ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪೋಷಕರು ಹಾಗೂ ಶಿಕ್ಷಕರ ಸಹಭಾಗಿತ್ವದಿಂದ ಶಾಲೆ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಸರ್ಕಾರದ ಅನೇಕ ಕಾರ್ಯಕ್ರಮಗಳು ಅತ್ಯುತ್ತಮವಾಗಿವೆ. ವಿದ್ಯಾರ್ಥಿಗಳ ಪ್ರತಿಭೆ ಹೊರತರುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಸಮರ್ಪಕ ರೀತಿಯಲ್ಲಿ ಶಿಕ್ಷಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅಭಿಪ್ರಾಯಪಟ್ಟರು.ತಾಲೂಕಿನ ಕಾಚಿನಕಟ್ಟೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ನಡೆದ ಪ್ರೌಢಶಾಲೆಗಳ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ, ನಲಿಕಲಿ ಮೊದಲಾದ ಸರ್ಕಾರದ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ. ಕೆಲವು ಶಾಲೆಗಳು ಮಾತ್ರ ಸರ್ಕಾರದ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿವೆ. ಲಾದರೆ, ಎಲ್ಲ ಶಾಲೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಆಗಿರುವ ಕಾರ್ಯಕ್ರಮಗಳನ್ನು ತಪ್ಪದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಮಕ್ಕಳು ಎಲ್ಲರ ಜೊತೆ ನಿರ್ಭೀತಿಯಿಂದ ಮತ್ತು ಮುಕ್ತವಾಗಿ ಬೆರೆಯುವ ಮನಃಸ್ಥಿತಿ ಬೆಳೆಸಿಕೊಳ್ಳಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಿದೆ. ಹಾಗಾಗಿ, ಪ್ರತಿಯೊಬ್ಬ ಮಗುವೂ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪೋಷಕರು ಮತ್ತು ಶಿಕ್ಷಕರು ಮುತುವರ್ಜಿ ವಹಿಸಬೇಕು ಎಂದರು.
ಇಂದು ಅನೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸರಿ ಸಮನಾಗಿ ಸೌಲಭ್ಯಗಳನ್ನು ಹೊಂದಿದ್ದು, ಖಾಸಗಿ ಶಾಲೆಗಳನ್ನು ಮೀರಿಸುವ ವಾತಾವರಣ ಹೊಂದಿದೆ. ಕೇವಲ ಇವು ಸರ್ಕಾರಿ ಶಾಲೆಗಳು ಎಂಬ ಒಂದೇ ಕಾರಣಕ್ಕೆ ಪೋಷಕರು ಇಂತಹ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೆ ಸರಿಯಬಾರದು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಬಿಇಒ ನಾಗರಾಜ್, ಗ್ರಾ.ಪಂ ಅಧ್ಯಕ್ಷೆ ಗೀತಾ ಚಂದ್ರಶೇಖರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಎಸ್. ವಿಶ್ವನಾಥ್ ಮುಖ್ಯಶಿಕ್ಷಕ ಅಶೋಕಕುಮಾರ್, ಪ್ರಾಂಶುಪಾಲ ಪಂಡರಿನಾಥ್ ಪ್ರಮುಖರಾದ ಲೋಕೇಶಪ್ಪ, ರುದ್ರಪ್ಪ, ನಿರಂಜನಮೂರ್ತಿ, ದಿನೇಶ್, ರಾಘವೇಂದ್ರ, ಕಾಳಾನಾಯ್ಕ್, ನಿಂಗಪ್ಪ, ಬಸವರಾಜ್ ಮಠದ್, ಚೆನ್ನಮಲ್ಲಪ್ಪ, ಶಿವಪ್ಪ ಸಂಗಣ್ಣನವರ್, ನಾಗೇಶ್, ಜನಾರ್ಧನ್, ವೀರಭದ್ರ, ರೇಣುಕಾ ಮತ್ತಿತರರಿದ್ದರು.
- - - ಕೋಟ್ಮಕ್ಕಳು ಪೋಷಕರಿಗಿಂತ ಹೆಚ್ಚಾಗಿ ಶಿಕ್ಷಕರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಹಾಗಾಗಿ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವ ಶಿಕ್ಷಕರು ಪಠ್ಯದ ಜೊತೆಗೆ ಪಠ್ಯೇತರ ಶಿಕ್ಷಣದ ಕಡೆಗೂ ಮಕ್ಕಳಿಗೆ ಆಸಕ್ತಿ ಬೆಳೆಸಬೇಕು- ಶಾರದಾ ಪೂರ್ಯಾನಾಯ್ಕ್, ಶಾಸಕಿ, ಗ್ರಾಮಾಂತರ ಕ್ಷೇತ್ರ
- - - -23kpsmg07.jpg:ಕಾಚಿನಕಟ್ಟೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಪ್ರೌಢಶಾಲೆಗಳ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕಿ ಶಾರದಾ ಪೂರ್ಯನಾಯ್ಕ್ ಉದ್ಘಾಟಿಸಿದರು.