ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಕನಸು ಕಾಣದೆ ಬದುಕು ಸುಂದರಗೊಳಿಸುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ ಎಂಬ ಅರಿವು ಪ್ರತಿ ಸ್ಪರ್ಧಾತ್ಮಕ ಜಗದಲ್ಲಿ ಈಸುವವರಿಗೆ ಅತ್ಯಂತ ಅಗತ್ಯ ಎಂದು ಶಿಕಾರಿಪುರದ ಸಾಧನಾ ಶಂಕರ ಅಕಾಡೆಮಿ ನಿರ್ದೇಶಕ ಶಂಕರ ನಾಯಕ್ ತಿಳಿಸಿದರು.ಇಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಬಿಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಭವಿಷ್ಯದ ಬದುಕಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಎಂಬ ವಿಷಯದ ಕುರಿತು ನಡೆದ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜಗತ್ತು ಇಂದು ಸ್ಪರ್ಧಾತ್ಮಕವಾಗಿದೆ. ಅವಕಾಶಗಳೂ ವಿಫುಲವಾಗಿವೆ. ಪರಿಶ್ರಮಿಸುವ ಸ್ಪರ್ಧಿಗೆ ಜಯ ಸಾಧ್ಯ. ಸರ್ಕಾರಿ ಉದ್ಯೋಗ ಮಾತ್ರ ಜೀವನಕ್ಕೆ ಆಧಾರ ಎಂಬ ಪರಿಕಲ್ಪನೆಯೇ ತಪ್ಪು. ಉದ್ಯೋಗಾವಕಾಶಗಳು ವಿವಿಧ ಉದ್ಯಮಗಳಲ್ಲಿ ಲಭ್ಯ. ಆದರೆ ನಮ್ಮ ಕ್ರಿಯಾಶೀಲತೆ ಪರಿಶ್ರಮ ಜ್ಞಾನವನ್ನು ಆಧರಿಸಿ ಅಲ್ಲಿ ಉದ್ಯೋಗ ಪಡೆಯಬಹುದು. ಇದೆಲ್ಲದರ ಹೊರತಾಗಿಯೂ ಸ್ವಯಂ ಉದ್ಯೋಗಗಳು, ಕೃಷಿ ಸೇರಿದಂತೆ ನಮ್ಮ ಕಣ್ಮುಂದೆ ಕನಸು ಕಟ್ಟಿಕೊಂಡು ನಡೆದರೆ ಅವಕಾಶಗಳು ತೆರೆದುಕೊಳ್ಳುತ್ತವೆ. ಅಂತಹ ದೃಷ್ಟಿ ಹಾಗು ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನದ ಅಗ್ಯವಿದೆ ಎಂದರು.
ಕರ್ನಾಟಕ ಸ್ಪರ್ಧಾ ಅಕಾಡೆಮಿ ಶಿವಮೊಗ್ಗ ನಿರ್ದೇಶಕ ಮೋಹನಕುಮಾರ ಮಾತನಾಡಿ, ನಮ್ಮ ದುಡಿಮೆ ನಮ್ಮ ಕೈಯಲ್ಲಿದೆ. ಓದು ಕೇವಲ ಅಂಕ ಪಟ್ಟಿಯನ್ನು ಸುತ್ತುವುದು ಬೇಡ. ಕಾಲ ಹರಣಕ್ಕೆ ಅವಕಾಶ ನೀಡದೇ ಕಾಲವನ್ನು ದುಡಿಸಿಕೊಳ್ಳುವ ಇಚ್ಛಾಶಕ್ತಿ ಬೇಕು. ಅದಕ್ಕಾಗಿ ಯೋಜಿತ ನಡೆ ಬೇಕು. ನಾಳೆಯ ನಮ್ಮ ಭವಿತವ್ಯಕ್ಕಾಗಿ ಇಂದೇ ಶ್ರಮ ಬೇಕು. ಯಾವುದೇ ಡಿಗ್ರಿಗಳ ಹಿಂದೆ ನಿರಂತರ ಪರಿಶ್ರಮವಿದ್ದೇ ಇರುತ್ತದೆ. ಆದರೆ ಸ್ಪರ್ಧಾತ್ಮಕ ಯುಗದಲ್ಲಿ ಇರುವ ಪೈಪೋಟಿಯನ್ನು ಎದುರಿಸಿ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳಬೇಕಾಗಿದೆ ಎಂದರು.ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಉಪನ್ಯಾಸಕರಾದ ಪ್ರೊ. ಎಂ.ಬಿ. ನಾಯಕ್, ಪ್ರೊ. ರಾಘವೇಂದ್ರ ಮಾಡಳ್ಳಿ, ಡಾ. ಹರೀಶ ಟಿ.ಟಿ., ಪ್ರೊ. ಜಿತೇಂದ್ರ ಜಿ.ಟಿ., ಡಾ. ಪ್ರಕಾಶ ಜಿ.ವಿ., ಡಾ. ರುದ್ರೇಶ ಬಿ.ಎಸ್., ಪ್ರೊ. ದಿನೇಶ ಆರ್., ಡಾ. ವಿಶ್ವನಾಥ ಬೋಂದಾಡೆ, ಡಾ. ಪ್ರಕಾಶ ಹುಲ್ಲೂರ, ಪ್ರೊ. ಮಹೇಶ ಅಕ್ಕಿವಳ್ಳಿ, ಎಸ್.ಸಿ. ವಿರಕ್ತಮಠ, ಎಂ.ಎಂ. ನಿಂಗೋಜಿ ಅತಿಥಿಗಳಾಗಿದ್ದರು.