ಸಾರಾಂಶ
- ಯುಬಿಡಿಟಿ ಕಾಲೇಜಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಜಿ.ಬಿ.ವಿನಯಕುಮಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕದ ಮ್ಯಾಂಚೆಸ್ಟರ್ ಖ್ಯಾತಿ ಹೊಂದಿದ್ದ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಕೈಗಾರಿಕೆ, ಐಟಿ ಬಿಟಿ ಹಬ್ ಇಷ್ಟರಲ್ಲಾಗಲೇ ಆಗಬೇಕಿತ್ತು. ಆದರೆ, ನಿರೀಕ್ಷೆಯಂತೆ ಯಾವುದೇ ದೊಡ್ಡ ಕೈಗಾರಿಕೆಗಳಾಗಲೀ, ಐಟಿಬಿಟಿ ಆಗಲಿ ಇಲ್ಲಿ ಸ್ಥಾಪನೆ ಆಗದಿರುವುದು ದುರದೃಷ್ಟಕರ ಸಂಗತಿ ಎಂದು ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ ವಿಷಾದಿಸಿದರು.ನಗರದ ಯುಬಿಡಿಟಿ ಕಾಲೇಜಿನಲ್ಲಿ ಶನಿವಾರ ಎಲೆಕ್ಟ್ರಾನಿಕ್ ಅಂಡ್ ಇನ್ಸ್ಟ್ರುಮೆಂಟೇಷನ್ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಅವರು ವಿಶೇಷ ಉಪನ್ಯಾಸ ನೀಡಿದರು. ವಿಶ್ವ ದರ್ಜೆಯ ಶಾಲಾ, ಕಾಲೇಜುಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಇಲ್ಲಿಗೆ ದೊಡ್ಡ ಕೈಗಾರಿಕೆಗಳು, ಐಟಿ ಬಿಟಿ ಹಬ್ ಬರಲು ಬಿಡುತ್ತಿಲ್ಲ. ಹಾಗಾಗಿ, ಇಲ್ಲಿ ಬೆಳೆಯಲು ಅವಕಾಶವೇ ಇಲ್ಲದಂತಾಗಿದೆ ಎಂದರು.
ಹತ್ತಿ ಗಿರಣಿ, ಅಕ್ಕಿ ಗಿರಣಿ, ಎಣ್ಣೆ ಮಿಲ್ಗಳು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದವು. ಆದರೆ, ಇವೆಲ್ಲವು ಕಾಲಕ್ರಮೇಣ ಇತಿಹಾಸದ ಪುಟಗಳಿಗೆ ಸೇರ್ಪಡೆಯಾದವು. ಕೆಲವು ಸಕ್ಕರೆ ಕಾರ್ಖಾನೆಗಳು, ಹೈಸ್ಕೂಲ್ಗಳು, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಇಲ್ಲಿ ಹೆಚ್ಚಾಗಿವೆ. ಎಲೆಕ್ಟ್ರಾನಿಕ್ ವಿಭಾಗದ ಯಾವುದೇ ಕೈಗಾರಿಕೆಗಳೂ ಇಲ್ಲಿಲ್ಲ. ಐಟಿ ಬಿಟಿ ಬೆಳೆದೇ ಇಲ್ಲ. ಇದು ಆಗದಿರುವುದಕ್ಕೆ ಕಾರಣವೇನೆಂಬುದನ್ನೂ ಪ್ರತಿಯೊಬ್ಬರೂ ಯೋಚಿಸಬೇಕಾದ ತುರ್ತು ಅಗತ್ಯತೆ ಇದೆ ಎಂದು ತಿಳಿಸಿದರು.ಯುಬಿಡಿಟಿ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಜಿ.ಬಿ.ವಿನಯಕುಮಾರ ಅವರನ್ನು ಕಾಲೇಜಿನಿಂದ ಸನ್ಮಾನಿಸಲಾಯಿತು.
- - -ಕೋಟ್ 16 ಜಿಲ್ಲೆಗಳಲ್ಲಿ ಡಿಸಿ, ಎಸ್ಪಿ, ಡಿಸಿಪಿ, ಎಎಸ್ಪಿ, ಎಸಿ, ತಹಸೀಲ್ದಾರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಇಷ್ಟಪಟ್ಟು, ಶ್ರದ್ಧೆ, ಪ್ರಾಮಾಣಿಕತೆ, ನಿರಂತರ ಪರಿಶ್ರಮದಿಂದ ಸಾಧ್ಯವಾಯಿತು. ಯುವಪೀಳಿಗೆ ದೊಡ್ಡ ಕನಸು ಕಾಣಬೇಕು. ಆಗ ಕನಸು ನನಸಾಗುತ್ತದೆ. ಇನ್ಸೈಟ್ಸ್ನಲ್ಲಿ ಓದಿದವರು ತಮ್ಮ ಪರಿಶ್ರಮದಿಂದ ಉನ್ನತ ಹುದ್ದೆ ಪಡೆಯುತ್ತಿದ್ದಾರೆ
- ಜಿ.ಬಿ.ವಿನಯಕುಮಾರ, ಇನ್ಸೈಟ್ಸ್ ಅಕಾಡೆಮಿ ಸಂಸ್ಥಾಪಕ- - - -10ಕೆಡಿವಿಜಿ5:
ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಶನಿವಾರ ಉಪನ್ಯಾಸ ಕಾರ್ಯಕ್ರಮದಲ್ಲಿ ಇನ್ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಅವರನ್ನು ಸನ್ಮಾನಿಸಲಾಯಿತು.