ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿವೆ. ಆದರೆ ಹಾಸನ ಜಿಲ್ಲೆಗೆ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಿಗಲಿಲ್ಲ.

ಹಾಸನಕ್ಕೆ ಏನು ಸಿಗುತ್ತೆ ಅನ್ನೋದು ಮುಖ್ಯ: ಶಾಸಕ ಎಚ್.ಪಿ. ಸ್ವರೂಪ್ ವಾಗ್ದಾಳಿ

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಗೆ ಗ್ರಾಸವಾಗಿರುವ ನಡುವೆ ಮುಂದಿನ ಮುಖ್ಯಮಂತ್ರಿ ಯಾರು ಅನ್ನುವುದು ಮಖ್ಯವಲ್ಲ. ಹಾಸನಕ್ಕೆ ಏನು ಅನುದಾನ ಕೊಡುತ್ತಾರೆ ಎಂಬುದು ಪ್ರಮುಖವಾಗಿದೆ ಎಂದು ಶಾಸಕ ಎಚ್.ಪಿ. ಸ್ವರೂಪ್‌ಪ್ರಕಾಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿವೆ. ಆದರೆ ಹಾಸನ ಜಿಲ್ಲೆಗೆ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಿಗಲಿಲ್ಲ. ಜಿಲ್ಲೆಯ ಜನರು ಸಿದ್ದರಾಮಯ್ಯ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಜಿಲ್ಲೆಯ ಪಾಲಿಗೆ ಅವರ ಕೊಡುಗೆ ಶೂನ್ಯವಾಗಿಯೇ ಉಳಿದಿದೆ ಎಂದು ಟೀಕಿಸಿದರು.

ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದಕ್ಕಿಂತ, ಹಾಸನ ಜಿಲ್ಲೆಗೆ ಏನು ಸಿಗುತ್ತದೆ ಎನ್ನುವುದೇ ಮುಖ್ಯ. ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಮೂಲಸೌಕರ್ಯ ಹಾಗೂ ಜನಪರ ಯೋಜನೆಗಳು ಬರಬೇಕು. ಅದನ್ನು ನೀಡುವ ನಾಯಕನೇ ಜನರಿಗೆ ಮುಖ್ಯ ಎಂದು ಹೇಳಿದರು.

ರಾಜ್ಯ ರಾಜಕೀಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದರೆ ಹಾಸನ ಜಿಲ್ಲೆಗೆ ಯಾವ ರೀತಿಯ ನೆರವು, ಅಭಿವೃದ್ಧಿ ಕೊಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.

ಈ ವೇಳೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸಿದ ಶಾಸಕ ಸ್ವರೂಪ್‌ಪ್ರಕಾಶ್, ಜೆಡಿಎಸ್ ಆಡಳಿತದಲ್ಲಿ ಹಾಸನ ಜಿಲ್ಲೆಗೆ ಅನೇಕ ಪ್ರಮುಖ ಯೋಜನೆಗಳು ಮಂಜೂರಾಗಿದ್ದವು. ಮಲ್ಟಿಸ್ಪೆಷಲಿಟಿ ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ನಾವು ಅಡಿಪಾಯ ಹಾಕಿದ್ದೇವೆ. ಆದರೆ ಉದ್ಘಾಟನೆ ಮಾಡುವ ವೇಳೆ ಮಾತ್ರ ಕಾಂಗ್ರೆಸ್ ನಾಯಕರು ಮುಂದೆ ಬರುತ್ತಾರೆ ಎಂದು ವ್ಯಂಗ್ಯವಾಡಿದರು.

ಜಿಲ್ಲೆಯ ಜನರಿಗೆ ರಾಜಕೀಯ ಪೈಪೋಟಿಗಿಂತ ಅಭಿವೃದ್ಧಿಯೇ ಮುಖ್ಯ. ಹಾಸನ ಜಿಲ್ಲೆ ರಾಜ್ಯದಲ್ಲಿ ಪ್ರಮುಖ ಸ್ಥಾನ ಹೊಂದಿದ್ದರೂ, ಸರ್ಕಾರದಿಂದ ಬೇಕಾದ ಮಟ್ಟದ ಗಮನ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಯಾರು ನಿಜವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ ಎಂದು ಹೇಳಿದರು. ಇದೆ ವೇಳೆ ಮಹಾನಗರ ಪಾಲಿಕೆ ಮಾಜಿ ಕಾಪೋರೇಟರ್ ಸಿ. ಕ್ರಾಂತಿ ಪ್ರಸಾದ್ ತ್ಯಾಗಿ, ಗಿರೀಗೌಡ, ಬಿದರಿಕೆರೆ ಜಯರಾಮ್, ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು.