ಕೆರೆಗಳಿಗೆ ತ್ಯಾಜ್ಯ ನೀರು ಹರಿಸುವುದು ಅವೈಜ್ಞಾನಿಕ

| Published : Oct 09 2023, 12:45 AM IST

ಸಾರಾಂಶ

ದೊಡ್ಡಬಳ್ಳಾಪುರ: ಬೆಂಗಳೂರಿನ ತ್ಯಾಜ್ಯ ನೀರು ನಮ್ಮೂರಿನ ಕೆರೆಗಳಿಗೆ ಹರಿಸುವ ಬಗ್ಗೆ ರೈತರು ಎಚ್ಚರಗೊಳ್ಳಬೇಕು. ಅವೈಜ್ಞಾನಿಕವಾಗಿ ತ್ಯಾಜ್ಯ ನೀರು ಕೆರೆಗಳಿಗೆ ತುಂಬಿದರೆ ಪರಿಸರಕ್ಕೆ ಮಾರಕವಾಗುತ್ತದೆ ಎಂದು ಜಾನಪದ ವಿದ್ವಾಂಸ ಡಾ.ಟಿ.ಗೋವಿಂದರಾಜು ತಿಳಿಸಿದರು.
ದೊಡ್ಡಬಳ್ಳಾಪುರ: ಬೆಂಗಳೂರಿನ ತ್ಯಾಜ್ಯ ನೀರು ನಮ್ಮೂರಿನ ಕೆರೆಗಳಿಗೆ ಹರಿಸುವ ಬಗ್ಗೆ ರೈತರು ಎಚ್ಚರಗೊಳ್ಳಬೇಕು. ಅವೈಜ್ಞಾನಿಕವಾಗಿ ತ್ಯಾಜ್ಯ ನೀರು ಕೆರೆಗಳಿಗೆ ತುಂಬಿದರೆ ಪರಿಸರಕ್ಕೆ ಮಾರಕವಾಗುತ್ತದೆ ಎಂದು ಜಾನಪದ ವಿದ್ವಾಂಸ ಡಾ.ಟಿ.ಗೋವಿಂದರಾಜು ತಿಳಿಸಿದರು. ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ‌ ನಡೆದ ಆಧುನಿಕ‌ ಆದಿಮ‌ ಪುಸ್ತಕ ಬಿಡುಗಡೆ ‌ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮೂರಿನ ಕೆರೆಗಳಿಗೆ ವಿದೇಶಿ ಪಕ್ಷಿಗಳು ಪ್ರತಿ ವರ್ಷ ಬರುತ್ತವೆ. ಕೆರೆಗಳು‌ ಕಲುಷಿತಗೊಂಡರೆ ವಿದೇಶದಿಂದ ಬರುವ ಪಕ್ಚಿಗಳಿಗೆ ನೆಲೆ ಇಲ್ಲದಂತಾಗುತ್ತದೆ. ಕೆರೆಗಳನ್ನು ಆಶ್ರಯಿಸಿಕೊಂಡಿರುವ ಜಲಚರಗಳು ನಾಶವಾಗುತ್ತವೆ. ಅಂತರ್ಜಲ ಕಲುಷಿತವಾಗುತ್ತದೆ. ರೋಗ ಹರಡುವ ಈ ತ್ಯಾಜ್ಯ ನೀರು ಜನರನ್ನು ಹಳ್ಳಿಗಳಿಂದ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದರು. ಶಿಕ್ಷಣದಿಂದ ವಿವಿಧ ವರ್ಗಗಳ ಜನರು ಸಮಾಜದ ಮುಖ್ಯವಾಹಿನಿಯಲ್ಲಿ ಬರಲು‌ ಸಾಧ್ಯವಾಯಿತು ಇಂದು ಎಲ್ಲರೂ ಧರ್ಮದ ಬಗ್ಗೆ ಮಾತನಾಡುತ್ತಾ ಪರಸ್ಪರ ಧರ್ಮಗಳನ್ನು ದ್ವೇಷಿಸುತ್ತಿರುವುದು ವಿಷಾದನೀಯ. ಸತ್ಯದ ವಿಷಯಗಳನ್ನು ಪ್ರತಿಪಾದಿಸಲು ಹಿಂಜರಿಕೆ ಪಡುವ ಅಗತ್ಯವಿಲ್ಲ ಎಂದರು. ನಿವೃತ್ತ ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಎಣ್ಣೆಕಟ್ಟಿ ಮಾತನಾಡಿ, ಆಧುನಿಕ ಆದಿಮ ಕೃತಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಜಾನಪದೀಯ ನೆಲೆಯಲ್ಲಿ ವಿವೇಚಿಸುವ ಮೂಲಕ ಕರ್ನಾಟಕವನ್ನು ಅಕ್ಷರ ಸಂಸ್ಕೃತಿಯ ಮೂಲಕ ದಾಖಲೀಕರಣ ಮಾಡಲಾಗಿದೆ. ಸಾಂಸ್ಕೃತಿಕ ನೆಲೆಗಳಲ್ಲಿ ವಿವಿಧ ರೀತಿಯ ಆಲೋಚನೆಗಳನ್ನು ಆಧುನಿಕ ಆದಿಮ ಕೃತಿ ವಿವರಿಸುತ್ತದೆ. ಪ್ರತಿ ಗ್ರಾಮಗಳು ಸಾಂಸ್ಕೃತಿಕ ಅಧ್ಯಯನಕ್ಕೆ ಒಳಗಾಗಬೇಕು. ಆಧುನಿಕ ಆದಿಮ ಪುಸ್ತಕವನ್ನು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವುದು ಪುಸ್ತಕದ ಮಹತ್ವವನ್ನು ಹೇಳುತ್ತದೆ. ದಕ್ಷಿಣ ಭಾರತದಲ್ಲೇ ಮೈಸೂರು ವಿಶ್ವವಿದ್ಯಾನಿಲಯದಂತಹ ವಿಶ್ವವಿದ್ಯಾಲಯ ಮತ್ತೊಂದಿಲ್ಲ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕು ಹಲವಾರು ಪ್ರತಿಭಾವಂತರನ್ನು ಹೊಂದಿದೆ. ಅವರ ಸಾಧನೆಯನ್ನು ಸ್ಮರಿಸುವ ಮತ್ತು ಪರಿಚಯಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಜನಸಾಮಾನ್ಯರ ಪರಿಷತ್ತು ಆಗಿ ಕಾರ್ಯನಿರ್ವಹಿಸುವ ಮೂಲಕ‌ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದೆ. ಆಜೀವ ಸದಸ್ಯತ್ವ ಅಭಿಯಾನ ಮೂಲಕ‌ ಕನ್ನಡ ಸಾಹಿತ್ಯ ಪರಿಷತ್ತು ಕೋಟಿ ಸದಸ್ಯರನ್ನು‌ ಹೊಂದಲಿದೆ ಎಂದರು. ಜಿಪಂ ಮಾಜಿ ಸದಸ್ಯ ಚುಂಚೇಗೌಡ, ತಾಪಂ ಮಾಜಿ ಅಧ್ಯಕ್ಷ ಲಕ್ಷ್ಮಿಪತಯ್ಯ, ಭಜನಾ ಮಂಡಲಿ ಅಧ್ಯಕ್ಷ ನಂಜೇಗೌಡ, ಬೆಂ.ಗ್ರಾ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಪ್ರೊ.ಕೆ.ಆರ್.ರವಿಕಿರಣ್, ಅಶ್ವತ್ಥಗೌಡ, ಸಂಘಟನಾ ಕಾರ್ಯದರ್ಶಿಗಳಾದ ರಾಜಘಟ್ಟ ರವಿ, ವಿನೋದಗೌಡ, ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಮಧುರೆ ಹೋಬಳಿ ಘಟಕದ ಅಧ್ಯಕ್ಷ ಜಿ.ಸುರೇಶ್, ಶಿಕ್ಷಕರ‌ ಸಂಘದ ಮಾಜಿ ಅಧ್ಯಕ್ಷ ಶಂಕರಪ್ಪ, ಭಾರತ ಸೇವಾದಳದ ಕೆಂಪೇಗೌಡ, ಸೇವಾ ಸಮಿತಿ ಅಧ್ಯಕ್ಷ ಮರಿಯಣ್ಣ, ಕಸಾಪ ಪದಾಧಿಕಾರಿಗಳಾದ ಶರಣಯ್ಯ ಹಿರೇಮಠ, ಪರಮೇಶ್, ಗಿರೀಶ್.ಎನ್.ಬರಗೂರು, ಜಿ.ಸುರೇಶ್, ಹೊಂಗಿರಣ ಬಳಗದ ಅಧ್ಯಕ್ಷ ಸಿ.ಗೋವಿಂದರಾಜು, ಟಿ.ಸಿ.ವೆಂಕಟಾಚಲಪತಿ, ಮುದ್ದುಗಂಗಯ್ಯ, ಚಂದ್ರಶೇಖರ್, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಬೀರೇಶ್, ನೆಲಮಂಗಲ ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಇತರರಿದ್ದರು. 8ಕೆಡಿಬಿಪಿ7- ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯಲ್ಲಿ ಕಸಾಪ ನೇತೃತ್ವದಲ್ಲಿ ಆಧುನಿಕ ಆದಿಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.