾಯ ಪೂರ್ವಕವಾಗಿ ಶಾಮನೂರು ಕುಟುಂಬಕ್ಕೆ ಎಂಬುದಾಗಿ ಹೇಳಿರುವುದು ತಪ್ಪು. ಅಲ್ಲದೇ, ಇದು ಕಾರ್ಯಕರ್ತರಿಗೂ ಮಾಡಿದ ಅವಮಾನವಾಗಿದೆ. ನಮ್ಮದೇ ಪಕ್ಷದಲ್ಲಿ ನಾವು ಟಿಕೆಟ್ ಕೇಳುವುದೇ ತಪ್ಪಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪ ಚುನಾವಣೆಗೆ ಟಿಕೆಟ್ ಕೇಳುವುದು ನಮ್ಮ ಹಕ್ಕು. ಹೈಕಮಾಂಡ್‌ಗೆ ನಾವು ಬೇಡಿಕೆ ಇಡುತ್ತೇವೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಮೇಲೆ ನಿಂತಿರುವುದು ಎಲ್ಲರಿಗೂ ಗೊತ್ತಿದೆ. ಈ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡಿ, ಮುಸ್ಲಿಂ ಸಮಾಜಕ್ಕೆ ಅವಕಾಶ ಮಾಡಿಕೊಡಲಿ ಎಂದರು.

ಮುಖಂಡರಾದ ಅಮ್ಜದ್‌ವುಲ್ಲಾ, ಶಹನವಾಜ್ ಖಾನ್, ಅಬ್ದುಲ್ ಘನಿ ತಾಹೀರ್, ಸೈಯದ್ ರಿಯಾಜ್, ಪಿ.ಖಾಸಿಂ ಸಾಬ್‌, ಸೈಯದ್ ಷಫೀ, ಇನಾಯತ್‌ವುಲ್ಲಾ ಖಾನ್, ಅಬ್ದುಲ್ ಜಬ್ಬಾರ್, ನೂರ್ ಅಹಮ್ಮದ್, ಮಕ್ಸೂದ್ ಇತರರು ಇದ್ದರು.