ಸಾರಾಂಶ
ಸೊರಬ: ಹಕ್ಕುಪತ್ರ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಆದ್ದರಿಂದ ಹಕ್ಕುಪತ್ರ ನೀಡುವುದು ತಮ್ಮ ಕರ್ತವ್ಯದ ಜೊತೆಗೆ ಸಚಿವನಾಗಿ ಸಾರ್ಥಕತೆ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.ಬುಧವಾರ ಪಟ್ಟಣದ ಡಾ.ರಾಜ್ ರಂಗಮಂದಿರದಲ್ಲಿ ಕಂದಾಯ ಇಲಾಖೆ, ಸೊರಬ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿಯಿಂದ ಫಲಾನುಭವಿಗಳಿಗೆ ಹಮ್ಮಿಕೊಂಡಿದ್ದ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಕ್ಕು ಪತ್ರ ನೀಡುವುದು ಹೆಮ್ಮೆಯ ವಿಷಯ. ಹಕ್ಕುಪತ್ರ ಇಲ್ಲದವರಿಗೆ ಹಕ್ಕು ಪತ್ರ ಒದಗಿಸಲು ಸರ್ಕಾರ ಶ್ರಮಿಸುತ್ತಿದೆ. ಕಂದಾಯ ಸಚಿವರು ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರುತ್ತಿದ್ದಾರೆ. ೯೪ ಸಿ, ೯೪ ಸಿಸಿ ಅರ್ಜಿಗಳಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ, ಈ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ಹಕ್ಕುಪತ್ರ ಇಲ್ಲದವರಿಗೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಜನರು ಸರ್ಕಾರದ ಮೇಲೆ ವಿಶ್ವಾಸ ಇಡಬೇಕು ಎಂದರು.ಅರಣ್ಯ ಹಕ್ಕು ಕಾಯ್ದೆಯನ್ವಯ ಅರಣ್ಯದಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ನ್ಯಾಯ ಒದಗಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಶರಾವತಿ ಸಂತ್ರಸ್ತರು ೧೯೫೮ರಲ್ಲಿ ಜಲಾಶಯಕ್ಕಾಗಿ ತಮ್ಮ ಭೂಮಿ ಬಿಟ್ಟುಕೊಟ್ಟಿದ್ದು ಈವರೆಗೆ ಅವರಿಗೆ ಹಕ್ಕುಪತ್ರ ನೀಡಲಾಗಿಲ್ಲ, ಸಾಗರ, ತೀರ್ಥಹಳ್ಳಿ ಹೊಸನಗರ, ಭದ್ರಾವತಿ ಕಡೆಯಲ್ಲಿ ಸಂತ್ರಸ್ತರಿದ್ದಾರೆ. ಇವರಿಗೆ ಸುಮಾರು ೧೦ ಸಾವಿರ ಎಕರೆಯಷ್ಟು ಭೂಮಿ ನೀಡಬೇಕಿದ್ದು, ದೊಡ್ಡ ಮಟ್ಟದ ಕಾನೂನು ರೂಪಿಸಿ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚರ್ಚೆ, ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.ತಾಲೂಕಿನಲ್ಲಿ ಹಕ್ಕುಪತ್ರ ಇಲ್ಲದ ಗ್ರಾಮಗಳಲ್ಲಿ ಮುಖಂಡರು, ಸಮಿತಿ ಸದಸ್ಯರು ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಹಕ್ಕುಪತ್ರ ನೀಡುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದ ಅವರು, ಶಾಸಕರುಗಳಿಗೆ ಕ್ಷೇತ್ರ ಅಭಿವೃದ್ಧಿಗೆ ೫೦ ಕೋಟಿ ರು. ಮಂಜೂರಾಗಿದ್ದು, ಸೊರಬದಲ್ಲಿ ೪೬ ಕೋಟಿ ರು. ಅನುದಾನವನ್ನು ರಸ್ತೆಗಾಗಿ ಬಳಕೆ ಮಾಡಲಾಗುತ್ತಿದೆ. ೩೦ ಕಿ.ಮೀ ಪ್ರಗತಿ ಪಥ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ರಸ್ತೆಗಾಗಿ ಸುಮಾರು ೧೦೦ ಕೋಟಿ ರು. ಅನುದಾನ ಅಗತ್ಯವಿದೆ. ೧೬೨ ಕೋಟಿ ರು. ಅನುದಾನ ನೀರಾವರಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರೇಗೌಡ ಮಾತನಾಡಿ, ರಾಜ್ಯ ಸರ್ಕಾರ ಹಕ್ಕುಪತ್ರ ಇಲ್ಲದ ಗ್ರಾಮಗಳಿಗೆ ಹಕ್ಕುಪತ್ರ ನೀಡುತ್ತಿರುವುದು ಅಭಿನಂದನೀಯ. ಹಕ್ಕುಪತ್ರ ಅಗತ್ಯವಿರುವ ಇನ್ನೂ ಬೇರೆ ಗ್ರಾಮಗಳಿವೆ. ಅವುಗಳಿಗೂ ಮುಂದಿನ ದಿನಗಳಲ್ಲಿ ಈ ಸೌಲಭ್ಯ ಒದಗಲಿದೆ. ಹಕ್ಕುಪತ್ರದಿಂದಾಗಿ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಆದ್ದರಿಂದ ಎಲ್ಲರೂ ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ಶ್ರೀರಂಜನಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಜಯಶೀಲಗೌಡ, ತಹಶೀಲ್ದಾರ್ ಮಂಜುಳಾ ಹೆಗಡಾಳ್, ಇಒ ಶಶಿಧರ್, ಜಿ.ಪಂ. ಯೋಜನಾ ನಿರ್ದೇಶಕಿ ನಂದಿನಿ ಸೇರಿದಂತೆ ಪುರಸಭೆ ಸದಸ್ಯರು, ಕೆಡಿಪಿ ಸದಸ್ಯರು, ಬಗರ್ ಹುಕುಂ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.ಸರ್ಕಾರಿ ಶಾಲೇಲಿ ಇಂಟರ್ಯಾಕ್ಟಿವ್ ತರಗತಿ
ಶಿಕ್ಷಣ ಇಲಾಖೆಯಲ್ಲಿ ೪೩ ಸಾವಿರ ಕೋಟಿ ರು. ಅನುದಾನ ಬಳಕೆ ಮಾಡಲಾಗುತ್ತಿದೆ. ೪ ರಿಂದ ೫ ಸಾವಿರ ಕೋಟಿ ರು ಸಿಎಸ್ಆರ್ ನಿಧಿ ತರಲಾಗಿದೆ. ಉಚಿತ ಪಠ್ಯ, ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ ೬ ದಿನ ೫೭ ಲಕ್ಷ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಂಟರ್ಯಾಕ್ಟಿವ್ ಸ್ಮಾರ್ಟ್ ತರಗತಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಪ್ರತಿ ಹೋಬಳಿಗೊಂದು ಕೆಪಿಎಸ್ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.ಸೌಲಭ್ಯ ವಿತರಣೆ
ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಅವರು ತಾಲೂಕಿನ ಹಂಚಿ ತಾಂಡ ಮತ್ತು ತತ್ತೂರು ವಡ್ಡಿಗೆರೆ ೨ ಕಂದಾಯ ಗ್ರಾಮಗಳ ೯೬ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ನ ೧೪ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಟೈಲರಿಂಗ್, ಬಡಗಿ, ವೆಲ್ಡಿಂಗ್, ಗಾರೆ ಒಟ್ಟು ೭೬ ಫಲಾನುಭವಿಗಳಿಗೆ ಸುಧಾರಿತ ಉಪಕರಣಗಳನ್ನು ಹಾಗೂ ೮ ಫಲಾನುಭವಿಗಳಿಗೆ ಬಂಡವಾಳ ಹೂಡಿಕೆ ಧನ ಸಹಾಯ ನೀಡಲಾಯಿತು. ಮೀನುಗಾರಿಗೆ ಇಲಾಖೆಯಿಂದ ಮತ್ಸ್ಯ ಸಂಜೀವಿನಿ ಯೋಜನೆಯಡಿ ೨ ಮಹಿಳಾ ಸಂಘಗಳಿಗೆ ಉಚಿತವಾಗಿ ಮೀನು ಮರಿ ಮತ್ತು ಮೀನಿನ ಆಹಾರ ಹಾಗೂ ೫ ಕೃಷಿ ಹೊಂಡಗಳಿಗೆ ತಲಾ ೫೦೦ ಮೀನುಮರಿಗಳನ್ನು ವಿತರಿಸಿದರು.ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ವಿಕಲಚೇತನರಿಗೆ ೩ ವ್ಹೀಲ್ಚೇರ್ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಿದರು.