ಸಾರಾಂಶ
ಚಿತ್ರದುರ್ಗ: ಗಾಂಧೀಜಿ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ಅವರ ಹೆಜ್ಜೆ ಗುರುತುಗಳಲ್ಲಿ ನಡೆಯುವುದೇ ನಾವು ಗಾಂಧೀಜಿಯವರಿಗೆ ಸಲ್ಲಿಸುವ ಗೌರವ ಎಂದು ವರ್ತಕ ಟಿ.ಜಿ.ನರೇಂದ್ರ ಹೇಳಿದರು. ನಗರದ ಜೆಸಿಆರ್ ಬಡಾವಣೆ ಗಣಪತಿ ದೇವಸ್ಥಾನದ ಆವರಣದಲ್ಲಿ 22ನೇ ವಾರ್ಡ್ ಮತ್ತು ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದಿಂದ ಗುರುವಾರ ಆಯೋಜಿಸಿದ್ದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಯಲ್ಲಿ ಮಾತನಾಡಿ, ಗಾಂಧೀಜಿಯವರು ಸ್ವಾತಂತ್ರಕ್ಕಾಗಿ ಜೀವನವನ್ನು ಸಮರ್ಪಿಸಿದ್ದಕ್ಕೆ ಅವರು ರಾಷ್ಟ್ರಪಿತ ಎಂದು ಪೂಜೆಸಲ್ಪಟ್ಟರು ಎಂದು ಸ್ಮರಿಸಿದರು. ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎಸ್.ಜಿ.ಸುರೇಶ್ ಬಾಬು ಮಾತನಾಡಿ, ಗಾಂಧೀಜಿಯವರ ಸ್ವದೇಶಿ ಚಳುವಳಿ ಆರಂಭಿಸಿ ವಿದೇಶದಲ್ಲಿ ಉತ್ಪಾದಿಸುವ ವಸ್ತುಗಳನ್ನು ಧಿಕ್ಕರಿಸಿ ಭಾರತದಲ್ಲಿ ಉತ್ಪಾದಿಸುವ ವಸ್ತುಗಳನ್ನು ಮಾತ್ರ ಬಳಕೆ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದರು. ಸ್ವದೇಶಿ ಖಾದಿಯನ್ನೇ ಬಳಕೆ ಮಾಡಲು ಕರೆ ನೀಡಿದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಖಾದಿ ಉಪಯೋಗಿಸುವ ಸಂಪ್ರದಾಯ ಯಶಸ್ವಿಯಾಯಿತು ಎಂದರು.ರಮಾದೇವಿ ವೆಂಕಣ್ಣಾಚಾರ್ ಮಾತನಾಡಿ, ಗಾಂಧೀಜಿ ಜೀವನ ನಮಗೆ ದಾರಿದೀಪವಾಗಿದೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ. ಅದೇ ರೀತಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶ ಕಂಡ ಅತ್ಯಂತ ಸರಳ ನಾಯಕ. ಶಾಸ್ತ್ರಿಯವರು ಉನ್ನತ ಅಧಿಕಾರದಲ್ಲಿದ್ದಾಗಲೂ ಗಾಂಧೀಜಿಯವರ ವಿಚಾರವನ್ನು ಪಾಲಿಸಿದರು. ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿಸಿದರು. ಇಂಥ ಇಬ್ಬರು ಮಹಾ ನಾಯಕರು ಅಕ್ಟೋಬರ್ 2ರಂದು ಜನಿಸಿರುವುದು ನಮ್ಮ ದೇಶದ ಸುದೈವ ಎಂದರು
ಈ ವೇಳೆ ಗೀತಾ, ಶೈಲಾ, ಕಲಾ, ರಮಾದೇವಿ ತಂಡದವರು ದೇಶ ಭಕ್ತಿ ಗೀತ ಗಾಯನ ಮಾಡಿದರು. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುರುಗೇಶ್ ಗೌಡ್ರು, ಜಿ. ಆರ್ ಕೃಷ್ಣಮೂರ್ತಿ, ನವೀನ್, ಪ್ರಕಾಶ್, ಗೀತಾ ಈಶ್ವರಪ್ಪ, ಶೈಲಾ ವಿಶ್ವನಾಥ್, ಕಲಾ ಇದ್ದರು