ಜಗಳೂರು ಬರದ ನಾಡಲ್ಲ, ಬಂಗಾರದ ನಾಡು

| Published : Oct 14 2024, 01:22 AM IST

ಸಾರಾಂಶ

ಜಗಳೂರು ಪಟ್ಟಣದ ಕೋಡಿ ಬಿದ್ದ ಜಗಳೂರು ಕೆರೆಗೆ ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶಿವಮುರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಬಾಗಿನ ಅರ್ಪಿಸಿದರು.

ಕನ್ನಡ ಪ್ರಭವಾರ್ತೆ ಜಗಳೂರು

ಜಗಳೂರು ತಾಲೂಕು ಇನ್ನು ಮುಂದೆ ಬರದನಾಡು ಅಲ್ಲ. ಬಂಗಾರದ ನಾಡು. ಬಂಗಾರ ಬಿತ್ತಿ ಬೆಳೆಬೆಳೆಯುವ ಮೂಲಕ ದೊಡ್ಡ ಮಲೆನಾಡು ಆಗಲಿದೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶಿವಮುರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಜಗಳೂರು ಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿದ ನಂತರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

50 ವರ್ಷಗಳ ನಂತರ ಜಗಳೂರು ಕೆರೆ ಕೋಡಿ ಬಿದ್ದಿದೆ ಎಂಬ ಸುದ್ದಿ ಕೇಳಿ ಸಂತಸವಾಗಿದೆ. ಮುಂದೆ ಜಗಳೂರು ಕೆರೆ ಪ್ರತಿ ವರ್ಷವೂ ಕೋಡಿ ಬೀಳುವ ವಿಶ್ವಾಸ ವ್ಯಕ್ತ ಪಡಿಸಿದ ಶ್ರೀಗಳು ತಾಲೂಕಿನ ಎಲ್ಲಾ ಕೆರೆಗಳು ಕೋಡಿ ಬೀಳಲಿ ಎಂದರು.

*ಮೂರು ಪಕ್ಷಗಳ ಸಹಕಾರ ಸ್ಮರಿಸಿದ ಸ್ವಾಮೀಜಿ:

ಕೆರೆಗಳನ್ನು ಕಟ್ಟಿದ ತಿಮ್ಮಪ್ಪ ನಾಯಕರಂತ ದೂರದೃಷ್ಟಿಯಿಟ್ಟುಕೊಂಡವರನ್ನು ನಾವು ಸ್ಮರಿಸಲೇಬೇಕು. ಭರಮಸಾಗರ ಹಾಗೂ ಜಗಳೂರು ಕ್ಷೇತ್ರದ 57 ಕೆರೆಗಳಿಗೆ 1,200 ಕೋಟಿ ಬಿಡುಗಡೆಗೆ ಶ್ರಮಿಸಿದ ಈಗಿನ ಸಿಎಂ ಸಿದ್ದರಾಮಯ್ಯ, ಅಂದಿನ ಮುಖ್ಯಮಂತ್ರಿಯಾದ ಬಿಜೆಪಿಯ ಬಿಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಸೇರಿದಂತೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಆಂಜಿನೇಯ, ಜಿ.ಎಂ.ಸಿದ್ದೇಶ್ವರ್, ಚಂದ್ರಪ್ಪ, ಸೇರಿದಂತೆ ಆಯಾಘಟ್ಟದ ಸಚಿವರು, ಸಂಸದರು, ಶಾಸಕರಾದ ಎಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರ, ಹಾಲಿ ಶಾಸಕ ದೇವೇಂದ್ರಪ್ಪ, ನೀರಾವರಿ ಎಂಡಿ ಆಗಿದ್ದ ಮಲ್ಲಿಕಾರ್ಜುನ್ ಗುಂಗಿ ಹಾಗೂ ಅಧಿಕಾರಿಗಳನ್ನು ಸ್ಮರಿಸಬೇಕು ಎಂದರು.

*ತುಪ್ಪದಹಳ್ಳಿ ಕೆರೆಗೆ ಪೈಪ್‌ಲೈನ್ ವಾಲ್ ಅಳವಡಿಸಿ:

ಪ್ರಸ್ತುತ ಕೇವಲ 8 ಮೋಟರ್‌ಗಳಲ್ಲಿ ಕೇವಲ 4 ಮೋಟರ್ ಮಾತ್ರ ಚಾಲನೆ ಮಾಡಲಾಗುತ್ತಿದೆ. ಮುಂದಿನ ಒಂದು ತಿಂಗಳೊಳಗಾಗಿ ತುಪ್ಪದಹಳ್ಳಿ ಕೆರೆಗೆ ದೊಡ್ಡ ಪೈಪ್‌ಲೈನ್‌ ಗೇಟ್ ವಾಲ್ ಅಳವಡಿಸಿ, ಗೇಟ್ ವಾಲ್‌ಗೆ ಸಣ್ಣ ಕೊಠಡಿ ಮಾಡಿ ಎಲ್ಲಾ 8 ಮೋಟರ್ ಚಾಲನೆ ಮಾಡಿಸಬೇಕು. ಈ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಳ್ಳಬೇಕು. ಇದನ್ನು ನಾವು ಬಹಿರಂಗವಾಗಿ ಜನರಿಗೆ ಆಶ್ವಾಸನೆ ನೀಡುತ್ತಿದ್ದೇವೆ. ಶಾಸಕರು, ಅಧಿಕಾರಿಗಳು ಮಾತಿಗೆ ತಪ್ಪಬಾರದು ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಜಗಳೂರು ಕ್ಷೇತ್ರವು ಸಂಭ್ರಮದ ವಾತಾರಣದಲ್ಲಿದೆ. ಸಿರಿಗೆರೆ ಶ್ರೀಗಳ ಪಾದ ಸ್ಪರ್ಷದಿಂದ ಪುನೀತರಾಗಿದ್ದೇವೆ. ಶಾಸಕ ಅವದಿಯಲ್ಲಿ ಸ್ವಾಮೀಜಿಗಳ ನೀಡಿದ ಮಾತನ್ನು ಸರ್ಕಾರದೊಂದಿಗೆ ಸಂಪರ್ಕಕೊಂಡಿಯಂತೆ ಕೆಲಸ ನಿರ್ವಹಿಸಿದೆ. ಭರಮಸಾಗರ ಮತ್ತು ಜಗಳೂರು ಕ್ಷೇತ್ರದ 57 ಕೆರೆಗಳ ನೀರು ತುಂಬಿಸುವ ಯೋಜನೆಗಳು ಸಾಕಾರಗೊಂಡಿವೆ ಎಂದರು.

ಇದೇ ವೇಳೆ ನೀರಾವರಿ ಇಲಾಖೆಯ ನಿವೃತ್ತ ಎಂಡಿ ಮಲ್ಲಿಕಾರ್ಜುನ್ ಗುಂಗಿ ಮಾತನಾಡಿದರು. ಸಿರಿಗೆರೆ ಶ್ರೀಗಳನ್ನು ನೂರಾರು ಕುಂಬ ಮೇಳ ಹಾಗೂ ವಿವಿಧ ಡೊಳ್ಳು, ಭಜನೆಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಆರೈಕೆ ಆಸ್ಪತ್ರೆ ಮುಖ್ಯಸ್ಥರಾದ ಡಾ.ರವಿಕುಮಾರ್, ಪಪಂ ಆಧ್ಯಕ್ಷ ನವೀನ್ ಕುಮಾರ್, ಪಿ.ಸುರೇಶ್ ಗೌಡ್ರು, ಕೆ.ಪಿ.ಪಾಲಯ್ಯ, ಎಂ.ಡಿ.ಕೀರ್ತಿಕುಮಾರ್, ಜಗಳೂರು ಕೆರೆಸಮಿತಿ ಅಧ್ಯಕ್ಷ ಶಿವನಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ವೀಣಾ, ಎನ್. ಎಸ್.ರಾಜಣ್ಣ, ವಕೀಲರಾದ ಬಸವರಾಜಪ್ಪ, ಡಿ.ವಿ.ನಾಗಪ್ಪ, ಶಶಿಕುಮಾರ್, ತಹಸೀಲ್ದಾರ್ ಸಯಿದ್ ಕಲೀಂ ಉಲ್ಲಾ, ಇಒ ಕೆಂಚಪ್ಪ ಸೇರಿ ಮುಖಂಡರು ಉಪಸ್ಥಿರಿದ್ದರು.