ಸಾರಾಂಶ
ಕೆ.ವಿ.ಶಂಕರಗೌಡ, ಜಿ.ಮಾದೇಗೌಡ ಸೇರಿದಂತೆ ಹಲವು ಹಿರಿಯ ನಾಯಕರು ದೂರದೃಷ್ಟಿಯನ್ನಿಟ್ಟುಕೊಂಡು ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅದು ನಮ್ಮಂತಹ ರಾಜಕಾರಣಿಗಳಿಗೆ ಪ್ರೇರಣಾ ಶಕ್ತಿಯಾಗಬೇಕು. ಮುಂದಿನ ಪೀಳಿಗೆ ಅವರ ಹಾದಿಯಲ್ಲೇ ಮುನ್ನಡೆದಾಗ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಹಿರಿಯ ನಾಯಕರನ್ನು ಜೀವನಾದರ್ಶಗಳನ್ನು ಯುವಪೀಳಿಗೆಗೆ ಪರಿಚಯಿಸಿ ಅವರನ್ನು ಜೀವಂತವಾಗಿಡುವ ಕೆಲಸ ಮಾಡುವುದು ಅವಶ್ಯವಾಗಿದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗ ಮಂದಿರದಲ್ಲಿ ತಾಲೂಕಿನ ಮಂಗಲ ಗ್ರಾಮದ ಭೂಮಿ ಬೆಳಗು ಸಾಂಸ್ಕೃತಿಕ ಸಂಘದಿಂದ ನೀನಾಸಂ ತಿರುಗಾಟ ನಾಟಕಗಳು ಹಾಗೂ ಜಿಲ್ಲೆಯ ಮೊದಲ ಲೋಕಸಭಾ ಸದಸ್ಯ ದಿ.ಎಂ.ಕೆ. ಶಿವನಂಜಪ್ಪ ಅವರಿಗೆ ರಂಗ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆ.ವಿ.ಶಂಕರಗೌಡ, ಜಿ.ಮಾದೇಗೌಡ ಸೇರಿದಂತೆ ಹಲವು ಹಿರಿಯ ನಾಯಕರು ದೂರದೃಷ್ಟಿಯನ್ನಿಟ್ಟುಕೊಂಡು ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅದು ನಮ್ಮಂತಹ ರಾಜಕಾರಣಿಗಳಿಗೆ ಪ್ರೇರಣಾ ಶಕ್ತಿಯಾಗಬೇಕು. ಮುಂದಿನ ಪೀಳಿಗೆ ಅವರ ಹಾದಿಯಲ್ಲೇ ಮುನ್ನಡೆದಾಗ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ ಮಾತನಾಡಿ, ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಎಂ.ಕೆ.ಶಿವನಂಜಪ್ಪನವರು ಸಂಸದರಾಗಿ ಕೆಲಸ ಮಾಡಿದವರು. ಮಂಡ್ಯದಲ್ಲಿ ಏನೇನು ಗುರುತಿಸುತ್ತಿರೋ ಎಲ್ಲದರ ಹಿಂದೆ ಶಿವನಂಜಪ್ಪನವರಿದ್ದಾರೆ ಎಂದರು.
ಸಾರ್ವಜನಿಕ ಬದುಕಿನಲ್ಲಿ ಅಂಜಿಕೆ ಹಾಗೂ ನಾಚಿಕೆ ಎರಡು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಸಾರ್ವಜನಿಕ ರಾಜಕೀಯ ಇಟ್ಟುಕೊಂಡು ದೀರ್ಘಕಾಲದ ರಾಜಕೀಯ ಮಾಡಿರುವ ಇತಿಹಾಸ ಮಂಡ್ಯದಲ್ಲಿದೆ ಎಂದರು.ಪಕ್ಷ ಯಾವುದಾದರೂ ಇರಲಿ. ಮಂಡ್ಯಕ್ಕೆ ಒಳ್ಳೆಯದಾಗಬೇಕು ಎಂದಾಗ ಎಲ್ಲಾ ಪಕ್ಷದವರು ಒಂದಾಗುತ್ತಿದ್ದ ರಾಜಕೀಯ ಪರಂಪರೆ ಮಂಡ್ಯ ಜಿಲ್ಲೆಯಲ್ಲಿತ್ತು. ಎಲ್ಲಾ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಒಂದೇ ವೇದಿಕೆಗೆ ಕರೆ ತರುವ ಸಾಧ್ಯತೆ ಇತ್ತು. ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ ಎಂದರು.
ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಉಪಾಧ್ಯಕ್ಷ ಲಿಂಗಪ್ಪ ಚನ್ನನಕೆರೆ, ಕಾರ್ಯದರ್ಶಿ ನಂಜುಂಡಸ್ವಾಮಿ ಇದ್ದರು. ನಂತರ ನೀನಾಸಂ ತಂಡದಿಂದ ಮಾಲತಿ ಮಾಧವ ನಾಟಕ ನಡೆಯಿತು.