2025ರಲ್ಲಿ ಗಗನಯಾನ ನೌಕೆಯಲ್ಲಿ ಹಣ್ಣಿನ ನೊಣಗಳ ಕಿಟ್‌ವೊಂದನ್ನು ಕಳುಹಿಸಲು ಇಸ್ರೋ ಸಿದ್ಧತೆ

| Published : Aug 27 2024, 01:40 AM IST / Updated: Aug 27 2024, 01:13 PM IST

2025ರಲ್ಲಿ ಗಗನಯಾನ ನೌಕೆಯಲ್ಲಿ ಹಣ್ಣಿನ ನೊಣಗಳ ಕಿಟ್‌ವೊಂದನ್ನು ಕಳುಹಿಸಲು ಇಸ್ರೋ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

2025ಕ್ಕೆ ಭಾರತವು ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ ನೌಕೆಯಲ್ಲಿ ಹಣ್ಣಿನ ನೊಣಗಳ ಕಿಟ್‌ವೊಂದನ್ನು ಕಳುಹಿಸಲಿದೆ. ದೇಶದ ವಿವಿಧ ಕೃಷಿ ವಿವಿಗಳ ಪೈಕಿ ಇಲ್ಲಿಯ ಕೃಷಿ ವಿವಿಯ ಬಯೋಟೆಕ್ನಾಲಜಿ ವಿಭಾಗವು ಸಿದ್ಧಪಡಿಸಿರುವ ಸುಮಾರು 20 ಹಣ್ಣಿನ ನೊಣಗಳ ಕಿಟ್ ಇದಕ್ಕೆ ಆಯ್ಕೆ ಆಗಿವೆ.

ಧಾರವಾಡ: ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಜಗತ್ತಿನಲ್ಲಿಯೇ ವಿಶೇಷ ಸ್ಥಾನ ಪಡೆದಿದೆ. ಇದೀಗ ಮುಂದುವರಿದ ಭಾಗವಾಗಿ ಧಾರವಾಡ ಕೃಷಿ ವಿವಿ ಸಂಶೋಧನೆ ಮಾಡಿದ ಡ್ರೊಸೊಫಿಲಾ ಮೆಲನೋಗ್ಯಾಸ್ಟರ್ ಎಂಬ ವೈಜ್ಞಾನಿಕ ಹೆಸರಿನ ನೊಣಗಳನ್ನು ಇಸ್ರೋ ಗಗನಕ್ಕೆ ಕಳುಹಿಸಲು ಸಿದ್ಧತೆ ನಡೆಸಿದೆ.

2025ಕ್ಕೆ ಭಾರತವು ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ ನೌಕೆಯಲ್ಲಿ ಹಣ್ಣಿನ ನೊಣಗಳ ಕಿಟ್‌ವೊಂದನ್ನು ಕಳಹಿಸಲಿದೆ. ದೇಶದ ವಿವಿಧ ಕೃಷಿ ವಿವಿಗಳ ಪೈಕಿ ಇಲ್ಲಿಯ ಕೃಷಿ ವಿವಿಯ ಬಯೋಟೆಕ್ನಾಲಜಿ ವಿಭಾಗವು ಸಿದ್ಧಪಡಿಸಿರುವ ಸುಮಾರು 20 ಹಣ್ಣಿನ ನೊಣಗಳ ಕಿಟ್ ಇದಕ್ಕೆ ಆಯ್ಕೆ ಆಗಿರುವುದು ವಿಶೇಷ.ಈ ಕುರಿತು ಕನ್ನಡಪ್ರಭ ಜತೆಗೆ ಮಾಹಿತಿ ಹಂಚಿಕೊಂಡ ಕೃಷಿ ವಿವಿ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ರವಿಕುಮಾರ ಹೊಸಮನಿ, ಸಾಮಾನ್ಯವಾಗಿ ಈ ಹಣ್ಣಿನ ನೊಣಗಳು ಶೇ.70ರಷ್ಟು ಮನುಷ್ಯನ ದೇಹ ರಚನೆ ಹೋಲುತ್ತವೆ. ಶೂನ್ಯ ಗುರುತ್ವದ ಬಾಹ್ಯಾಕಾಶದಲ್ಲಿ ನೌಕೆ ಸುತ್ತುವ ವೇಳೆಗೆ ದೇಹದಲ್ಲಿ ಉಂಟಾಗುವ ಬದಲಾವಣೆ ಬಗ್ಗೆ ಇಸ್ರೋಗೆ ಮಹತ್ವದ ಮಾಹಿತಿ ನೀಡಲಿವೆ. ಇದು ಭವಿಷ್ಯದಲ್ಲಿ ಮಾನವ ಸಹಿತ ಗಗನಯಾನಕ್ಕೆ ನೆರವಾಗುವ ಮಾಹಿತಿ ನೀಡುವ ನಂಬಿಕೆ ಉಂಟು ಎಂದರು.

ಇಸ್ರೋ ಹಾರಿ ಬಿಡುವ ಗಗನನೌಕೆ ಗುರುತ್ವದ ಬಾಹ್ಯಾಕಾಶದಲ್ಲಿ ಭೂಮಿಯನ್ನು ಸುತ್ತಿ ಮರಳಿ, ಗುಜರಾತ್ ಸಮೀಪದ ಸಮುದ್ರದಲ್ಲಿ ಬಂದಿಳಿಯಲಿದೆ. ಈ ವೇಳೆ ಕಿಟ್‌ನಲ್ಲಿ ಆಗುವ ಬದಲಾವಣೆ ಬಗ್ಗೆ ವಿಜ್ಞಾನಿಗಳ ತಂಡವು ನಿಗಾ ಇರಿಸಲಿದೆ. ಬಾಹ್ಯಾಕಾಶದಲ್ಲಿ ಮಾನವರಲ್ಲಿ ಮೂತ್ರಪಿಂಡದ ಕಲ್ಲುಗಳು ರೂಪಗೊಂಡಾಗ ಅನ್ವಯಿಕ ಕಾರ್ಯವಿಧಾನ ಹೇಗೆ? ಕೆಲಸ ಮಾಡಲಿವೆ ಎಂಬುದು ಅರ್ಥ ಮಾಡಿಕೊಳ್ಳಲು ಈ ನೊಣಗಳು ಬಹುಮುಖ್ಯ ಪಾತ್ರ ನಿರ್ವಹಿಸಲಿವೆ ಎಂದು ತಿಳಿಸಿದರು.

ಹಣ್ಣಿನ ನೊಣಗಳು ಮನುಷ್ಯನ ಮೂತ್ರಪಿಂಡ ಅನುಕರಿಸುತ್ತವೆ. ಹೀಗಾಗಿ ಮೂತ್ರಪಿಂಡ ಕಲ್ಲಿನ ರಚನೆ ಅಧ್ಯಯನಕ್ಕೆ, ಪ್ರಾಮಾಣಿಕರಿಸಲು ಇಸ್ರೋದ ಈ ಪ್ರಯೋಗ ಅತ್ಯುತ್ತಮ ಮಾದರಿ ಎನ್ನುವ ಡಾ. ರವಿಕುಮಾರ, ಶೂನ್ಯ ಗುರುತ್ವದಲ್ಲಾಗುವ ಜೈವಿಕ ಬದಲಾವಣೆ ಗಗನಯಾನದ ಭವಿಷ್ಯದ ಯೋಜನೆಗಳಿಗೆ ಸಹಕಾರಿ. ಇದು ಯಶ ಕಂಡರೆ, ಅನ್ಯಗ್ರಹದ ಕನಸು ಕಾಣುವ ವಿಜ್ಞಾನಿಗಳಿಗೆ ಆಹಾರ ಪೂರೈಕೆ ಮತ್ತು ಸಂಕ್ಷರಣೆಗೆ ಕೊಡುಗೆ ನೀಡದಂತಾಗಲಿದೆ ಎಂದರು‌.