ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವತಿಯಿಂದ ಭಾನುವಾರ ಕಾಲೇಜು ಆವರಣದಲ್ಲಿ ಹಲಸು ಮೇಳ, ಆಹಾರೋತ್ಸವ ನಡೆಯಿತು. ನಿರಂತರ ಮಳೆಯನ್ನೂ ಲೆಕ್ಕಿಸದೆ ನೂರಾರು ಮಂದಿ ಆಗಮಿಸಿ ತಿನಿಸುಗಳ ಸ್ವಾದ ಸವಿದರು.ಹಲಸಿನಿಂದ ಮಾಡಿದ ಪಾಯಸ, ದೋಸೆ, ಹಲ್ವ, ಕಟಲೆಟ್, ಅಪ್ಪ, ಕೊಟ್ಟಿಗೆ, ಹೋಳಿಗೆ, ಐಸ್ಕ್ರೀಮ್ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.ಹಲಸು ಮಾತ್ರವಲ್ಲದೆ, ಕೃಷಿಕರು ತಾವು ಬೆಳೆದ ಸಾವಯವ ಬೆಳೆಗಳನ್ನು ಮಾರಾಟಕ್ಕೆ ತಂದಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಮೇಳವನ್ನು ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ಬಿ.ಎಸ್. ರಾಜಾ ಉದ್ಘಾಟಿಸಿದರು. ದ.ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಎನ್.ಸುವರ್ಣ ಹಲಸಿನ ವಿವಿಧ ತಿಂಡಿಗಳ ಕೌಂಟರ್ ಉದ್ಘಾಟಿಸಿದರು. ಗೋರಿಗುಡ್ಡ ಕಿಟ್ಟೆಲ್ ಮೆಮೋರಿಯಲ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ವಿಠಲ ಎ. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ್, ಪ್ರಾಂತ ಉಪಾಧ್ಯಕ್ಷ ಬಾಲ ಸುಬ್ರಹ್ಮಣ್ಯ ಸರ್ಪಮಲೆ ಇದ್ದರು.‘ಪನಸೋಪಾಖ್ಯಾನ’ ತಾಳಮದ್ದಳೆಹಲಸು ಮೇಳದಲ್ಲಿ ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಜೊತೆಗೆ ಹಲಸು ಬಗ್ಗೆ ವಿವಿಧ ಗೋಷ್ಠಿಗಳನ್ನು ನಡೆಸಿ ಹಣ್ಣಿನ ಮೌಲ್ಯವರ್ಧನೆಗೆ ಯೋಜನೆ ರೂಪಿಸುವುದು ಸಾಮಾನ್ಯ ವಿಚಾರ. ಹಲಸು ಹಬ್ಬದಲ್ಲಿ ಪ್ರಥಮ ಬಾರಿಗೆ ಹಲಸು ವಿಚಾರದ ತಾಳಮದ್ದಳೆ ನಡೆಸುವ ಮೂಲಕ ಹಲಸಿಗೆ ಕಲಾ ಸ್ಪರ್ಶ ನೀಡುವ ಕಾರ್ಯ ಪುತ್ತೂರಿನಲ್ಲಿ ನಡದಿದೆ.ಪುತ್ತೂರು ಕಿಲ್ಲೆ ಮೈದಾನದಲ್ಲಿ ಇತ್ತೀಚೆಗೆ ನಡೆದ ೭ನೇ ಹಲಸು ಮೇಳದಲ್ಲಿ ‘ಪನಸೋಪಾಖ್ಯಾನ’ ತಾಳಮದ್ದಳೆ ಪ್ರಸಂಗ ಮೂಡಿ ಬಂದು ಜನ ಮೆಚ್ಚುಗೆಗೆ ಪಾತ್ರವಾಗಿದೆ.ಪತ್ರಕರ್ತ ನಾ. ಕಾರಂತ ಪೆರಾಜೆ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ಪ್ರಸಂಗ ಕಾಲ್ಪನಿಕವಾಗಿದ್ದು, ಹಲಸು ಹಾಗೂ ಮಾವುಗಳ ಸುತ್ತ ಅರಿವನ್ನು ಮೂಡಿಸುವ ಕಥಾ ಹಂದರ ಹೊಂದಿದೆ.
ಕಾಲ್ಪನಿಕ ಪ್ರಸಂಗಗಳು ಇದೇನೂ ಹೊಸತಲ್ಲ. ಘೋರ ಮಾರಕ, ಅಕ್ಷರ ಕ್ರಾಂತಿ, ಜಪಾನ್ ಕೃಷಿ ಪದ್ಧತಿ, ಹಸಿರು ಕ್ರಾಂತಿ, ಕುಟುಂಬ ಯೋಜನೆ, ಪಾನ ನಿಷೇಧ ಹೀಗೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಹಲವಾರು ಪ್ರಸಂಗಗಳನ್ನು ಸೃಷ್ಟಿಸಿ ಅದಕ್ಕೆ ರೂಪ ಕೊಡುವ ಕಾರ್ಯ ಹಲವರಿಂದ ನಡೆದಿದೆ. ಅದು ಜನಮನ್ನಣೆಯನ್ನೂ ಪಡೆದುಕೊಂಡಿದೆ.