ಸಾರಾಂಶ
ಕಿವಿಗೆ ಹಾನಿಕಾರಕ ಔಷಧಿಗಳನ್ನು ಹಾಕಬಾರದು ಕಿವಿಯ ರಕ್ಷಣೆಗಾಗಿ ಕಲುಷಿತ ನೀರಿನಲ್ಲಿ ಈಜಾಡಬಾರದು. ಅತ್ಯಂತ ಜೋರಾದ ಶಬ್ದಗಳಿಂದ ದೂರವಿರಿ. ಕಿವಿನೋವು ಇತರೆ ತೊಂದರೆ ಕಂಡು ಬಂದಲ್ಲಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಕಿವಿ, ಮೂಗು, ಗಂಟಲು ತಜ್ಞರನ್ನು ಸಂಪರ್ಕಿಸಿ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಿವಿಯು ಮನುಷ್ಯನ ಪಂಚೇಂದ್ರಿಯಗಳಲ್ಲಿ ಪ್ರಮುಖ ಅಂಗ. ಪ್ರತಿಯೊಬ್ಬರೂ ಕಿವಿ ರಕ್ಷಣೆ ಮಾಡಿಕೊಳ್ಳುವುದು ಅಗತ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ್ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮದಡಿಯಲ್ಲಿ ವಿಶ್ವ ಶ್ರವಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬದಲಾಗುತ್ತಿರುವ ಮನಸ್ಥಿತಿ; ಕಿವಿ ಮತ್ತು ಶ್ರವಣ ಆರೈಕೆಯನ್ನು ಎಲ್ಲರೂ ವಾಸ್ತವವಾಗಿಸಲು ನಿಮ್ಮನ್ನು ಸಶಕ್ತ ಗೊಳಿಸಿಕೊಳ್ಳಿ’ ಎಂಬ ಘೋಷವಾಕ್ಯದೊಂದಿಗೆ ಅರಿವು ಮೂಡಿಸಲಾಗುತ್ತಿದೆ. ಕಿವಿಯೊಳಗೆ ಚೂಪಾದ ವಸ್ತುಗಳು, ಎಣ್ಣೆ, ನೀರು ಇತ್ಯಾದಿ ಹಾಕಬಾರದು. ರಸ್ತೆ ಬದಿಯಲ್ಲಿ ಗುಗ್ಗೆ ತೆಗೆಯುವವರಿಂದ ಕಿವಿಯನ್ನು ಸ್ವಚ್ಛಗೊಳಿಸಿಕೊಳ್ಳಬಾರದು ಎಂದರು.ಕಿವಿಗೆ ಹಾನಿಕಾರಕ ಔಷಧಿಗಳನ್ನು ಹಾಕಬಾರದು ಕಿವಿಯ ರಕ್ಷಣೆಗಾಗಿ ಕಲುಷಿತ ನೀರಿನಲ್ಲಿ ಈಜಾಡಬಾರದು. ಅತ್ಯಂತ ಜೋರಾದ ಶಬ್ದಗಳಿಂದ ದೂರವಿರಿ. ಕಿವಿನೋವು ಇತರೆ ತೊಂದರೆ ಕಂಡು ಬಂದಲ್ಲಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಕಿವಿ, ಮೂಗು, ಗಂಟಲು ತಜ್ಞರನ್ನು ಸಂಪರ್ಕಿಸುವಂತೆ ಅವರು ಮಾಹಿತಿ ನೀಡಿದರು.
ನಂತರ ಪ್ರಭಾರ ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ. ಮಂಗಳ ಮಾತನಾಡಿ, ಪ್ರತಿಯೊಬ್ಬರೂ ಮುನ್ನಚ್ಚರಿಕೆ ವಹಿಸಿಕೊಂಡು ಬಿಸಿಲಿನಿಂದ ದೇಹದ ರಕ್ಷಣೆ ಮಾಡಿಕೊಳ್ಳಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.ಈ ವೇಳೆ ಉಪ ಪ್ರಾಂಶುಪಾಲೆ ಎನ್.ಸ್ವಪ್ನ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್, ಶಿಕ್ಷಕರಾದ ಶಶಿಧರ್, ಆನಂದ್, ಆಲಿಯಾ, ಸರಿತಾ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ ಚಂದನ್ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಇದ್ದರು.