ಸಾರಾಂಶ
ಮಹನೀಯರ ಜಯಂತಿಗಳನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕೀಯಕ್ಕಾಗಿ ಉಪಯೋಗಿಸುತ್ತಿರುವುದು ವಿಷಾದನೀಯ ಎಂದು ಶಾಸಕ ಸುರೇಶ್ ಹೇಳಿದರು.
ಬೇಲೂರು: ಮಹನೀಯರ ಜಯಂತಿಗಳನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕೀಯಕ್ಕಾಗಿ ಉಪಯೋಗಿಸುತ್ತಿರುವುದು ವಿಷಾದನೀಯ ಎಂದು ಶಾಸಕ ಸುರೇಶ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ೧೩೪ನೇ ಅಂಬೇಡ್ಕರ್ ಜಯಂತಿಯನ್ನು ಎಲ್ಲ ಜಾತಿ, ಧರ್ಮ ಭೇದ ಮರೆತು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಅಂಬೇಡ್ಕರ್ ಅಂತಹ ಮಹಾನ್ ನಾಯಕರು ಒಂದು ಜಾತಿ ಧರ್ಮ ಹಾಗೂ ಒಂದು ಪಕ್ಷಕ್ಕೆ ಸಂವಿಧಾನವನ್ನು ರಚನೆ ಮಾಡಿಲ್ಲ. ಸಂವಿಧಾನವನ್ನು ತಿಳಿದಿರುವ ನಾವುಗಳು ಅವರಿಗೆ ಗೌರವ ಸಲ್ಲಿಸಬೇಕು.
ನಿಮ್ಮ ರಾಜಕಾರಣವನ್ನು ರಾಜಕೀಯ ಸಂದರ್ಭದಲ್ಲಿ ಬಳಸಿಕೊಳ್ಳಿ. ಸ್ವಾತಂತ್ರ್ಯ ಎಷ್ಟು ಮುಖ್ಯವೋ ಹಾಗೆ ಸಂವಿಧಾನವು ಪ್ರಮುಖವಾಗಿದೆ. ಅದನ್ನು ಗೌರವಿಸುವುದು ಮತ್ತು ಪೂಜಿಸುವ ಹಕ್ಕಿದೆ. ಆದರೆ ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಅವರಿಗೆ ಅಲ್ಲಿ ಅಪಮಾನ ಮಾಡುವುದು ಖಂಡನೀಯ ಎಂದು ಕಿಡಿಕಾರಿದ ಅವರು, ಸಂಬಂಧಪಟ್ಟ ಅಧಿಕಾರಿಗಳು, ತಹಸೀಲ್ದಾರ್ ವೃತ್ತ ನಿರೀಕ್ಷಕರು ಇದರ ಬಗ್ಗೆ ನನಗೆ ಸಂಪೂರ್ಣ ದಾಖಲೆ ಹಾಗು ಮಾಹಿತಿ ನೀಡಬೇಕೆಂದರು.
ಡಾ. ಬಾಬಾ ಸಾಹೇಬರು ಶಾಂತಿ, ನೆಮ್ಮದಿಯ ಸ್ನೇಹಹಸ್ತ ಚಾಚಿ ಎಲ್ಲರೂ ಸ್ನೇಹದಿಂದ ಬದುಕಬೇಕೆಂದು ತಿಳಿಸಿದ್ದಾರೆ. ಆದರೆ ಜಯಂತಿ ದಿನ ಪುರಸಭೆ ಅಧ್ಯಕ್ಷರು ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಗೊಂದಲವಾಗಿದೆ ಎಂಬುದು ಗಮನಕ್ಕೆ ಬಂದಿದೆ. ಪುರಸಭೆ ಅಧ್ಯಕ್ಷ ಅಶೋಕ್ ಕಾಂಗ್ರೆಸ್ ಪಕ್ಷದವರಾಗಿದ್ದರೂ ಈ ವಿಚಾರದಲ್ಲಿ ನಾವು ಅವರನ್ನು ಬೆಂಬಲಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಅವರು ಮಾಡುವ ಕೆಲಸಗಳಿಗೆ ಸಂಪೂರ್ಣ ಸಹಕಾರವಿದ್ದು ,ಇಲ್ಲಿ ಪಕ್ಷಾತೀತವಾಗಿ ನಾನು ಅವರನ್ನು ಬೆಂಬಲಿಸುತ್ತೇನೆ. ಇಲ್ಲಿ ನನಗೆ ಉತ್ತಮ ಕೆಲಸ ಮಾಡುವ ಅಧಿಕಾರಿಗಳು ಬೇಕು ಹಾಗೂ ಜನಪ್ರತಿನಿಧಿಗಳು ಬೇಕು ನಿಷ್ಪಕ್ಷಪಾತವಾಗಿ ಮಹಾನ್ ನಾಯಕರ ಜಯಂತಿ ಕಾರ್ಯಕ್ರಮ ಆಗಬೇಕೆ ಹೊರತು ಯಾವುದೇ ರಾಜಕೀಯಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್, ಸಿಪಿಐ ರೇವಣ್ಣ,ದಲಿತ ಮುಖಂಡರಾದ ಸತೀಶ್, ಮಂಜುನಾಥ್, ಪರ್ವತಯ್ಯ, ಎಂಜಿ ವೆಂಕಟೇಶ್, ರಮೇಶ್, ಬಿಜೆಪಿ ಮಂಡಲದ ಅಧ್ಯಕ್ಷ ಕೌರಿ ಸಂಜಯ್ ಹಾಜರಿದ್ದರು.