ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಚನ ಸಾಹಿತ್ಯವನ್ನು ನಾಡಿನೆಲ್ಲೆಡೆ ಸಂಗ್ರಹಿಸಿ ಯುವ ಪೀಳಿಗೆಗೆ ನೀಡಿದವರು ಹಳಕಟ್ಟಿಯವರು ಎಂದು ತಾಲೂಕು ಕಸಾಪ ಅಧ್ಯಕ್ಷ, ಸಂಸ್ಕೃತಿ ಚಿಂತಕ ಸುರೇಶ್ ಎನ್. ಋಗ್ವೇದಿ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಕೊಡುಗೆಗಳ ಬಗ್ಗೆ ಮಾತನಾಡಿ, ವಚನಗಳು ಕನ್ನಡ ಸಾಹಿತ್ಯ ಪರಂಪರೆಯ ದಿವ್ಯ ಮೌಲ್ಯ ಸಾಹಿತ್ಯವಾಗಿದೆ. ಮಾನವನ ಜೀವನದ ಪ್ರತಿಕ್ಷಣವೂ ವಚನಗಳ ಅಧ್ಯಯನದ ಮೂಲಕ ತಮ್ಮ ತನವನ್ನು ಹೆಚ್ಚಿಸಿಕೊಳ್ಳಲು, ಮಾನವೀಯ ಮೌಲ್ಯಗಳನ್ನು ಹರಡಲು, ಮನುಷ್ಯ ಮನುಷ್ಯನಾಗಿ ಬದುಕಲು, ವಚನಗಳು ದಾರಿದೀಪವಾಗಿವೆ. ವಚನಗಳು ಕನ್ನಡಿಗರ ಅಮೂಲ್ಯ ಸಂಪತ್ತು. ಸರ್ವರೂ ಕೂಡ ಅದರ ಆದರ್ಶ ಮೌಲ್ಯ ಚಿಂತನೆಗಳನ್ನು ಅರಿಯಬೇಕಿದೆ. ಮಾನವ ತನ್ನ ಜೀವನದ ವ್ಯಕ್ತಿತ್ವ ನಿರ್ಮಾಣಕ್ಕೆ ವಚನಗಳ ಜ್ಞಾನದ ಅರಿವು ಮಹತ್ವದ್ದಾಗಬೇಕು. ಕನ್ನಡ ಸಾಹಿತ್ಯದ ಶ್ರೇಷ್ಠ ಪರಂಪರೆ ವಚನ ಸಾಹಿತ್ಯ. ಜನಸಾಮಾನ್ಯರ ಸರಳ ಭಾಷೆಯಲ್ಲಿ ವಿವರಿಸಿದ ಚಿಂತಕರ ವಚನಗಳನ್ನು ಉಳಿಸಿ ಯುವ ಪೀಳಿಗೆಗೆ ನೀಡಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದರು. ಕೊಳ್ಳೇಗಾಲ ತಾಲೂಕು ಕಸಾಪ ಅಧ್ಯಕ್ಷ ಕೊಂಗರಹಳ್ಳಿ ನಾಗರಾಜು ಮಾತನಾಡಿ, ಹಳಕಟ್ಟಿಯವರು ಕಾನೂನು ಪದವೀಧರರಾಗಿ, ವಿನಾಶದ ಅಂಚಿನಲ್ಲಿದ್ದ ವಚನಗಳೆಲ್ಲವನ್ನು ಸಂಗ್ರಹಿಸಿ, ಸ್ಪಷ್ಟ ರೂಪ ನೀಡಿದ ಮಹಾನ್ ವ್ಯಕ್ತಿ. ತಮ್ಮ ಇಡೀ ಜೀವನವನ್ನು ವಚನಗಳಿಗಾಗಿ ವಚನದ ಸಂಗ್ರಹಣೆಗಾಗಿ ಸಂಶೋಧನೆಗಾಗಿ ಮೀಸಲಿಟ್ಟವರು. ಕನ್ನಡ ಸಾಹಿತ್ಯ ಪರಿಷತ್ತು ವಚನ ದಿನಾಚರಣೆಯ ಮೂಲಕ ವಚನದ ಜಾಗೃತಿ ಮಾಡುತ್ತಿರುವುದು ಸಂತಸ ಎಂದು ತಿಳಿಸಿದರು.
ನಗರಸಭಾ ಮಾಜಿ ಸದಸ್ಯ ಪದ್ಮ ಪುರುಷೋತ್ತಮ್ ಉದ್ಘಾಟಿಸಿದರು. ಕಸಾಪ ಬಿಕೆ ಆರಾಧ್ಯ, ರವಿಚಂದ್ರ ಪ್ರಸಾದ್, ಶಿವಲಿಂಗಮೂರ್ತಿ, ಸರಸ್ವತಿ ಗೋವಿಂದರಾಜು, ರೇತನ್ ಮಾದೇವಸ್ವಾಮಿ ಉಪಸ್ಥಿತರಿದ್ದರು.