ಮೋದಿಯವರನ್ನು ಮೊದಲನೇ ಸ್ಥಾನಕ್ಕೆ ತರುವ ಕರ್ತವ್ಯ ನಮ್ಮೆಲ್ಲರದು: ಸಂಸದ ಬಿ.ವೈ.ರಾಘವೇಂದ್ರ

| Published : Jul 27 2025, 01:51 AM IST

ಮೋದಿಯವರನ್ನು ಮೊದಲನೇ ಸ್ಥಾನಕ್ಕೆ ತರುವ ಕರ್ತವ್ಯ ನಮ್ಮೆಲ್ಲರದು: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿಯಾಗಿ ಹೆಚ್ಚು ಸೇವೆ ಸಲ್ಲಿಸಿರುವ ಎರಡನೇ ಸ್ಥಾನದಲ್ಲಿ ನರೇಂದ್ರ ಮೋದಿಯವರು ಇದ್ದಾರೆ, ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ತರುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಧಾನಿಯಾಗಿ ಹೆಚ್ಚು ಸೇವೆ ಸಲ್ಲಿಸಿರುವ ಎರಡನೇ ಸ್ಥಾನದಲ್ಲಿ ನರೇಂದ್ರ ಮೋದಿಯವರು ಇದ್ದಾರೆ, ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ತರುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಎ ಮಂಡಲ ಸಮಿತಿಯ ಹೊಸ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಇಂದಿರಾಗಾಂಧಿಯವರು, ಜವಾರಹಲಾಲ್ ನೆಹರೂ ಅವರು ಪ್ರಧಾನ ಮಂತ್ರಿಯಾಗಿದ್ದರು. ಆದರೆ, ನರೇಂದ್ರ ಮೋದಿಯವರು ಯಾವಾಗಲೂ ದೇಶ ಮುಖ್ಯ ಅಂತ ಸೇವೆ ಸಲ್ಲಿಸುತ್ತಿದ್ದಾರೆ, ಮೋದಿ ಅವರಿಗೆ ಶಕ್ತಿ ತುಂಬುವ ಕಾರ್ಯವನ್ನು ನಾವೆಲ್ಲ ಸೇರಿ ಮಾಡಬೇಕಿದೆ. ಆ ಸವಾಲನ್ನು ನಾವೆಲ್ಲ ಎದುರಿಸುವ ಪವಿತ್ರವಾದ ದಿನ ಇದಾಗಿದೆ ಎಂದರು.

ಬಿಜೆಪಿ ಜಗತ್ತಿನಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ. ಹಿರಿಯರ ಅತ್ಯುತ್ತಮ ಸಂಘಟನೆ, ಅಧಿಕಾರದ ಅವಧಿಯಲ್ಲಿ ಉತ್ತಮ ಆಡಳಿತ ಹಾಗೂ ಜನಪರ ಯೋಜನೆಗಳಿಂದ ಜನ ಸಾಮಾನ್ಯರ ನಂಬಿಕೆ ಸೇರಿದಂತೆ ಇನ್ನೂ ಅನೇಕ ಧೃಡ ನಿರ್ಧಾರದಿಂದ ಪಕ್ಷ ಇಂದು ಐತಿಹಾಸಿಕ ಕಾಲಘಟ್ಟಕ್ಕೆ ಬಂದು ನಿಂತಿದೆ ಎಂದು ಹೇಳಿದರು.

ಹಿರಿಯರ ನಿರಂತರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಯುವಕರ ತಂಡವನ್ನು ವಿಶ್ವಾಸಕ್ಕೆ ಪಡೆದುಕೊಂಡು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪಕ್ಷದ ಬಲವರ್ಧನೆಗೆ ನಿರಂತರ ಶ್ರಮಿಸಿ, ಮುಂದಿನ ದಿನಗಳಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪಕ್ಷ ಸಂಘಟಿಸುವಂತೆ ಕರೆ ನೀಡಿದರು.

ಸಿಗಂದೂರು ಸೇತುವೆ ಉದ್ಘಾಟನೆಯಾದ ಪರ ವಿರೋಧ ಎರಡನ್ನು ನೋಡಿದ್ದೇವೆ. ಆದರೆ, ನಿಮ್ಮೆಲ್ಲರ ಸಹಕಾರದಿಂದ ಬಹಳ ಚೆನ್ನಾಗಿ ಕಾರ್ಯಕ್ರಮ ರೂಪುಗೊಂಡಿತು. ದಾವಣಗೆರೆ ಶಿವಮೊಗ್ಗ ಹೈವೆ ಆಗಬೇಕಿದೆ, ತೀರ್ಥಹಳ್ಳಿಗೆ ಟನಲ್ ಆಗಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ರಾಜ್ಯದಲ್ಲಿ ಸಂಘಟನಾ ಪರ್ವ ಆರಂಭವಾಗಿದೆ. ಸಂಘಟನೆಗೆ ಶಕ್ತಿ ಕೊಡುವ ಕೆಲಸ ನಡೆಯುತ್ತಿದೆ ಎಂದರು.

ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷರಾಗಿ ಮೋಹನ್ ರೆಡ್ಡಿ, ಬಿಜೆಪಿ ಶಿವಮೊಗ್ಗ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೆ ನವಲೆ, ಬಿಜೆಪಿ ಶಿವಮೊಗ್ಗ ನಗರ ಪ್ರಧಾನ ಕಾರ್ಯದರ್ಶಿ ಹೆಚ.ಕೆ.ದೀನ್ ದಯಾಳ್ ಪದಗ್ರಹಣ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ, ಮಾಜಿ ಶಾಸಕ ಅಶೋಕ್ ನಾಯ್ಕ್‌, ಟಿ.ಡಿ.ಮೇಘರಾಜ್ ಮತ್ತಿರರಿದ್ದರು.