ಕನ್ನಡಪ್ರಭ ವಾರ್ತೆ ಬೇಲೂರು

ಇತ್ತೀಚಿನ ದಿನಗಳಲ್ಲಿ ಪರಿಸರ ದಿನಾಚರಣೆ ಆಚರಿಸುವ ನೆಪದಲ್ಲಿ ಒಂದೆರಡು ಗಿಡ ನೆಟ್ಟು ವಾಟ್ಸಾಪ್ ಹಾಗೂ ಫೇಸ್‌ಬುಕ್‌ ನಲ್ಲಿ ಹಾಕಿ ಅದಕ್ಕೆ ಎಷ್ಟು ಲೈಕ್ ಬಂದಿದೆ ಎಂಬುದನ್ನು ನೋಡುತ್ತಾರೆ ಹೊರತು, ತಾವು ನೆಟ್ಟ ಗಿಡದ ಪರಿಸ್ಥಿತಿ ಏನಾಗಿದೆ ಎಂದು ಕಣ್ಣೆತ್ತಿಯೂ ನೋಡದಿರುವುದು ವಿಪರ್ಯಾಸವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನಗೌಡ ಬೇಸರ ವ್ಯಕ್ತಪಡಿಸಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ವಿದ್ಯಾರ್ಥಿಗಳಿಗೆ ನಡೆಸಿದ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳಿಗೆ ಮಾತ್ರ ಸೀಮಿತವಾಗುವ ಪರಿಸರ ಚಟುವಟಿಕೆಗಳ ಬದಲು ನಿಜವಾದ ಕಾಳಜಿ, ಬದ್ಧತೆ ಮತ್ತು ಜವಾಬ್ದಾರಿಯುತ ನಡವಳಿಕೆ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಚರ್ಚಾ ಸ್ಪರ್ಧೆಗಳು, ವೃಕ್ಷಾರೋಪಣಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪತ್ರಕರ್ತರ ಸಂಘ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವರಾಜ್ ಮಾತನಾಡಿ, ಪತ್ರಕರ್ತರು ಕೇವಲ ಸುದ್ದಿಗಳನ್ನು ಪ್ರಕಟಿಸುವುದಲ್ಲದೆ ಸಮಾಜಮುಖಿ ಹಾಗೂ ಜನಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳು ನೆಟ್ಟ ಗಿಡಗಳನ್ನು ಮರಗಳಾಗುವವರೆಗೆ ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.ಸಿಪಿಐ ರೇವಣ್ಣ ಮಾತನಾಡಿ, ಪರಿಸರ ಸಂರಕ್ಷಣೆ ಒಬ್ಬ ವ್ಯಕ್ತಿಯ ಜವಾಬ್ದಾರಿಯಲ್ಲ, ಇಡೀ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ನೀರು, ಮಣ್ಣು ಹಾಗೂ ಗಾಳಿಯಂತಹ ಅಮೂಲ್ಯ ಸಂಪನ್ಮೂಲಗಳ ಮಹತ್ವವನ್ನು ಅರಿತು ಅವುಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ, ಶಾಲಾ ಮಟ್ಟದಲ್ಲಿ ಉತ್ತಮವಾಗಿ ಗಿಡಗಳನ್ನು ಪೋಷಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದು ಪರಿಸರ ಪ್ರಜ್ಞೆ ಬೆಳೆಸಲು ಅತ್ಯುತ್ತಮ ಮಾರ್ಗವಾಗಿದೆ. ಸಾವಿರಾರು ಸಸಿಗಳನ್ನು ನೆಡುವುದಕ್ಕಿಂತ ಅವುಗಳಲ್ಲಿ ಹೆಚ್ಚಿನ ಸಂಖ್ಯೆಯ ಸಸಿಗಳನ್ನು ಉಳಿಸಿಕೊಳ್ಳುವುದು ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆಯಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಕ್ರಮ್ ಶರೀಫ್, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಲಕ್ಷ್ಮಣ್, ಹೆಬ್ಬಾಳು ಹಾಲಪ್ಪ, ಮಲ್ಲೇಶ್, ಬಿ.ಆರ್. , ರಾಘವೇಂದ್ರ ಹೊಳ್ಳ, ಲೋಹಿತ್ , ಬಿಎನ್ ಗಣೇಶ್, ಅನಂತು, ತಾರಾನಾಥ್, ಆರ್. ವೆಂಕಟೇಶ್, ಆರಾದ್ಯ, ಕೇಬಲ್ ವಿಜಯಕುಮಾರ್, ರವಿಹೊಳ್ಳ, ಜಗದೀಶ್, ರಮೇಶ್, ಮಹೇಶ್, ಸಂತೋಷ್, ದೀಪು, ಕೇಬಲ್ ರಮೇಶ್, ರವಿಕುಮಾರ್, ಚಂದ್ರು, ಸಂದೀಪ್, ವಿರುಪಾಕ್ಷ, ನೀಲಕಂಠ, ಅರುಣ್, ವಿನೋದ್, ನಿವೃತ್ತ ಶಿಕ್ಷಕ ರಾಜಶೇಖರ್, ಉಪನ್ಯಾಸಕ ಷಣ್ಮುಖ, ಶಿಕ್ಷಕಿ ವೇದ ಅಶೋಕ್, ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.