ಸಾರಾಂಶ
ಮುಂಡರಗಿ: ಸೇವೆಯಿಂದ ನಿವೃತ್ತಿಯಾದವರಿಗೆ ಅವರ ಶಾಲೆಯ, ಕಚೇರಿಯ ಸಿಬ್ಬಂದಿ ಸನ್ಮಾನಿಸಿ ಮನೆಗೆ ಕಳಿಸುವುದು ವಾಡಿಕೆ. ಆದರೆ ನಿವೃತ್ತಿಯಾದವರೇ ತಮಗೆ ವಿದ್ಯಾರ್ಥಿ ದೆಸೆಯಿಂದ ಹಿಡಿದು ನಿವೃತ್ತಿಯಾಗುವವರೆಗೂ ಉಪಕಾರ ಸ್ಮರಣೆ, ಸಹಾಯ ಸಹಕಾರ ಮಾಡಿದವರೆಲ್ಲರಿಗೂ ಸತ್ಕರಿಸಿ, ಸ್ಮರಿಸಿ, ಶರಣು ಸಮರ್ಪಣೆ ಮಾಡುವುದು ವಿಶೇಷವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಅವರು ಬುಧವಾರ ಮುಂಡರಗಿ ವಿ.ಜಿ. ಲಿಂಬಿಕಾಯಿ ಶಾಲೆಯ ಆವರಣದಲ್ಲಿ ಕೊರ್ಲಹಳ್ಳಿ ಗ್ರಾಮದ ಕೆ.ಎಚ್. ಕುರುಡಗಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಡಿ.ಜಿ. ಪೂಜಾರ ಅವರ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶರಣು ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ 10 ಮಕ್ಕಳಿಗಿಂತ ಕಡಿಮೆ ಮಕ್ಕಳ ಸಂಖ್ಯೆ ಇರುವ ಸುಮಾರು 1900 ಸರ್ಕಾರಿ ಶಾಲೆಗಳನ್ನು ಗುರುತಿಸಿದ್ದು, ಮುಂಬರುವ ದಿನಗಳಲ್ಲಿ ಅವುಗಳನ್ನು ಮುಚ್ಚುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿಯಾಗಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೇ ಕೇವಲ ಅತಿಥಿ ಶಿಕ್ಷಕರ ನೇಮಕ ಮಾಡಿ ಆದೇಶಿಸಲಾಗುತ್ತಿದೆ. ಶಾಲೆಯಲ್ಲಿ ಶಿಕ್ಷಕರು ಸರಿ ಇದ್ದರೆ ಮಕ್ಕಳ ಜೀವನ ಸರಿಯಾಗಿ ರೂಪುಗೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅನುದಾನಿತ ಶಾಲಾ ಶಿಕ್ಷಕರಲ್ಲಿ ಹೋರಾಟದ ಮನೋಭಾವನೆ ಕಡಿಮೆಯಾಗುತ್ತಿದೆ. ಈ ಹಿಂದೆ ತಾಲೂಕಿನಲ್ಲಿ ಸಂಘಟನೆ ಮಾಡಿ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದ ಕೀರ್ತಿ ಲಿಂ. ಎಂ.ಬಿ. ಪೂಜಾರ ಹಾಗೂ ಜಿ.ವಿ.ನಂಜಪ್ಪನವರ ಅವರಿಗೆ ಸಲ್ಲುತ್ತದೆ. ಈಗಿನ ಶಿಕ್ಷಕರಿಗೂ ಆ ಮನೋಭಾವನೆ ಬರಬೇಕಿದೆ. ಶಿಕ್ಷಕರಿಗೆ ಖುಷಿ ಸಿಗುವುದು ತಾವು ಕಲಿಸಿದ ವಿದ್ಯಾರ್ಥಿ ಉನ್ನತ ಹುದ್ದೆಗೇರಿದಾಗ ವಿದ್ಯೆ ಕಲಿಸಿದ ಗುರುವನ್ನು ಕಂಡು ಗೌರವದಿಂದ ಮಾತನಾಡಿಸಿದಾಗ ಸಿಗುವಷ್ಟು ಖುಷಿ ಬೇರೆಲ್ಲೂ ಸಿಗುವುದಿಲ್ಲ. ಡಿ.ಜಿ.ಪೂಜಾರ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು ಅವ್ವ ಸೇವಾ ಟ್ರಸ್ಟಿನ ಸಂಚಾಲಕ ಡಾ. ಬಸವರಾಜ ಧಾರವಾಡ ಮಾತನಾಡಿ, ಹಿಂದೆ ಬಸವರಾಜ ಹೊರಟ್ಟಿಯವರು ಹೋರಾಟ ಮಾಡುವಾಗ ಸ್ವಯಂ ಪ್ರೇರಣೆಯಿಂದ 10ರಿಂದ 15 ಸಾವಿರ ಜನ ಶಿಕ್ಷಕರು ಪಾಲ್ಗೊಳ್ಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರಲ್ಲಿ ಹೋರಾಟದ ಮನೋಭಾವನೆ ಕಡಿಮೆಯಾಗುತ್ತಿದೆ. ಹೋರಾಟ ಮಾಡದೇ ಹೋದಲ್ಲಿ ಮುಂದೊಂದು ದಿನ ಅನುದಾನಿತ ಶಾಲಾ-ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ. ಆದ್ದರಿಂದ ಆಯಾ ಸಮಯ ಸಂದರ್ಭಕ್ಕೆ ತಕ್ಕಂತೆ ಹೋರಾಟ ಮಾಡುವಾಗ ಎಲ್ಲರೂ ಪಾಲ್ಗೊಳ್ಳಬೇಕು ಎಂದರು. ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಡಿ.ಜಿ. ಪೂಜಾರ ಸಭಾಪತಿ ಬಸವರಾಜ ಹೊರಟ್ಟಿ, ವಾಸಣ್ಣ ಕುರುಡಗಿ ಸೇರಿದಂತೆ ಅನೇಕರಿಗೆ ಸನ್ಮಾನಿಸಿ ಶರಣು ಸಮರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಡಿ.ಜಿ. ಪೂಜಾರ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವೈ.ಎನ್. ಗೌಡರ್, ಲಿಂಗರಾಜಗೌಡ ಪಾಟೀಲ, ಕೊಟ್ರೇಶ ಅಂಗಡಿ, ಡಿ.ಡಿ. ಮೊರನಾಳ, ತಾಪಂ ಮಾಜಿ ಸದಸ್ಯ ರುದ್ರಗೌಡ ಪಾಟೀಲ, ಅವ್ವ ಸೇವಾ ಟ್ರಸ್ಟಿನ ಸಹ ಸಂಚಾಲಕ ಎಸ್.ಎಸ್. ಗಡ್ಡದ, ಡಿಡಿಪಿಐ ಆರ್.ಎಸ್. ಬುರುಡಿ, ಬಿಇಓ ಎಚ್.ಎಂ. ಫಡ್ನೇಶಿ, ಬಿಆರ್ಸಿ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಎಚ್.ಡಿ. ಪೂಜಾರ, ಎಸ್.ಬಿ. ಗಿಂಡಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿ.ಟಿ. ಕರಿಯಪ್ಪ ಸ್ವಾಗತಿಸಿ, ಎಸ್.ಎಂ. ಅಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.