ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಇಲ್ಲಿನ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಆಂತರಿಕ ಗುಣಮಟ್ಟ ಭರವಸೆಯ ಕೋಶದ ಅಡಿಯಲ್ಲಿ ನ್ಯಾಕ್ ಪುನರಾವಲೋಕನ ಸಭೆ ಈಚೆಗೆ ಜರುಗಿತು.ಎಸ್.ಕ್ಯೂ.ಎ.ಸಿ. ರಾಜ್ಯ ನೋಡಲ್ ಅಧಿಕಾರಿ ಡಾ.ಕೆ.ವಿಕ್ರಂ ಮಾತನಾಡಿ, ಈಗಿನ ಶೈಕ್ಷಣಿಕ ವಾತಾವರಣದಲ್ಲಿ ಪ್ರತಿ ಪದವಿ ಕಾಲೇಜು ಯುಜಿಸಿ ನಿಯಮಗಳ ಪ್ರಕಾರ ನ್ಯಾಕ್ ಪ್ರಕ್ರಿಯೆಗೆ ಒಳಪಡುವುದು ಕಡ್ಡಾಯ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಥಮದರ್ಜೆ ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆದುಕೊಂಡು, ಉನ್ನತ ಶಿಕ್ಷಣ ಗುಣಮಟ್ಟದ ಹೆಚ್ಚಳಕ್ಕೆ ಶ್ರಮಿಸಲು ಹೇಳಿದರು.
ಪ್ರಾಂಶುಪಾಲ ಡಾ.ಆರ್.ಎಸ್.ಕಲ್ಲೂರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ಶೈಕ್ಷಣಿಕವಾಗಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದು ನ್ಯಾಕ್ ಪ್ರಕ್ರಿಯೆಗೆ ಒಳಪಡಲು ಸದಿಚ್ಛೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಪ್ರಥಮ ಗೋಷ್ಠಿಯಲ್ಲಿ ಜಂಟಿ ನಿರ್ದೇಶಕರ ಕಚೇರಿ ಧಾರವಾಡ ನ್ಯಾಕ್ ವಿಶೇಷ ಅಧಿಕಾರಿ ಪ್ರೊ. ಅಲ್ತಾಫ್ ಭಾಯ್ ನ್ಯಾಕ್ ಕ್ರೈಟೀರಿಯಾ ೧ರಿಂದ ೪ರ ಬಗ್ಗೆ ಮಾಹಿತಿ ನೀಡಿ ಮಾರ್ಗದರ್ಶನ ಒದಗಿಸಿದರು.
ಕಾರ್ಯಕ್ರಮದ ಎರಡನೇ ಗೋಷ್ಠಿಯಲ್ಲಿ ಜಂಟಿ ನಿರ್ದೇಶಕರ ಕಚೇರಿ ಧಾರವಾಡ ನ್ಯಾಕ್ ವಿಶೇಷ ಅಧಿಕಾರಿ ಡಾ.ಸುರೇಖಾ ಎನ್. ನ್ಯಾಕ್ ಕ್ರೈಟೀರಿಯಾ ೫ರಿಂದ ೭ರ ಬಗ್ಗೆ ಮಾಹಿತಿ ನೀಡಿ ಮಾರ್ಗದರ್ಶನ ಒದಗಿಸಿದರು.ಗೊಳಸಂಗಿ, ಸಿಂದಗಿ, ಮನಗೂಳಿ, ಇಂಡಿ, ದೇವರ ಹಿಪ್ಪರಗಿ, ಮಮದಾಪುರ, ಮುದ್ದೇಬಿಹಾಳ ಕಾಲೇಜುಗಳ ಪ್ರಾಂಶುಪಾಲರು, ಐಕ್ಯೂಎಸಿ ಸಂಚಾಲಕರು ಹಾಗೂ ಐಕ್ಯೂಎಸಿ ಸಹ ಸಂಚಾಲಕರು ಭಾಗವಹಿಸಿ ತಮ್ಮ ಕಾಲೇಜುಗಳ ನ್ಯಾಕ್ ತಯಾರಿ ಬಗ್ಗೆ ಮಂಡಿಸಿದರು.
ಕಾರ್ಯಕ್ರಮದಲ್ಲಿ ಡಾ.ರಾಜಶೇಖರ ಬೆನಕನಹಳ್ಳಿ, ಪ್ರೊ.ಎಂ.ಆರ್.ಕೆಂಭಾವಿ, ಪ್ರೊ.ರಮೇಶ ಬಳ್ಳೊಳ್ಳಿ, ಪ್ರೊ.ಲಕ್ಷ್ಮಿ ಮೋರೆ, ಡಾ.ದಾವಲಸಾ ಪಿಂಜಾರ, ನವೀನಗೌಡ ಬಿರಾದಾರ, ಸುಜಾತಾ ಬಿರಾದಾರ, ವೀರನಗೌಡ ಬಿರಾದಾರ ಹಾಗೂ ಕಾಲೇಜಿನ ಇತರ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ.ಚಿದಾನಂದ ಆನೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಭಾರತಿ ಹೊಸಟ್ಟಿ ವಂದಿಸಿದರು. ಪ್ರೊ.ಎಂ.ಆರ್.ಜೋಶಿ ಕಾರ್ಯಕ್ರಮ ನಿರೂಪಿಸಿದರು.