ಸಾರಾಂಶ
ಸರ್ಕಾರಗಳು ಪುಟ್ಟರಾಜ ಗವಾಯಿಗಳ ಜಯಂತಿ ಮಾಡುವ ಮನಸ್ಸು ಮಾಡಬೇಕು. ಅಂದಾಗ ಅವರ ಸೇವೆ ಗೌರವಿಸುವಂತಾಗುತ್ತದೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಸಂಗೀತಕ್ಕೆ ಶತಮಾನಗಳ ಇತಿಹಾಸವಿದೆ. ಸಂಗೀತಕ್ಕೆ ಕ್ಷೇತ್ರಕ್ಕೆ ಹಲವು ಮಹನೀಯರ ಕೊಡುಗೆ ಅಪಾರ. ಈ ಸಾಲಿನಲ್ಲಿ ಗದಗನ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಗೆ ಹಾನಗಲ್ ಕುಮಾರಸ್ವಾಮಿಗಳು, ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳ ಸೇವೆ ಅತ್ಯಂತ ಅಮೂಲ್ಯವಾದದ್ದು. ಅಂಧರ ಬಾಳಲ್ಲಿ ಬೆಳಕು ತುಂಬುವ ಕಾಯಕಕ್ಕೆ ಗವಾಯಿಗಳು ಶ್ರಮಿಸಿದ್ದಾರೆ. ಆದರೆ ಇಂತಹ ಸೇವೆಯನ್ನು ಇದುವರೆಗೂ ಸರ್ಕಾರಗಳು ಪರಿಗಣಿಸಿಲ್ಲ. ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಬೇಕಿತ್ತು, ಆದರೆ ಇದುವರೆಗೂ ಅದು ಆಗಿಲ್ಲ ಎಂದು ಮೈನಹಳ್ಳಿ ಹಿರೇಮಠದ ಸಿದ್ಧೇಶ್ವರ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.ನಗರದ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಭಾಭವನದಲ್ಲಿ ಹಮ್ಮಿಕೊಂಡ ಡಾ. ಪಂ. ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಘದ ೧೮ನೇ ವಾರ್ಷಿಕೋತ್ಸವ ಹಾಗೂ ಗುರುನಮನ ಸಂಗೀತ ಉತ್ಸವ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದರು.
ಅಂಧರು ಯಾರ ಮೇಲೂ ಆಧಾರವಾಗದೇ ತಮ್ಮ ಸ್ವಾಭಿಮಾನದ ಬದುಕು ನಡೆಸುವ ಮೂಲ ಉದ್ದೇಶದಿಂದ ಈ ವೀರೇಶ್ವರ ಪುಣ್ಯಾಶ್ರಮ ಹುಟ್ಟಿಕೊಂಡಿದ್ದು, ಇಂದು ಎಷ್ಟೋ ಅಂಧರ ಬಾಳಿನಲ್ಲಿ ಬೆಳಕು ತುಂಬಿದ ಕೀರ್ತಿ ಈ ಮಠಕ್ಕೆ ಸಲ್ಲುತ್ತದೆ. ಇಂತಹ ಮಹನೀಯರನ್ನು ಸರ್ಕಾರಗಳು ಗುರುತಿಸಿ ಅವರಿಗೆ ಸೂಕ್ತ ಗೌರವ ನೀಡಬೇಕಿದೆ. ಆದರೆ ಸರ್ಕಾರಗಳಿಗಿರುವ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರಗಳು ಪುಟ್ಟರಾಜ ಗವಾಯಿಗಳ ಜಯಂತಿ ಮಾಡುವ ಮನಸ್ಸು ಮಾಡಬೇಕು. ಅಂದಾಗ ಅವರ ಸೇವೆ ಗೌರವಿಸುವಂತಾಗುತ್ತದೆ ಎಂದು ಹೇಳಿದರು.ಉಪಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮವು ಯಾವುದೇ ಜಾತಿ, ಮತ, ಬೇಧವಿಲ್ಲದೇ ಸಂಗೀತ ಕ್ಷೇತ್ರಕ್ಕೆ ತನ್ನ ಕೊಡುಗೆ ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ಗವಿಸಿದ್ದೇಶ್ವರಸ್ವಾಮಿ ಆರ್. ಬೆಣಕಲಮಠ ನೆರವೇರಿಸಿದರು. ಸಾಹಿತಿ ಜಿ.ಎಸ್. ಗೋನಾಳ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಾನಂದಯ್ಯ ಕುಣಿಕೇರಿಮಠ, ಹಲಗೇರಿ ಗ್ರಾಪಂ ಕಾರ್ಯದರ್ಶಿ ದೊಡ್ಡನಗೌಡರ, ಕೊಪ್ಪಳದ ಪ್ರೌಢಶಾಲೆ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶರಣಯ್ಯ ಸಸಿಮಠ, ಪ್ರಾಥಮಿಕ ಶಾಲಾ ತಾಲೂಕಾಧ್ಯಕ್ಷ ಹಳಿಬಸಯ್ಯ ಕೆ.ಎಂ. ಹಲಗೇರಾ, ಯುವ ಕವಿ ಗವಿಸಿದ್ದಪ್ಪ ಸರ್ದಾರ, ಗ್ರಾಪಂ ಸದಸ್ಯ ರವಿಚಂದ್ರ ದೇವರಮನಿ ಉಪಸ್ಥಿತರಿದ್ದರು.