ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನ ಖರೀದಿ, ಪ್ರೆಟ್ರೋಲ್, ಡೀಸಲ್, ಅಡುಗೆ ಎಣ್ಣೆ ಮಿತ ಬಳಕೆಗೆ ಕರೆ ನೀಡಿರುವುದನ್ನು ನೋಡಿದರೆ ದೇಶ ಆರ್ಥಿಕವಾಗಿ ದಿವಾಳಿ ಹಂತ ತಲುಪಿದೆಯೇ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಪ್ರಶ್ನಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜನ ಸಾಮಾನ್ಯರಿಗೆ ಸರಳ ಜೀವನದ ಬಗ್ಗೆ ಕರೆ ನೀಡಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ಮುಖಂಡರು ಮೊದಲು ದುಬಾರಿ ಜೀವನ ತ್ಯಜಿಸಿ ಮಾದರಿಯಾಗಲಿ ಎಂದರು.
ಪ್ರಧಾನಿ ಮೋದಿ ಚಿನ್ನ ಖರೀದಿಸಬೇಡಿ, ಅಡುಗೆ ಎಣ್ಣೆ ಕಡಿಮೆ ಬಳಸಿ, ಪೆಟ್ರೋಲ್, ಡೀಸೆಲ್ ಮಿತಬಳಕೆ, ರಸಗೊಬ್ಬರ ಕಡಿಮೆ ಬಳಸಿ ಎಂದು ಕರೆ ನೀಡಿದ್ದಾರೆ. ಮೊದಲು ಅವರು ವಿದೇಶಿ ಪ್ರವಾಸ ಕಡಿಮೆ ಮಾಡಲಿ, ಲಕ್ಷಾಂತರ ಮೌಲ್ಯದ ದಿನಕ್ಕೊಂದು ಸೂಟು ಹಾಕುವುದನ್ನು ನಿಲ್ಲಿಸಲ್ಲಿ. ಅದನ್ನು ಬಿಡದೆ ಸರಳ ಜೀವನಕ್ಕೆ ಕರೆ ಕೊಡುವುದು ಮೂರ್ಖತನದ ಪರಮಾವಧಿ ಎಂದು ಟೀಕಿಸಿದರು.ಜನರಿಗೆ ಅಗತ್ಯ ಮೂಲ ಸೌಕರ್ಯ ನೀಡುವುದು ಎಲ್ಲ ಸರ್ಕಾರಗಳ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ಅದರಿಂದ ನುಣುಚಿಕೊಳ್ಳುವ ದೃಷ್ಟಿಯಿಂದ ಮತ್ತು ತಮ್ಮ ಆಡಳಿತದ ವೈಫಲ್ಯ ಮರೆಮಾಚಲು ಈ ಸರಳ ಜೀವನಕ್ಕೆ ಕರೆ ನೀಡಿದ್ದಾರೆ. ಮೊದಲು ಬಿಜೆಪಿ ಮುಖಂಡರು ತಮ್ಮಲ್ಲಿರುವ ಎಲ್ಲಾ ವಾಹನಗಳನ್ನು ಸ್ಥಗಿತ ಮಾಡಿ ಮಾದರಿಯಾಗಲಿ. ಕಾನೂನು ಗಳಿರುವುದು ಜನಸಾಮಾನ್ಯರಿಗೆ ಮಾತ್ರವಲ್ಲ. ಅದು ಎಲ್ಲರಿಗೂ ಅನ್ವಯಿಸಬೇಕು ಎಂದು ಹೇಳಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಇಂತಹ ಸರಳ ಜೀವನದ ಬಗ್ಗೆ ಕರೆ ನೀಡಿದ್ದರು ಎಂದು ಕೆಲ ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಕಥೆ ಕಟ್ಟುವುದರಲ್ಲಿ ಅವರು ನಿಸ್ಸೀಮರು ಎಂದು ಟೀಕಿಸಿದರು.
ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ನಂತರ ಶಾಸಕ ಟಿ.ಡಿರಾಜೇಗೌಡರ ಕಚೇರಿ ಮುಂದೆ ಇದ್ದಂತಹ ನಾಮಫಲಕವನ್ನು ಬಿಜೆಪಿ ಕಾರ್ಯಕರ್ತರು ಕಿತ್ತೆಸೆದಿದ್ದರು. ಕೂಡಲೇ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿಯಲ್ಲಿ ನಿಷ್ಠಾವಂತ ನಾಯಕರಾದ ಶೆಟ್ಟಿಗದ್ದೆ ರಾಮಸ್ವಾಮಿ ಮತ್ತು ಸತೀಶ್ ಅದ್ಡಡ ಮೇಲೆ ಕಾಂಗ್ರೆಸ್ಗೆ ಸಹಕಾರ ನೀಡಿರುವ ಆರೋಪ ಹೊರಿಸುವ ಮೂಲಕ ಜೀವರಾಜ್ 3ನೇ ದರ್ಜೆ ರಾಜಕಾರಣ ಮಾಡಿದ್ದಾರೆ ಎಂದು ದೂರಿದರು.ಕಾಂಗ್ರೆಸ್ ಮುಖಂಡರಾದ ಎಂ.ಡಿ.ರಮೇಶ್, ಹಿರೇಮಗಳೂರು ರಾಮಚಂದ್ರ, ಶಾಂತಕುಮಾರ್, ಸಂತೋಷ್ಲಕ್ಯಾ ಮತ್ತಿತರಿದ್ದರು.-- ಬಾಕ್ಸ್ --
ಅಧಿಕಾರಿಗಳು ಹಳ್ಳಿಗೆ ಹೋಗಿಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಅಭಾವ ಸೃಷ್ಟಿಯಾದ ಕೂಡಲೇ ಜಿಲ್ಲಾ ಪಂಚಾಯಿತಿ ಸಿಇಒ , ಜಿಲ್ಲಾಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹಿಸಬೇಕು. ಫ್ಯಾನ್ ಕೆಳಗೆ ಕುಳಿತುಕೊಂಡರೆ ಜನರ ಕಷ್ಟ ಸಮಸ್ಯೆ ಅರ್ಥವಾಗುವುದಿಲ್ಲ. ಎಲ್ಲ ಅಧಿಕಾರಿ ಗಳು ಹಳ್ಳಿಗಳಿಗೆ ಭೇಟಿ ನೀಡಬೇಕು ಎಂದು ದೇವರಾಜ್ ಆಗ್ರಹಿಸಿದ್ದಾರೆ.