ಬ್ಯಾಡಗಿ: ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾವೇರಿ, ತಾಲೂಕು ನ್ಯಾಯವಾದಿಗಳ ಸಂಘ ಬ್ಯಾಡಗಿ, ಜಿಲ್ಲಾ ಮತ್ತು ತಾಲೂಕು ಕಾರ್ಮಿಕ ಇಲಾಖೆ ಬ್ಯಾಡಗಿ ಇವರ ಇವರ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಪಟ್ಟಣದ ಶಾಹಿ ಗಾರ್ಮೆಂಟ್ಸ್ ಆವರಣದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ರಾಜೇಶ್ವರಿ ಪುರಾಣಿಕ ಮಾತನಾಡಿ, ಕಾರ್ಮಿಕ ವರ್ಗವಿಲ್ಲವಿಲ್ಲದಿದ್ದರೇ ಜನರ ಬದುಕು ನಿರಾತಂಕವಾಗಿ ಸಾಗುವುದು ಕಷ್ಟವಾಗಿದೆ. ಅದಾಗ್ಯೂ ಸಹ ಕಾರ್ಮಿಕರು ಅತ್ಯಂತ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಗೊತ್ತು ಗುರಿಯಿಲ್ಲದ ಬದುಕಿಗೆ ನಿಯಮಿತ ವೇತನ, ಕೆಲಸಕ್ಕೆ ವೇಳೆ, ಅನಾರೋಗ್ಯಕ್ಕೆ ಪರಿಹಾರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ಇನ್ನಿತರ ಕಟ್ಟುಪಾಡುಗಳನ್ನು ನಿಯಮಿಸಲಾಗಿದೆ ಎಂದರು.

ದುರಂತಕ್ಕೆ ಪರಿಹಾರ ಕೊಡಲೇಬೇಕು:

ಕೆಲಸದಲ್ಲಿ ನಿರತ ಕಾರ್ಮಿಕರು ಅವಘಡಗಳಲ್ಲಿ ಮರಣ ಹೊಂದಿದರೇ ಅಥವಾ ಅಫಘಾತಕ್ಕೆ ಒಳಗಾದಲ್ಲಿ ಮಾಲೀಕರೇ ಪರಿಹಾರ ನೀಡಬೇಕಾಗುತ್ತದೆ, ಹೀಗಾಗಿ ವೈದ್ಯಕೀಯ ವೆಚ್ಚ ಸೇರಿದಂತೆ ಕಾರ್ಮಿಕ ಮೃತರಾದಲ್ಲಿ ಕುಟುಂಬಕ್ಕೆ ಪರಿಹಾರದೆ ಹಿನ್ನೆಲೆಯಲ್ಲಿ ಮಾಲೀಕರು ಕಾರ್ಮಿಕರ ಮೇಲೆ ವರ್ಕಮನ್ ಕಾಂಪನಸೇಷನ್ ಇನ್ಸೂರೆನ್ಸ್ ಮಾಡಿಸಿಟ್ಟುಕೊಂಡಲ್ಲಿ ಆರ್ಥೀಕ ಪರಿಹಾರ ದೊರಕಲಿದೆ ಎಂದರು.

ಮಕ್ಕಳ ಶಿಕ್ಷಣಕ್ಕೆ ಒತ್ತು: ಕಾರ್ಮಿಕರು ಹೆಚ್ಚು ಪ್ರಮಾಣದಲ್ಲಿ ದುಶ್ಚಟಗಳಿಂದ ದೂರವಿರುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಬೇಕು, ಕಾರಣವಿಷ್ಟೇ ನಿಯಮಿತ ವೇತನದಲ್ಲಿ ಕುಟುಂಬಗಳ ನಿರ್ವಹಣೆ ಅಸಾಧ್ಯ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಲ್ಲಿ ಅವರ ತಮ್ಮ ಬದುಕಿಗೆ ಆಸರೆಯಾಗಲಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಬರುವಂತಹ ಎಲ್ಲಾ ಪರಿಹಾರಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.


ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಮ ಬೆಂಗಾಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಎಚ್.ವಿ.ಶೈಲಜಾ, ಅಪರ ಸರ್ಕಾರಿ ಅಭಿಯೋಜಕ ಪ್ರಭು ಶೀಗಿಹಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಆರ್. ಲಮಾಣಿ, ರಾಜಣ್ಣ ನ್ಯಾಮತಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಚ್.ಸಿ. ಸಿದ್ಧನಗೌಡ, ತಾಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಜಿ.ಬಿ.ಯಲಗಚ್ಚ, ಕಾರ್ಯದರ್ಶಿ ಎಚ್ .ಜಿ. ಮುಳುಗುಂದ, ಸಹ ಕಾರ್ಯದರ್ಶಿ ಮಂಜುನಾಥ ಕುಮ್ಮೂರ, ಸದಸ್ಯರಾದ ಎಸ್.ಎಸ್. ಕೊಣ್ಣೂರ, ಎನ್.ಎಂ. ಹುಬ್ಬಳ್ಳಿ. ಎಸ್.ಕೆ. ನಾಯಕ್, ಶಾಯಿ ಗಾಮೆಂಟ್ಸ್ ಉದಯ ಕುಂಬಾರ, ಟಿ. ರವಿಕುಮಾರ, ಕಾರ್ಮಿಕ ಇಲಾಖೆ ಮತ್ತು ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.