ಮೂಡುಬಿದಿರೆ; ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೇಣವ ಹಾಗೂ ಮೂಡುಬಿದಿರೆ ವಕೀಲರ ಸಂಘದ ನೂತನ ಅಧ್ಯಕ್ಷ ಶರತ್ ಶೆಟ್ಟಿ ಅವರನ್ನು ಶನಿವಾರ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ್ ಶೇಣವ, ವಕೀಲ ವೃತ್ತಿಯಲ್ಲಿ ಹೆಸರು, ಗೌರವ ಮತ್ತು ಆರ್ಥಿಕ ಯಶಸ್ಸಿಗೆ ಆಕಾಶವಲ್ಲ, ಬಾಹ್ಯಾಕಾಶವೇ ಮಿತಿಯಾಗಿದೆ. ವೈದ್ಯನಾಗುವ ಕನಸು ನನಸಾಗದಿದ್ದರೂ ಜೀವನದ ಸೋಲುಗಳೇ ತಮ್ಮ ಯಶಸ್ಸಿನ ದಾರಿಯನ್ನು ರೂಪಿಸಿವೆ. ವೃತ್ತಿಯ ಘನತೆ ಮತ್ತು ನೈತಿಕತೆ ಕಾಪಾಡಿಕೊಂಡರೆ ಯಶಸ್ಸು ಸಹಜವಾಗಿ ದೊರೆಯುತ್ತದೆ ಎಂದರು.ಶರತ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಕಾನೂನು ಅನುಷ್ಠಾನದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಪದವಿ ಜೊತೆಗೆ ಶಿಸ್ತು, ಪ್ರಾಮಾಣಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದರು.ಹಿರಿಯ ವಕೀಲರಾದ ಬಾಹುಬಲಿ ಪ್ರಸಾದ, ಶ್ವೇತಾ ಜೈನ್, ಮನೋಜ್ ಶೆಣೈ, ಜಯಪ್ರಕಾಶ್ ಭಂಡಾರಿ, ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಾಂತೇಶ್ ಜಿ.ಎಸ್. ಉಪಸ್ಥಿತರಿದ್ದರು. ಮೊಹಮ್ಮದ್ ಸಫ್ವಾನ್ ನಿರೂಪಿಸಿದರು.