ಶಾಂತವೀರ ಮಹಾಸ್ವಾಮೀಜಿ ಅಬಿಮತ । 99ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಹಿಂದುಳಿದ ಪ್ರದೇಶದ ಜನರು ಸಮಾಜದ ಮುಖ್ಯವಾಹಿನಿಗೆ ಬರಲು ಶಿವಶರಣರ ಆದರ್ಶ ಹಾಗೂ ಸಂದೇಶಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳುವುದು ಅಗತ್ಯ ಎಂದು ಕಡ್ಲೆಬಾಳು ಗವಿಸಿದ್ದೇಶ್ವರ ಶಾಖಾಮಠದ ಪೀಠಾಧ್ಯಕ್ಷ ಪೂಜ್ಯ ಮರಿ ಶಾಂತವೀರ ಮಹಾಸ್ವಾಮೀಜಿ ತಿಳಿಸಿದರು.ತಾಲೂಕಿನ ಸಿದ್ದಯ್ಯನ ಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾಮಠ, ಚಿತ್ತರಗಿ ಜ್ಯೋತಿ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಕ್ರೀಡಾ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 99ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿದ್ದಯ್ಯನ ಕೋಟೆ ಶ್ರೀಗಳು ಕಾಯಕ, ದಾಸೋಹ ಹಾಗೂ ಕೃಷಿ ಸೇವೆಯ ಮೂಲಕ ಈ ಭಾಗದಲ್ಲಿ ಬಸವತತ್ವವನ್ನು ಸಾರುತ್ತಿರುವುದಷ್ಟೇ ಅಲ್ಲದೆ ತಾವೂ ಆ ತತ್ವದಂತೆ ನಡೆಯುತ್ತಿರುವುದು ಸಂತಸದ ವಿಷಯ. ಶ್ರೀಗಳು ಮಹಾಂತ ಜೋಳಿಗೆ ಕಾರ್ಯಕ್ರಮಗಳ ಮೂಲಕ ಜನರ ದುಶ್ಚಟಗಳನ್ನು ಬಿಡಿಸಲು ಶ್ರಮಿಸುತ್ತಿರುವುದು ಶ್ಲಾಘನೀಯವಾದ ನಡೆ ಎಂದು ಪ್ರಶಂಸಿಸಿದರು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ಬಸವಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ದೇವರನ್ನು ಹುಡುಕುತ್ತಾ ಹೋಗಿ ಕಾಲಹರಣ ಮಾಡುವ ಬದಲು ತನ್ನ ತಾನಾರೆಂದರಿದರೆ ತಾನೇ ದೇವನೋಡಾ ಅಪ್ರಮಾಣ ಕೂಡಲ ಸಂಗಮದೇವ ಎಂಬ ಶರಣರ ಸಂದೇಶವನ್ನು ಅರ್ಥೈಸಿಕೊಂಡು ಬಾಳಬೇಕು. ಪ್ರತಿಯೊಬ್ಬರೂ ಇಷ್ಟಲಿಂಗ ಧರಿಸಿ, ಆತ್ಮಾವಲೋಕನದೊಂದಿಗೆ ಬಸವತತ್ವವನ್ನು ಪಾಲಿಸಬೇಕು. ಕೇವಲ ಬಾಹ್ಯ ಪೂಜೆಗಳಿಗಿಂತ ತಂದೆ-ತಾಯಿಗಳಲ್ಲಿ, ದೀನ-ದಲಿತರಲ್ಲಿ, ಬಡ ರೋಗಿಗಳಲ್ಲಿ ಹಾಗೂ ಅಸಹಾಯಕ ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣುವ ಮಾನವೀಯ ಗುಣ ಬೆಳೆಸಿಕೊಳ್ಳಬೇಕು ಎಂದರು.
ಈ ವೇಳೆ ದಾಸೋಹ ಸೇವೆ ಸಲ್ಲಿಸಿದ ರೇಷ್ಮೆ ಸೀರೆ ತಯಾರಿಕೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಮೇಶ್ ವಾಂಜ್ರೆ ಮಾತನಾಡಿ, ಸಿದ್ದಯ್ಯನ ಕೋಟೆಯ ಶ್ರೀಗಳು ಬಸವಣ್ಣನವರ ತತ್ವದಂತೆ ಕಾಯಕ-ದಾಸೋಹ ಹಾಗೂ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ನಮಗೆ ಪ್ರೇರಣೆ. ಶ್ರೀಮಠಕ್ಕೆ ಸೇವೆ ಸಲ್ಲಿಸುವ ಸೌಭಾಗ್ಯ ಸಿಕ್ಕಿರುವುದು ಸಂತಸ ತಂದಿದೆ. ನಾವೆಲ್ಲರೂ ನಿತ್ಯ ವಿಭೂತಿ ಧರಿಸುವ ಮೂಲಕ ಶರಣರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ ಪಿ.ಆರ್.ಕಾಂತರಾಜ್, ಜಾತ್ರಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಕೆ.ಬಸಣ್ಣ, ಬಸವ ಕೇಂದ್ರದ ಅಧ್ಯಕ್ಷ ಎಂ.ಬಿ.ಭೋಗೇಶ್ ಗೌಡ, ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ.ಪಿ.ಪಂಪಾಪತಿ, ಡಾ.ರಂಗಪ್ಪ, ಎಸ್.ಪಿ.ಲಕ್ಷ್ಮಣ್, ಎಂ.ನುಂಕೇಶ್, ಅಕ್ಕನ ಬಳಗದ ಅಧ್ಯಕ್ಷೆ ಸಂಧ್ಯಾ, ವಿಜಯ ಮಹಾಂತೇಶ್ವರ ಮಹಿಳಾ ಸಂಘದ ಅಧ್ಯಕ್ಷೆ ಪಿ. ತುಳಸಿ ಇದ್ದರು.