ಉತ್ತರ ಕರ್ನಾಟಕಕ್ಕೆ ಅಗತ್ಯ ರೈಲ್ವೆ ಸೌಲಭ್ಯ ಇಲ್ಲದಿರುವುದು ವಿಷಾದನೀಯ ಸಂಗತಿ ಎಂದು ಕರವೇ ಜಿಲ್ಲಾಧ್ಯಕ್ಷ ಮುತ್ತುರಾಜ್ ಅರವಿಂದ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರ ಕರ್ನಾಟಕಕ್ಕೆ ಅಗತ್ಯ ರೈಲ್ವೆ ಸೌಲಭ್ಯ ಇಲ್ಲದಿರುವುದು ವಿಷಾದನೀಯ ಸಂಗತಿ ಎಂದು ಕರವೇ ಜಿಲ್ಲಾಧ್ಯಕ್ಷ ಮುತ್ತುರಾಜ್ ಅರವಿಂದ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕಕ್ಕೆ ಅಗತ್ಯ ರೈಲ್ವೆ ಮಾರ್ಗಗಳಿಲ್ಲದಿರುವುದು ಹಾಗೂ ಅವಶ್ಯಕ ರೈಲ್ವೆ ಸೌಲಭ್ಯಗಳು ಇಲ್ಲದಿರುವುದು ವಿಷಾದನೀಯ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ರೈಲು ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಕಾಜಿಯವರ ನೇತೃತ್ವದ ರೈಲ್ವೆ ಹೋರಾಟಕ್ಕೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ರೈಲ್ವೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತ್ಬುದ್ದೀನ್ ಕಾಜಿ ಮಾತನಾಡಿ, ಕಳೆದ ದಶಕಗಳಿಂದ ಕುಡಚಿ-ಬಾಗಲಕೋಟ ರೈಲ್ವೆ ಕಾಮಗಾರಿ ಪೂರ್ಣಗೊಳ್ಳದಿರುವುದು, ಬಾಗಲಕೋಟೆಯಿಂದ ಲೋಕಾಪೂರವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸಿ, ಲೋಕಾಪುರ - ಧಾರವಾಡ ಹೊಸ ರೈಲು ಮಾರ್ಗ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಉತ್ತರ ಕರ್ನಾಟಕ ಭಾಗದ ಜನರು ಸಾವಿರಾರು ಸಂಖ್ಯೆಯಲ್ಲಿ ಗೋವಾಕ್ಕೆ ದುಡಿಯಲು ಹೋಗುತ್ತಾರೆ. ಅವರ ಅನುಕೂಲಕ್ಕಾಗಿ ಉತ್ತರ ಕರ್ನಾಟಕದಿಂದ ರೈಲ್ವೆ ಸಂಪರ್ಕ ಕಲ್ಪಿಸುವುದು ಅತ್ಯವಶ್ಯಕವಾಗಿದೆ. ಬಿಜಾಪುರ ಬಾಗಲಕೋಟೆ ಜಿಲ್ಲೆಗಳ ಭಕ್ತಾದಿಗಳಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಕೂಲ ಆಗುವಂತೆ ರೈಲ್ವೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ಅನೇಕ ಬೇಡಿಕೆಗಳಿಗೆ ಆಗ್ರಹಿಸಿ ಮುಂಬರುವ ದಿನಗಳಲ್ಲಿ ವಿನೂತನವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಬಾಗಲಕೋಟೆ - ಕುಡಚಿ ರೈಲ್ವೆ ಮಾರ್ಗಕ್ಕೆ ಒಳಪಡುವ ಲೋಕಾಪುರ, ಮುಧೋಳ, ಮಹಾಲಿಂಗಪುರ, ಜಮಖಂಡಿ, ರಬಕವಿ, ಬನಹಟ್ಟಿ , ತೇರದಾಳ, ಹಾರೂಗೇರಿ ಮತ್ತು ಕುಡಚಿ ಪಟ್ಟಣಗಳು ಸೇರಿದಂತೆ ಕರ್ನಾಟಕದ ವಿವಿಧ ಸಂಘ - ಸಂಸ್ಥೆಗಳು , ಜನಪರ ಸಂಘಟನೆಗಳು ಪ್ರಗತಿ ಪರ ಚಿಂತಕರು ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಕಳೆದ 35 ವರ್ಷಗಳಿಂದ ನಿರಂತರವಾಗಿ ಜನಪರ, ಅಭಿವೃದ್ಧಿ ಪರ ಹೋರಾಟಗಳನ್ನು ಮಾಡುತ್ತಿರುವ ಕುತ್ಬುದ್ದಿನ್ ಕಾಜಿಯವರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಬಸವರಾಜ್ ತಾಳಿಕೋಟಿ, ತಿಪ್ಪಣ್ಣ ಮೇಟಿ, ಗೋವಾದವರಾದ ಮಂಜುನಾಥ್ ನಾಟಿಕರ್, ಬಸು ಗೌಡರ್ ಹುಬ್ಬಳ್ಳಿ ಮಂಜುನಾಥ್ ಲೋತಿಮಠ, ಗದಗಿನ ತಿಪ್ಪಣ್ಣ ದೋಣಿ, ಪ್ರಭು ಹಳ್ಳೂರ್, ಪ್ರಶಾಂತ್ ವಾಲಿ, ರವಿ ಗುಳಸಂಗಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.