ಶಿಕ್ಷಣ ಪಡೆದುಕೊಂಡ ವಿದ್ಯಾರ್ಥಿಗಳೆಲ್ಲ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಿಲ್ಲ. ನಿರುದ್ಯೋಗ ಯುವಕರು ಸ್ವಯಂ ಉದ್ಯೋಗಕ್ಕೆ ಮುಂದಾಗುವುದು ಇಂದಿನ ಕಾಲದ ಅಗತ್ಯವಾಗಿದೆ ಎಂದು ಲೋಕಾಪುರ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರವಿಂದರಾವ ದೇಶಪಾಂಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಶಿಕ್ಷಣ ಪಡೆದುಕೊಂಡ ವಿದ್ಯಾರ್ಥಿಗಳೆಲ್ಲ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಿಲ್ಲ. ನಿರುದ್ಯೋಗ ಯುವಕರು ಸ್ವಯಂ ಉದ್ಯೋಗಕ್ಕೆ ಮುಂದಾಗುವುದು ಇಂದಿನ ಕಾಲದ ಅಗತ್ಯವಾಗಿದೆ ಎಂದು ಲೋಕಾಪುರ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರವಿಂದರಾವ ದೇಶಪಾಂಡೆ ಹೇಳಿದರು.ಜಾದವಜಿ ಶಿಕ್ಷಣ ಸಂಸ್ಥೆಯ ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಕ್ಯಾಂಪಸ್ ಬಜಾರ್ (ವಿದ್ಯಾರ್ಥಿಗಳ ಸಂತೆ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಮತ್ತು ಕಾಲೇಜು ಜೀವನ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ನಿರುದ್ಯೋಗಿಯಾಗಿ ವಿವಿಧ ಉದ್ಯೋಗಗಳಿಗಾಗಿ ಅಲ್ಲಿದಾಡದೆ ಸ್ವಯಂ ಉದ್ಯೋಗಗಳನ್ನು ಕೈಗೊಳ್ಳಬೇಕು. ವಿವಿಧ ಕೌಶಲ್ಯಗಳನ್ನು ಕಲಿಯುವ ಮೂಲಕ ನಾನು ಆರ್ಥಿಕವಾಗಿ ಸದೃಢತೆ ಹೊಂದಬೇಕು, ಕುಟುಂಬವನ್ನು ಆರ್ಥಿಕವಾಗಿ ಸದೃಢ ಮಾಡಬೇಕಾದ ಅಗತ್ಯವಿದೆ. ಅದಕ್ಕಾಗಿ ವಿದ್ಯಾರ್ಥಿಗಳಿಗೆ ವ್ಯಾಪಾರ ಮತ್ತು ವಹಿವಾಟು, ಮಾರುಕಟ್ಟೆಯ ಪರಿಚಯ ಮತ್ತು ಲಾಭ, ನಷ್ಟದ ವ್ಯವಹಾರ ಜ್ಞಾನ ಬೆಳೆಸುವ ಸದುದ್ದೇಶದಿಂದ ಮಹಾವಿದ್ಯಾಲಯದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಾದವಜಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಅಧುನಿಕ ಯುಗದಲ್ಲಿ ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ತರಕಾರಿ ಮತ್ತು ಹಣ್ಣುಗಳ ಮಾರಾಟ ಅಧಿಕವಾಗುತ್ತಿದೆ. ಇವುಗಳ ಜೊತೆಗೆ ಜಂಕ್ಫುಡ್ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ನಮ್ಮ ದೇಶದ ಯುವಕರು ಸದೃಢವಾಗಿರಬೇಕು, ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದರ ಜೊತೆಗೆ ನಿರುದ್ಯೋಗ ನಿವಾರಣೆಗಾಗಿ ವಿವಿಧ ಉದ್ಯಮಗಳನ್ನು ಆರಂಭಿಸಬೇಕು. ಸಣ್ಣಪುಟ್ಟ ಉದ್ಯೋಗ ಮತ್ತು ವ್ಯಾಪಾರಗಳನ್ನ ಆರಂಭಿಸುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಅದಕ್ಕಾಗಿ ಮಾರುಕಟ್ಟೆಯ ಮತ್ತು ವ್ಯವಹಾರಿಕ ಜ್ಞಾನ ವಿದ್ಯಾರ್ಥಿಗಳಿಗೆ ಇಂದು ಅಗತ್ಯ. ಅದಕ್ಕಾಗಿ ಕಾಲೇಜ್ ಆವರಣದಲ್ಲಿ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು. ಈ ವೇಳೆ ಮುಖ್ಯ ಅತಿಥಿಗಳಾಗಿ ಉದ್ಯಮಿ ವಿನೋದ ಶೆಟ್ಟಿ, ಪ್ರಾಚಾರ್ಯ ಆರ್.ಎಂ.ದೇವರೆಡ್ಡಿ, ಉಪಪ್ರಾಚಾರ್ಯ ಆರ್.ಎ.ನಾಯಕ, ಸಮನ್ವಯ ಅಧಿಕಾರಿ ಬಿ.ಎ.ಬಮ್ಮನಾಳೆ, ಮಹಿಳಾ ಒಕ್ಕೂಟದ ಅಧ್ಯಕ್ಷ ಎಂ.ಜಿ.ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಗಮನ ಸೆಳೆದ ಕ್ಯಾಂಪಸ್ ಬಜಾರ್
ಅಕ್ಕವ್ರ ಅಣ್ಣಾವ್ರ ಬನ್ನಿ ತಗೋರಿ....ಉಳ್ಳಾಗಡ್ಡಿ, ಬದ್ನಿಕಾಯಿ, ಟೊಮೆಟೊ, ತೊಪ್ಪಲಪಲ್ಲೆ, ಬಾಳೆ ಹಣ್ಣು, ಚುರುಮುರಿ, ಸೇವ, ಪಾನಿಪುರಿ, ಪಾವಬಾಜಿ ಇನ್ನಿತರ ತಿಂಡಿ ತಿನಿಸುಗಳು ಅದಾವ ಬರ್ರಿ ತಗೋರಿ.ಇದು ಯಾವುದೋ ಮಾತುಕಟ್ಟೆಯಲ್ಲಿನ ಸದ್ದು ಗದ್ದಲ ಅಲ್ಲ. ಇದು ಇಲ್ಲಿನ ಲೋಕಾಪುರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ನಡೆಸಿದ ಕ್ಯಾಂಪಸ್ ಬಜಾರ್ ಸನ್ನಿವೇಶ. ಮಹಾವಿದ್ಯಾಲಯದ ವಿದ್ಯಾರ್ಥಿಗಳ ತರಕಾರಿ, ಹಣ್ಣು ಹಂಪಲುಗಳನ್ನು, ಇನ್ನಿತರ ತಿಂಡಿ ತಿನಿಸುಗಳನ್ನು ಖರೀದಿಸಿ ಅವನ್ನು ತಂದು ಕಾಲೇಜು ಆವರಣದಲ್ಲಿ ಉಪನ್ಯಾಸಕರ ಮಾರ್ಗದರ್ಶನದಂತೆ ಕ್ಯಾಂಪಸ್ ಬಜಾರದಲ್ಲಿ ವ್ಯಾಪಾರ ವಹಿವಾಟ ನಡೆಸಿದರು. ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳ ಪಾಲಕರು ಮತ್ತು ಸಾರ್ವಜನಿಕರು ಇಲ್ಲಿಗೆ ಆಗಮಿಸಿ ಮಕ್ಕಳಿಂದ ಕಾಯಿಪಲ್ಲೆ ಹಾಗೂ ಇತರ ವಸ್ತುಗಳನ್ನು ಖರೀದಿ ಮಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ಶಿಕ್ಷಣ ಪಡೆದ ನಂತರ ಯುವಕರು ಉದ್ಯೋಗಕ್ಕಾಗಿ ಅಲೆದಾಡದೆ ಸ್ವಯಂ ಉದ್ಯೋಗಗಳನ್ನು ಆರಂಭಿಸುವುದು ಅಗತ್ಯ. ಸಣ್ಣ ಉದ್ಯಮಗಳನ್ನು ಆರಂಭಿಸುವ ಮೂಲಕ ಬೇರೆಯವರಿಗೆ ಉದ್ಯೋಗವಕಾಶಗಳನ್ನು ನೀಡಬೇಕು. ಇದು ಕೇವಲ ಒಂದು ಉದ್ಯೋಗಾವಕಾಶ ಮಾತ್ರವಲ್ಲದೇ ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ಯುವ ಪೀಳಿಗೆಯ ಸ್ವಾವಲಂಬನೆಗೆ ಭದ್ರ ಬುನಾದಿಯಾಗಲಿದೆ.
-ಅರವಿಂದರಾವ್ ದೇಶಪಾಂಡೆ, ಅಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ. ಅಥಣಿ.ಪೌಷ್ಟಿಕ ಆಹಾರ ಮತ್ತು ವಿವಿಧ ಬಗೆಯ ಹಣ್ಣು ತರಕಾರಿಗಳಲ್ಲಿರುವ ಪೋಷಕಾಂಶಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಯುವಕರಲ್ಲಿ ಸ್ವಂತ ಉದ್ಯೋಗ ಹಾಗೂ ಮಾರುಕಟ್ಟೆಗೆ ಜ್ಞಾನ ಅರಿತುಕೊಳ್ಳಲು ಈ ಕಾರ್ಯಕ್ರಮ ಏರ್ಪಡಿಸಿದ್ದು ವಿಶಿಷ್ಟ ಹಾಗೂ ವಿನೂತನವಾಗಿದೆ.
-ವಿಲಾಸರಾವ್ ಕುಲಕರ್ಣಿ, ಅಥಣಿ.