ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಅಪಾಯದಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಪಾಳೇಗಾರರು, ಭೂಮಾಲೀಕರು ಸ್ಪರ್ಧೆ ಮಾಡಲಿದ್ದಾರೆ. ಸೋಲು- ಗೆಲುವನ್ನು ಹಣ ನಿರ್ಧರಿಸುತ್ತದೆ. ಯೋಗ್ಯರು ಆಯ್ಕೆಯಾಗುವುದು ಕಷ್ಟವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಗರದ ಜಿಲ್ಲಾ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಹಾಗೂ ಕವಿ ಸಿ. ಶಂಕರ ಅಂಕನಶೆಟ್ಟಿಪುರ ಅವರ ನಮ್ಮ ಹರಿದರ್ಶನ ಪ್ರಕಾಶನ ಉದ್ಘಾಟನೆ ಹಾಗೂ ಅವರ 9ನೇ ಕೃತಿ ಸಂಚಲನ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ದೇಶದಲ್ಲಿ ಧರ್ಮ ಆಧರಿತ ರಾಜಕಾರಣ ನಡೆಯುತ್ತಿದೆ. ಶೋಷಿತ ಸಮುದಾಯಗಳು ಎಚ್ಚರಿಕೆಯಿಂದ ನಡೆಯಬೇಕಿದೆ ಎಂದರು.

ಶಂಕರ ಒಬ್ಬ ಹೋರಾಟಗಾರನೂ ಹೌದು, ಸಾಹಿತಿಯೂ ಹೌದು. ಜಾನಪದ ಸಾಹಿತ್ಯದಲ್ಲಿ ಚಾಮರಾಜನಗರ ಖ್ಯಾತಿಯನ್ನು ಹೊಂದಿದೆ. ಜಾನಪದ ಸಾಹಿತ್ಯ ನಿಮ್ಮ ಬದುಕಾಗಿದೆ. ಧರ್ಮ ಎಂದರೆ ನಮ್ಮ ಜೀವನವನ್ನು ಹೇಗೆ ನಡೆಸಬೇಕೆಂಬುವುದೇ ಧರ್ಮ. ನಾವು ಮೂಲತಃ ಈ ದೇಶದ ಪ್ರಜೆಗಳು. ಆದಿವಾಸಿಗಳು, ಪೆರಿಯಾರ್‌ ರಾಮಸ್ವಾಮಿಯಂಥ ನಾಯಕರು ಭಾರತ ದ್ರಾವಿಡ ದೇಶ ಆಗಬೇಕು ಎಂದು ಹೇಳಿದ್ದರು. ನಾವೆಲ್ಲರೂ ಭಾರತ ಮೂಲನಿವಾಸಿಗಳು. ನಮ್ಮ ಅಧಿಕಾರಿವನ್ನು ಬಳಸಿ ಆಳುವವರು ಅವರಿಗೆ ತಕ್ಕಂತೆ ನಡೆದುಕೊಂಡು ಹೋಗುತ್ತಾರೆ. ಅದನ್ನು ನೋಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ಆಡಳಿತ ಬೇಕು ಎಂದು ಬಯಸಿದ್ದರು ಎಂದು ತಿಳಿಸಿದರು.

ಮತ ಖರೀದಿ:


ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸರ್ವರಿಗೂ ಮತದಾನದ ಹಕ್ಕು ನೀಡುವ ಮೂಲಕ ರಾಜ ಅರಮನೆಯಲ್ಲಿ ಜನಿಸುತ್ತಿದ್ದ, ಇನ್ಮುಂದೆ ಮತಗಟ್ಟೆಯಲ್ಲಿ ಹುಟ್ಟುತ್ತಾನೆ ಎಂದು ಹೇಳಿದರು. ಮತ ಖರೀದಿ ಮಾಡಿದವರು ನಿಮ್ಮ ಪರ ಕೆಲಸ ಮಾಡುವುದಿಲ್ಲ, ಅಂಬೇಡ್ಕರ್ ಅವರು ಕೊಟ್ಟಿರುವ ಮತವನ್ನು ಮಾರಿಕೊಂಡರೆ ನಿಮ್ಮನ್ನು ಏನು ಅಂಥ ಕೇಳುವುದಿಲ್ಲ, ದೇಶದಲ್ಲಿ ನಡೆಯುತ್ತಿರುವುದು ಇದೆ ಎಂದರು.

ಸಂಚಲನ ಕೃತಿಯಲ್ಲಿ ಅಂಬೇಡ್ಕರ್ ಆಶಯಗಳಿವೆ. ಅಂಬೇಡ್ಕರ್ ಅವರು ಹೇಳಿರುವುದರಿಂದ ವಂಚಿತರಾಗಿದ್ದೇವೆ ಎಂದು ಹೇಳುತ್ತದೆ. ಅದರ ಬಗ್ಗೆ ಜಾಗೃತಿ ಮೂಡಿಸುವಂಥ, ಬೆಳಕು ಚೆಲ್ಲುವಂತಹ, ಸಾಮಾಜಿಕ ಜವಾಬ್ದಾರಿಯನ್ನು ಈ ಕೃತಿ ಒಳಗೊಂಡಿದೆ ಎಂದರು.

ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತೆ ಶಿಲ್ಪಾನಾಗ್ ಪ್ರಕಾಶನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ಸಿ.ಶಂಕರ ಅಂಕನಶೆಟ್ಟಿಪುರ ಅವರ 9ನೇ ಕೃತಿ ಸಂಚಲನ ಚೆನ್ನಾಗಿ ಮೂಡಿಬಂದಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ 8 ಕೃತಿಗಳನ್ನು ಕೊಟ್ಟಿರುವ ಶಂಕರ ಸಿ. ಅಂಕನಶೆಟ್ಟಿಪುರ ಅವರು ಸಂಚಲನ ಕೃತಿಯ ಮೂಲಕ ಸಂಚಲನವನ್ನೇ ಸೃಷ್ಟಿ ಮಾಡಿದ್ದಾರೆ. ಪೌರಕಾರ್ಮಿಕರ ಬದುಕು, ಬವಣೆ ಹಾಗೂ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳನ್ನು ಪುಸ್ತಕ ರೂಪದಲ್ಲಿ ತರುವುದರ ಮೂಲಕ ಕೃತಿಯು ಸಾಮಾಜಿಕ ಕಳಕಳಿ ಹೊಂದಿದೆ ಎಂದರು.

ಕವಿ ಸಿ. ಶಂಕರ ಅಂಕನಶೆಟ್ಟಿಪುರ ಮಾತನಾಡಿ, ಸಂಚಲನ ನನ್ನ 9ನೇ ಕೃತಿಯಾಗಿದ್ದು, ಪೌರಕಾರ್ಮಿಕರ ಸಮಸ್ಯೆಗಳನ್ನೂ ತೆರೆದಿಡಲು ಬರೆದಿದ್ದೇನೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕನಪುರ ಮಹದೇವ ಕೃತಿ ಕುರಿತು ಮಾತನಾಡಿದರು. ಮಾಜಿ ಮಹಾಪೌರ ಎಂ. ನಾರಾಯಣ ಮಾತನಾಡಿದರು.

ತಿ.ನರಸೀಪುರದ ನಳಂದ ಬುದ್ಧ ವಿಹಾರದ ಬೋಧಿರತ್ಬ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗ ಅಧ್ಯಕ್ಷ ಡಾ.ವಿ.ಎನ್. ಮಹದೇವಯ್ಯ, ಹೋರಾಟಗಾರ ಪಿ.ಸಂಘಸೇನ ಇತರರು ಹಾಜರಿದ್ದರು.