ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ಕೃಷ್ಣಾ, ಮಲಪ್ರಭಾ ನದಿ ಕಲುಷಿತಗೊಳ್ಳದಂತೆ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಪ್ರವೇಶ ದ್ವಾರದ ಮುಂದೆ ನಡೆದ ಕೃಷ್ಣಾ ಜಲಯಾತ್ರೆ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ನದಿಗಳನ್ನು ರಕ್ಷಣೆ ಮಾಡದೇ ಇದ್ದರೆ ಮುಂದಿನ ಪೀಳಿಗೆಗೆ ನಾವೇ ಅನ್ಯಾಯ ಮಾಡಿದಂತೆ. ಹುನಗುಂದ ತಾಲೂಕಿನ 60 ಸಾವಿರ ಎಕರೆ ಭೂಮಿಗೆ ಹನಿ ನೀರಾವರಿ ಕಲ್ಪಿಸುವ ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತರಲಾಗಿದೆ. ಬಳಕೆ ಮಾಡುವ ತಾಳ್ಮೆ ನಮ್ಮ ರೈತರಿಗೆ ಇಲ್ಲ. ಈ ಯೋಜನೆಯನ್ನೇ ಮತ್ತಷ್ಟು ಸುಧಾರಿಸಿ ಜಾರಿಗೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಧಾರವಾಡ ವಾಲ್ಮಿ ನಿವೃತ್ತ ನಿರ್ದೇಶಕ ರಾಜೇಂದ್ರ ಪೊದ್ದಾರ ಮಾತನಾಡಿ, ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದಿಂದ ಕೃಷ್ಣಾ ನದಿಯ ಉಗಮ ಸ್ಥಾನ ಮಹಾಬಳೇಶ್ವರದವರೆಗೆ ಕೃಷ್ಣಾ ನದಿಯ ಸಂರಕ್ಷಣೆಗಾಗಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಅರಣ್ಯ ನಾಶ, ನದಿ, ಉಪನದಿ ತೀರ ಒತ್ತುವರಿ, ಮರಳು ಅಕ್ರಮ, ವ್ಯಾಪಕ ಗಣಿಗಾರಿಕೆ, ಅವೈಜ್ಞಾನಿಕವಾಗಿ ನದಿಯಲ್ಲಿ ರಚಿತಗೊಳ್ಳುತ್ತಿರುವ ಸೇತುವೆಗಳಿಂದ ನದಿಯ ಆಳ ಕಡಿಮೆಯಾಗಿ, ಹೂಳಿನ ಪ್ರಮಾಣ ದಿನೇ ದಿನೇ ಅಧಿಕವಾಗುತ್ತಿದೆ. ನದಿ ತೀರದಲ್ಲಿ ಹೆಚ್ಚುತ್ತಿರುವ ಸಕ್ಕರೆ, ಕಾಗದ, ಗೊಬ್ಬರ ಮುಂತಾದ ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ಪದಾರ್ಥಗಳು, ಪ್ಲಾಸ್ಟಿಕ್ ಬಳಕೆ, ಪೂಜೆ, ನಂಬಿಕೆಗಳ ಹೆಸರಿನಲ್ಲಿ ನದಿ ತೀರ ಹೆಚ್ಚು ಕಲ್ಮಶಗೊಳ್ಳುತ್ತಿದೆ. ಈ ಸಮಸ್ಯೆಗಳಿಂದ ನದಿಯನ್ನು ಮುಕ್ತಮಾಡಲು, ಜನರಿಗೆ ಜಾಗೃತಿ ಮೂಡಿಸಲು ಯಾತ್ರೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.ಹಿರಿಯ ಮುಖಂಡ ಎಂ.ಪಿ.ನಾಡಗೌಡ ಮಾತನಾಡಿ, ನದಿ ಇರುವ ಜಿಲ್ಲೆಯಲ್ಲಿ ಕಡಿಮೆ ನೀರು ಉಪಯೋಗಿಸುವ ಕಾರ್ಖಾನೆ ಸ್ಥಾಪಿಸುವ ಬದಲು ಅಧಿಕ ನೀರು ಬಳಕೆ ಮಾಡುವ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪನೆ ಮಾಡುತ್ತಿರುವುದು ದುರಂತ. ನದಿ ಸಂರಕ್ಷಣೆಗೆ ಆದ್ಯತೆ ಕೊಡದೇ ಇದ್ದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನಗೂಳಿ ವಿರತೀಶಾನಂದ ಸ್ವಾಮೀಜಿ ಮಾತನಾಡಿ, ನೀರಿಗಾಗಿ ವೈರಾಗ್ಯ ತಾಳಿದ ಬುದ್ಧಪೂರ್ಣಿಮೆಯ ದಿನ ಕೃಷ್ಣಾ ನದಿ ಸಂರಕ್ಷಣೆಗಾಗಿ ಜಲಯಾತ್ರೆ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಲಿಂಗಾಯತರ ಪವಿತ್ರ ಸ್ಥಳ ಕೂಡಲಸಂಗಮದಿಂದ ಹೊರಡಿರುವುದು ಹೆಮ್ಮೆಯ ಸಂಗತಿ. ಸುಕ್ಷೇತ್ರದಲ್ಲಿಯೇ ನದಿಯ ಸಂರಕ್ಷಣೆಯಾಗಬೇಕು ಎಂದು ಸಲಹೆ ನೀಡಿದರು.ಸಮಾರಂಭದಲ್ಲಿ ಬಸವನ ಬಾಗೇವಾಡಿ ಬಸವ ಸೈನ್ಯ ಅಧ್ಯಕ್ಷ ಶಂಕರಗೌಡ ಬಿರಾದಾರ, ನದಿ ಸಂರಕ್ಷಣೆ ಹೋರಾಟಗಾರರಾದ ಆಂಧ್ರಪ್ರದೇಶದ ಸತ್ಯನಾರಾಯಣ, ಮಹಾರಾಷ್ಟ್ರದ ನರೇಂದ್ರ ಚೂಘ, ಅಮರೇಶ ನಾಗೂರ, ಗಂಗಾಧರ ದೊಡಮನಿ, ಗಂಗಣ್ಣ ಬಾಗೇವಾಡಿ, ಶೇಖರಗೌಡ ಗೌಡರ, ಗ್ರಾಮ ಪಂಚಾಯತ ಅಧ್ಯಕ್ಷೆ ಗಂಗವ್ವ ರಾಂಪೂರ ಮುಂತಾದವರು ಇದ್ದರು.
------------ಕೂಡಲಸಂಗಮದ ಬಳಿ ಶುಚಿ ಕಾಪಾಡಲು ಸಲಹೆ
ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಬಳಿಯ ಕೃಷ್ಣಾ, ಮಲಪ್ರಭಾ ನದಿ ದಡ ತ್ಯಾಜ್ಯದಿಂದ ಕೂಡಿದ್ದು, ಗಬ್ಬು ನಾರುತ್ತಿದೆ. ದಡದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುವರು, ಅಧಿಕ ಪ್ರಮಾಣದ ಬಟ್ಟೆಗಳು ಬಿದ್ದಿವೆ. ನದಿ ಅಧಿಕ ಕಲುಷಿತಗೊಳ್ಳುತ್ತಿದೆ. ಸಂರಕ್ಷಣೆ ಮಾಡುವಂತೆ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಯಾತ್ರೆಯಲ್ಲಿದ ಮುಖಂಡರು ವಿನಂತಿಸಿದರು. ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಕರೆ ಮಾಡಿ ನದಿ ದಡವನ್ನು ಸ್ವಚ್ಚತೆ ಮಾಡಿ ನಿರಂತರ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.