ಸಾರಾಂಶ
ಮಂಗಳೂರು : ಇತ್ತೀಚೆಗೆ ಹತ್ಯೆಗೀಡಾದ ಹಿಂದೂ ಸಂಘಟನೆ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಮೇಲೆ ರೌಡಿ ಹಾಳೆ ತೆರೆದದ್ದು ಬಿಜೆಪಿ ಸರ್ಕಾರ ಎನ್ನುವ ಅಂಶ ಇದೀಗ ಬಯಲಾಗಿದೆ.
ಸುಹಾಸ್ ಶೆಟ್ಟಿ ಮೇಲೆ ರೌಡಿ ಶೀಟ್ ತೆರೆದ ಪೊಲೀಸ್ ಇಲಾಖೆ ಆದೇಶ ಪ್ರತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ‘ಎಕ್ಸ್’ನಲ್ಲಿ ಬಿಡುಗಡೆ ಮಾಡಿದ್ದಾರೆ.
ಯಡಿಯೂರಪ್ಪ ಸರ್ಕಾರದಲ್ಲಿ ರೌಡಿ ಪಟ್ಟ:
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ಅವಧಿಯಲ್ಲಿ 2020ರ ಜೂ.18ರಂದು ಸುಹಾಸ್ ಶೆಟ್ಟಿಗೆ ಅಧಿಕೃತವಾಗಿ ರೌಡಿ ಪಟ್ಟ ನೀಡಲಾಗಿತ್ತು. ಅಂದಿನ ಮಂಗಳೂರು ಉತ್ತರ ವಿಭಾಗ ಎಸಿಪಿಯಾಗಿದ್ದ ಕೆ.ಯು. ಬೆಳ್ಳಿಯಪ್ಪ ಅವರು ಈ ಆದೇಶ ಹೊರಡಿಸಿದ್ದರು.
ರೌಡಿ ಹಾಳೆ ತೆರೆಯುವ ಹೊತ್ತಿನಲ್ಲಿ ಸುಹಾಸ್ ಶೆಟ್ಟಿ ವಿರುದ್ಧ ನಾಲ್ಕು ಗಂಭೀರ ಕ್ರಿಮಿನಲ್ ಪ್ರಕರಣಗಳಿದ್ದವು. ಕೊಲೆ, ಕೊಲೆ ಯತ್ನ, ಗಲಾಟೆ, ದರೋಡೆ, ಕೋಮು ಸಂಘರ್ಷ ಆರೋಪದಡಿ ಆಗಿನ ಬಜ್ಪೆ ಪೊಲೀಸ್ ಇನ್ಸ್ಪೆಕ್ಟರ್ ಕೆ.ಅರ್. ನಾಯಕ್ ಅವರ ವರದಿ ಆಧಾರದಲ್ಲಿ ರೌಡಿಶೀಟ್ ಓಪನ್ ಮಾಡಲಾಗಿತ್ತು.
ಗುಂಡೂರಾವ್ ವಾಗ್ದಾಳಿ:
ಸುಹಾಸ್ ಶೆಟ್ಟಿಯ ರೌಡಿ ಹಾಳೆಯ ಅಂದಿನ ಪೊಲೀಸ್ ಆದೇಶ ಪ್ರತಿಯನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಅಮಾಯಕರ ತಲೆಯಲ್ಲಿ ಮತಾಂಧತೆಯ ಅಮಲು ತುಂಬಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿರುವ ಬಿಜೆಪಿ ನಾಯಕರ ಗಮನಕ್ಕೆ’ ಎನ್ನುವ ಶೀರ್ಷಿಕೆಯಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಿಂದ ಕ್ರಿಮಿನಲ್ಸ್ ಸೃಷ್ಟಿ:
ಸುಹಾಶ್ ಶೆಟ್ಟಿ ವಿರುದ್ದ ರೌಡಿ ಶೀಟರ್ ಓಪನ್ ಆಗಿದ್ದು 2020ರಲ್ಲಿ. ಆಗ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ. ಗೃಹ ಸಚಿವರಾಗಿದ್ದ ಪುಣ್ಯಾತ್ಮ ಬಸವರಾಜ ಬೊಮ್ಮಾಯಿ. ಇಂದು ಸುಹಾಸ್ನನ್ನು ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆಗ ಯಾಕೆ ಸುಹಾಸ್ನನ್ನು ರೌಡಿ ಪಟ್ಟಿಗೆ ಸೇರಿಸಿದ್ದರು? ಕರಾವಳಿಯನ್ನು ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್ಗಳ ನಿಜವಾದ ಸೃಷ್ಟಿಕರ್ತರು. ಇವರು ಅಧಿಕಾರದಲ್ಲಿದ್ದಾಗ ಕ್ರಿಮಿನಲ್ಗಳನ್ನು ಸೃಷ್ಟಿಸುತ್ತಾರೆ, ಅವರ ಮೇಲೆ ರೌಡಿ ಶೀಟರ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೆ ಅದೇ ಕ್ರಿಮಿನಲ್ಗಳನ್ನು ಮಹಾತ್ಮರಂತೆ ಬಿಂಬಿಸಿ ಹುತಾತ್ಮರನ್ನಾಗಿ ಮಾಡುತ್ತಾರೆ ಎಂದು ಗುಂಡೂರಾವ್ ಕಟುವಾಗಿ ಟೀಕಿಸಿದ್ದಾರೆ.
ದಕ್ಷಿಣ ಕನ್ನಡದ ಜನ ಪ್ರಜ್ಞಾವಂತಿಕೆಯ ಜತೆಗೆ ಸೂಕ್ಷ್ಮತೆಯನ್ನು ಅರಿತುಕೊಂಡವರು. ಇನ್ನಾದರೂ ಕರಾವಳಿಯ ಜನ ಬಿಜೆಪಿಯ ಹುನ್ನಾರ ಅರಿಯಬೇಕಿದೆ. ಇಲ್ಲದಿದ್ದರೆ ಬಿಜೆಪಿಯವರ ಕೆಟ್ಟ ರಾಜಕಾರಣಕ್ಕೆ ಜಿಲ್ಲೆಯ ನೆಮ್ಮದಿಯೇ ಹಾಳಾಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.