ಸಾಧನೆ ಜತೆಗೆ ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ

| Published : Jun 17 2025, 12:57 AM IST

ಸಾರಾಂಶ

ಗ್ರಾಮೀಣ ಪ್ರದೇಶದ ಕುಗ್ರಾಮದಲ್ಲಿ ಮಾರ್ಗದರ್ಶಕರಾಗಿ, ಸಲಹೆ ನೀಡುತ್ತಾ ಜತೆಗೆ ಎಚ್ಚರಿಕೆಯ ನುಡಿಗಳನ್ನಾಡುವ ಹಿರಿಯರು ಅಮೂಲ್ಯವಾದ ರತ್ನವಿದ್ದಂತೆ ಎಂದು ಚೇತನ್ ಜಿ.ಸಿ. ಅಭಿಪ್ರಾಯಪಟ್ಟರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಎಂಬಿಬಿಎಸ್, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಐವರು ಹಿರಿಯ ಮಹಿಳೆಯರು, ಉತ್ತಮ ರೈತರಾದ ಜಯಣ್ಣ ಹಾಗೂ ಪರಮೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು ಮತ್ತು ಒಂದರಿಂದ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ೨೨ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಪುಟ್ಟ ಮಕ್ಕಳಿಗೆ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ನೀಡಿ ಉತ್ತೇಜಿಸಲಾಯಿತು. ಜತೆಗೆ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಗ್ರಾಮೀಣ ಪ್ರದೇಶದ ಕುಗ್ರಾಮದಲ್ಲಿ ಮಾರ್ಗದರ್ಶಕರಾಗಿ, ಸಲಹೆ ನೀಡುತ್ತಾ ಜತೆಗೆ ಎಚ್ಚರಿಕೆಯ ನುಡಿಗಳನ್ನಾಡುವ ಹಿರಿಯರು ಅಮೂಲ್ಯವಾದ ರತ್ನವಿದ್ದಂತೆ ಎಂದು ಚೇತನ್ ಜಿ.ಸಿ. ಅಭಿಪ್ರಾಯಪಟ್ಟರು.

ತಾಲೂಕಿನ ಗುಳಿಸಾತೇನಹಳ್ಳಿಯಲ್ಲಿ ಸ್ನೇಹಜೀವಿ ಕ್ರಿಕೇಟರ್ಸ್‌ನ ಉತ್ಸಾಹಿ ಯುವಕರು ಆಯೋಜನೆ ಮಾಡಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಹಿರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ನಮ್ಮೂರಿನ ಯುವಕರ ಸಾಧನೆ ಪ್ರಶಂಸನೀಯ. ಯುವಕರನ್ನು ಉತ್ತೇಜಿಸುವ ಜತೆಗೆ ಹಿರಿಯರಿಗೆ ಗೌರವ ಸರ್ಮಪಣೆ ನಮ್ಮಗಳ ಆದ್ಯ ಕರ್ತವ್ಯವಾದ್ದರಿಂದ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾಗಲಿದೆ ಎಂದರು.

ನಮ್ಮೂರಿನಲ್ಲಿ ಕೃಷಿ ಹಾಗೂ ಹೈನುಗಾರಿಕೆ ಜೀವನಕ್ಕೆ ಆಧಾರವಾಗಿದ್ದು, ಇಂತಹ ಸಂದರ್ಭದಲ್ಲಿ ಮಕ್ಕಳು ಮನೆಯಲ್ಲಿ ಪೋಷಕರಿಗೆ ಸಹಾಯ ಮಾಡುತ್ತಾ, ಗ್ರಾಮೀಣ ಜನರ ಕಷ್ಟವನ್ನು ಅರಿತು ಮುನ್ನಡೆಯುವ ಕಾರಣದಿಂದ ಅವರಲ್ಲಿ ಹೆಚ್ಚಿನ ಆತ್ಮವಿಶ್ವಾಸ, ಕಲಿಯಬೇಕೆಂಬ ತುಡಿತ ಹಾಗೂ ಸಾಧಿಸಬೇಕೆಂಬ ಹಠದಿಂದ ನಮ್ಮೂರಿನವರು ಸರ್ಕಾರಿ ನೌಕರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾದ ಕಾರಣದಿಂದ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದ್ದೇವೆ ಎಂಬುದಕ್ಕೆ ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸಲು ಆಗಮಿಸಿರುವ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ ಎಂದು ಸಂತಸದಿಂದ ನುಡಿದರು.ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಎಂಬಿಬಿಎಸ್, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಐವರು ಹಿರಿಯ ಮಹಿಳೆಯರು, ಉತ್ತಮ ರೈತರಾದ ಜಯಣ್ಣ ಹಾಗೂ ಪರಮೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು ಮತ್ತು ಒಂದರಿಂದ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ೨೨ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಪುಟ್ಟ ಮಕ್ಕಳಿಗೆ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ನೀಡಿ ಉತ್ತೇಜಿಸಲಾಯಿತು. ಜತೆಗೆ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ನೀಡಲಾಯಿತು. ಗ್ರಾಮ ಪಂಚಾಯತ್ ಸದಸ್ಯ ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸ್ನೇಹಜೀವಿ ಕ್ರಿಕೇಟರ್ಸ್‌ ಅಧ್ಯಕ್ಷ ಖದೀರ್ ಅಹಮದ್ ಸ್ವಾಗತಿಸಿದರು, ಕಾರ್ಯದರ್ಶಿ ರಮೇಸ್ ಜಿ.ಆರ್‌. ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶೇಷಪ್ಪಶೆಟ್ಟರು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್, ಹಿರಿಯರಾದ ಜವರೇಗೌಡ, ರಂಗಸ್ವಾಮಿ, ಜೀವನ್, ಚಾರ್ಕಣ್ಣ, ಶಿಕ್ಷಕ ನಂಜೇಗೌಡ, ರವೀಶ್ ಇತರರು ಇದ್ದರು.