ಸಾರಾಂಶ
ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎನ್ನುತ್ತಾ ಸರ್ವನಾಶ ಮಾಡಿಬಿಟ್ಟಿದ್ದೀರಿ. ಬೆಲೆ ಇಳಿಸಲಿಲ್ಲ, ೧೦ ವರ್ಷಗಳ ಕಾಲ ನೀವು ಸುಳ್ಳು ಹೇಳಿ ಜನರನ್ನು ಯಾಮಾರಿಸಿದ್ದು ಸಾಕು, ಅಧಿಕಾರದಿಂದ ತೊಲಗಿರಿ ಎಂದು ಶಾಸಕ ಶ್ರೀನಿವಾಸ ಮಾನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಹಾನಗಲ್ಲ: ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎನ್ನುತ್ತಾ ಸರ್ವನಾಶ ಮಾಡಿಬಿಟ್ಟಿದ್ದೀರಿ. ಬೆಲೆ ಇಳಿಸಲಿಲ್ಲ, ರೈತರ ಮೊಗದಲ್ಲಿ ನಗು ತರಿಸಲಿಲ್ಲ, ಯುವಕರಿಗೆ ನೌಕರಿ ಕೊಡಲಿಲ್ಲ, ಕಪ್ಪುಹಣ ತರಲಿಲ್ಲ. ೧೦ ವರ್ಷಗಳ ಕಾಲ ನೀವು ಸುಳ್ಳು ಹೇಳಿ ಜನರನ್ನು ಯಾಮಾರಿಸಿದ್ದು ಸಾಕು, ಅಧಿಕಾರದಿಂದ ತೊಲಗಿರಿ ಎಂದು ಶಾಸಕ ಶ್ರೀನಿವಾಸ ಮಾನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಧರ್ಮ, ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟಿಸಿ, ಮನಸ್ಸುಗಳನ್ನು ಒಡೆದು ರಾಜಕೀಯ ಬೇಳೆ ಬೇಯಿಸಿಕೊಂಡಿದ್ದು ೧೦ ವರ್ಷಗಳ ಬಿಜೆಪಿ ಸಾಧನೆ. ಬಿಜೆಪಿ ಬಳಿ ಹೇಳಿಕೊಳ್ಳಲು ಸಾಧನೆಗಳಿಲ್ಲ. ಅಭಿವೃದ್ಧಿ ಹಾಗೂ ಜನಪರವಾದ ವಿಚಾರಗಳಿಲ್ಲ. ಹಾಗಾಗಿ ರಾಜಕಾರಣ ಮಾಡಲು ಸಾವಿನ ಮನೆ ಹುಡುಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ನಿರುದ್ಯೋಗ ಹೆಚ್ಚಳದಿಂದ ಯುವಜನರಲ್ಲಿ ತಳಮಳ ಸೃಷ್ಟಿಯಾಗಿದೆ. ಸಾಲಬಾಧೆಯಲ್ಲಿ ರೈತರು ನರಳುತ್ತಿದ್ದಾರೆ. ಬೆಲೆ ಏರಿಕೆ ಬಿಸಿಯಿಂದ ಗೃಹಿಣಿಯರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರದ ದುಬಾರಿ ನೀತಿಗಳಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಅಫ್ರೋಜಾ ಕನವಳ್ಳಿ, ತಾಪಂ ಮಾಜಿ ಸದಸ್ಯ ಫಯಾಜ್ ಲೋಹಾರ, ಮುಖಂಡರಾದ ವಿನಾಯಕ ಪವಾರ, ಆರೀಫ್ ಲೋಹಾರ, ವಾಸಿಂ ಪಠಾಣ, ನಾಗರಾಜ ಬೈರೋಜಿ, ಲಕ್ಷ್ಮೀಬಾಯಿ ಪಾಟೀಲ, ಲಿಂಗರಾಜ ಕುರುಬರ, ಅಶೋಕ ಉಪ್ಪಾರ, ಮಹಾಬಳೇಶ್ವರ ಛತ್ರಪತಿ, ಶೇಕಪ್ಪ ಬನ್ನಿಹಳ್ಳಿ, ರಾಜು ಶೇಷಗಿರಿ, ಬಸವರಾಜ ಚವ್ಹಾಣ, ನಾಗರತ್ನಾ ಚನ್ನಾಪುರ, ಸಮ್ಮದ ಮೂಡಿ, ಸುಶೀಲಾ ತಳವಾರ, ಮಹ್ಮದ್ಫಾರೂಕ್ ಮೂಡಿ, ಖಾದರಸಾಬ್ ಮೂಗೂರ, ಹರೀಶ ಟೇಲರ್ ಈ ಸಂದರ್ಭದಲ್ಲಿದ್ದರು.