ಒಂದು ತಿಂಗಳೊಳಗೆ ಹಕ್ಕುಪತ್ರ ವಿತರಣೆ: ತಹಸೀಲ್ದಾರ್ ಭರವಸೆ

| Published : Jan 23 2025, 12:46 AM IST

ಸಾರಾಂಶ

ಸಿದ್ಧವಿರುವ ಹಕ್ಕುಪತ್ರ ವಿತರಣೆಗೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಎಲ್ಲರ ಭರವಸೆ ಮೇರೆಗೆ ಧರಣಿ ವಾಪಸ್ ಪಡೆಯುತ್ತಿದ್ದು, ಒಂದು ತಿಂಗಳೊಳಗೆ ಹಕ್ಕುಪತ್ರ ನೀಡದಿದ್ದರೆ ನಮ್ಮ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಮಲ್ಲಿಕ್ಯಾತನಹಳ್ಳಿ ನಿವಾಸಿಗಳು ಹಾಗೂ ಪ್ರಾಂತ ರೈತ ಸಂಘದ ಮುಖಂಡರು ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯು ತಹಸೀಲ್ದಾರ್ ಎಸ್.ವಿ.ಲೋಕೇಶ್ ನೀಡಿದ ಭರವಸೆ ಹಿನ್ನೆಲೆಯಲ್ಲಿ ಮುಕ್ತಾಯಗೊಂಡಿತು.

ಗ್ರಾಮದ ಸರ್ವೇ ನಂ.375ರ ಸರ್ಕಾರಿ ಭೂಮಿಯಲ್ಲಿ ವಾಸವಾಗಿರುವ 42 ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು, ಪ್ರಾಂತ ರೈತ ಸಂಘದ ಸದಸ್ಯರು, ಸಿಪಿಐ(ಎಂ)ನ ಮುಖಂಡರು ಮಂಗಳವಾರದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ಆರಂಭಿಸಿದ್ದರು.

ತಹಸೀಲ್ದಾರ್ ಲೋಕೇಶ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಕೂಡ ಇದಕ್ಕೊಪ್ಪದೇ ಪ್ರತಿಭಟನೆ ಮುಂದುವರಿಸಿ ರಾತ್ರಿ ಕಂದಾಯ ಇಲಾಖೆ ಆವರಣದಲ್ಲಿಯೇ ಅಡುಗೆ ಮಾಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸಿದ್ದರು.

ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ಸಿದ್ಧವಿರುವ ಹಕ್ಕುಪತ್ರ ವಿತರಣೆಗೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಎಲ್ಲರ ಭರವಸೆ ಮೇರೆಗೆ ಧರಣಿ ವಾಪಸ್ ಪಡೆಯುತ್ತಿದ್ದು, ಒಂದು ತಿಂಗಳೊಳಗೆ ಹಕ್ಕುಪತ್ರ ನೀಡದಿದ್ದರೆ ನಮ್ಮ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಬುಧವಾರದಂದು ತಹಸೀಲ್ದಾರ್ ಲೋಕೇಶ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಈಗಾಗಲೇ 32 ಮಂದಿಯ ಹಕ್ಕುಪತ್ರಗಳು ಸಿದ್ಧಗೊಂಡಿವೆ, ಉಳಿದ 10 ಮಂದಿಗೆ ತಾಂತ್ರಿಕ ಸಮಸ್ಯೆ ಇದ್ದು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ ಬಳಿಕ ಶಾಸಕರೊಂದಿಗೆ ಚರ್ಚಿಸಿ ಒಂದು ತಿಂಗಳೊಳಗೆ ಮಲ್ಲಿಕ್ಯಾತನಹಳ್ಳಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಕಾರ್ಯದರ್ಶಿ ದೇವಿ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಸಿಐಟಿಯು ಮುಖಂಡ ಜಿ.ರಾಮಕೃಷ್ಣ, ಮುಖಂಡರಾದ ಎನ್.ಲಿಂಗರಾಜಮೂರ್ತಿ, ಹನುಮೇಗೌಡ, ಮೂರ್ತಿ, ವಿಷಕಂಠ, ರಾಜು, ಮಹದೇವು, ಶಿವಕುಮಾರ್, ನಂಜುಂಡಸ್ವಾಮಿ, ಗುರುಸ್ವಾಮಿ, ಸುನಿಲ್, ಪ್ರಮೋದ್, ಸುಶೀಲಾ, ಮಹದೇವಮ್ಮ, ವಿಮಲಾ, ಮೀನಾಕ್ಷ್ಮಿ, ನಾಗಮ್ಮ ಸೇರಿದಂತೆ ಇತರರು ಇದ್ದರು.