ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಪಕ್ಷ ಸುಮಾರು 413 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಕೆನರಾ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.ಅವರು ಗುರುವಾರ ನೇಸರಗಿ ಮಲ್ಲಾಪೂರ ಗ್ರಾಮದ ಶ್ರೀಗಾಳೇಶ್ವರ ಮಠದಲ್ಲಿ ನಡೆದ ಬಿಜೆಪಿ ಲೋಕಸಭಾ ಚುನಾವಣಾ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ನರೇಂದ್ರ ಮೋದಿ ದೇಶದ ಸರ್ವೋತೋಮುಖ ಸಮಗ್ರ ಅಭಿವೃದ್ದಿಗೆ ಟೊಂಕು ಕಟ್ಟಿ ನಿಂತ ಪರಿಣಾಮ ವಿಶ್ವದಲ್ಲಿಯೇ ಭಾರತ ಆರ್ಥಿಕ ಪರಿಸ್ಥಿತಿಯಲ್ಲಿ ಐದನೇ ಸ್ಥಾನಕ್ಕೆ ಬಂದು ತಲುಪಿದೆ. ಅವರ ಆಡಳಿತ ಕಾರ್ಯ ವೈಖರ್ಯವನ್ನು ವಿಶ್ವದ ಅಗ್ರಗಣ್ಯ ನಾಯಕರು ಕೊಂಡಾಡುತ್ತಿದ್ದಾರೆ. ಅವರ ಸುಮಾರು 270 ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶ ಕಂಡ ಅತ್ಯುತ್ತಮ ಪ್ರಧಾನಿಯಾಗಿ ಜನ ಮಾನಸದಲ್ಲಿ ಹಚ್ಚು ಹಸರಾಗಿ ಉಳಿದಿದ್ದಾರೆ. ಅವರನ್ನು ಮತ್ತೆ ಪ್ರಧಾನಿ ಮಾಡಲು ದೇಶದ ಜನ ಕಾತುರದಿಂದ ಕಾಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಜನಪರ, ರೈತಪರ ಯೋಜನೆಗಳನ್ನು ಮನೆ-ಮನೆಗೆ ಮುಟ್ಟಿಸುವಂತ ಕಾರ್ಯವಾಗಬೇಕಾಗಿದೆ ಎಂದರು.
ಬಿಜೆಪಿ ಅಧಿಕಾರ ಅವಧಿಯಲ್ಲಿ ಚೆನ್ನಮ್ಮನ ಕಿತ್ತೂರ ಕ್ಷೇತ್ರದಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಮಹಾಂತೇಶ ದೊಡಗೌಡರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರವಾಗಲಿದೆ ಎಂದರು.ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಜಗತ್ತಿನ ಎಲ್ಲ ರಾಷ್ಟ್ರಗಳು ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಲು ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೇ ಅವರ ಕೈ ಬಲಪಡಿಸಲು 7ನೇ ಬಾರಿಗೆ ಸಂಸದ ಅನಂತಕುಮಾರ ಹೆಗಡೆ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದ್ದು ಇಂದಿನಿಂದಲೆ ಬಿಜೆಪಿ ಕಾರ್ಯಕರ್ತರ ,ಅಭಿಮಾನಿಗಳು ಟೊಂಕ ಕಟ್ಟಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಗೆಲುವಿಗೆ ಶ್ರಮಿಸೋಣ ಎಂದರು.
ಗ್ರಾಪಂ ಅಧ್ಯಕ್ಷ ನಿಂಗಪ್ಪ ಮಾಳಣ್ಣವರ, ಅಶೋಕ ವಕ್ಕುಂದ, ಯು.ಬಿ.ಉಳವಿ, ಸಂದೀಪ ದೇಶಪಾಂಡೆ, ಬಿ.ಎಪ್.ಕೊಳದೂರ, ಮಲ್ಲಿಕಾರ್ಜುನ ತುಬಾಕಿ, ಮಹಾಂತೇಶ ಕೂಲಿನವರ. ಸಿದ್ದಯ್ಯ ಹಿರೇಮಠ, ಶ್ರೀಶೈಲ ಕಮತಗಿ, ರಾಜು ಬುಗಡಿಗಟ್ಟಿ, ತೇಜಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಸೋಮಣ್ಣವರ, ವೀರಭದ್ರ ಚೋಭಾರಿ, ಅಡಿವೆಪ್ಪ ಚಿಗರಿ, ನೇಸರಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.