ದುಷ್ಟರನ್ನು ಮಹಾಪುರುಷರನ್ನಾಗಿಸಿದ ಜೈನ ಕವಿಗಳು: ಡಾ.ವೀರೇಶ ಬಡಿಗೇರ

| Published : Feb 23 2025, 12:36 AM IST

ಸಾರಾಂಶ

ವೈದಿಕ ಕವಿಗಳು ಮತ್ತು ಪುರಾಣಗಳು ರಾಮಾಯಣದಲ್ಲಿ ರಾಮನನ್ನು, ಮಹಾಭಾರತದಲ್ಲಿ ಪಾಂಡವರನ್ನು ವೈದಿಕ ಆದರ್ಶದ ಪ್ರತಿನಿಧಿಗಳಂತೆ ಚಿತ್ರಿಸಲಾಗಿದೆ. ಇದನ್ನು ಗಮನಿಸಿದರೆ ಮೌಲ್ಯಗಳನ್ನು ಜೈನ ಕವಿಗಳು ನಿರಾಕರಿಸಿದರು ಅಂತಲ್ಲ. ವೈಭವೀಕರಿಸಿದರೂ ಅಂತಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವೈದಿಕ ಕವಿಗಳು ಮತ್ತು ಪುರಾಣಗಳು ರಾಮಾಯಣದಲ್ಲಿ ರಾಮನನ್ನು, ಮಹಾಭಾರತದಲ್ಲಿ ಪಾಂಡವರನ್ನು ವೈದಿಕ ಆದರ್ಶದ ಪ್ರತಿನಿಧಿಗಳಂತೆ ಚಿತ್ರಿಸಲಾಗಿದೆ. ಇದನ್ನು ಗಮನಿಸಿದರೆ ಮೌಲ್ಯಗಳನ್ನು ಜೈನ ಕವಿಗಳು ನಿರಾಕರಿಸಿದರು ಅಂತಲ್ಲ. ವೈಭವೀಕರಿಸಿದರೂ ಅಂತಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಅಭಿಪ್ರಾಯಪಟ್ಟರು.ಜಿಲ್ಲೆಯ ಮುಧೋಳದಲ್ಲಿ ರನ್ನ ವೈಭವ ಕಾರ್ಯಕ್ರಮ ನಿಮಿತ್ತ ಶನಿವಾರ ರನ್ನ ಭವನದ ಅಜಿತ ಸೇನಾಚಾರ್ಯ ವೇದಿಕೆಯಲ್ಲಿ ನಡೆದ ರನ್ನ ಕಾವ್ಯ ದರ್ಶನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ಜೈನ ಕವಿಗಳ ವ್ಯಕ್ತಿತ್ವ ವಿವರಿಸಿದರು. ಜೈನ ತತ್ವದಂತೆ ಜೈನ ಕವಿಗಳು ಉತ್ತಮ ಪಾತ್ರಗಳ ಚರಿತ್ರೆ ಹೇಳುವುದಕ್ಕಿಂತ ಅಭವ್ಯರು ಅಂದರೆ ಪಾಪಿಗಳು ಭವ್ಯರಾಗುವತ್ತ ಗಮನಹರಿಸಿ ಕೊನೆಗೆ ಅವರನ್ನೇ ಮಹಾಪುರುಷರನ್ನಾಗಿಸಿದ್ದು ಗಮನಾರ್ಹವಾಗಿದೆ ಎಂದರು.

ಜೈನ ಧರ್ಮದ ಇತಿಹಾಸವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ವೈದಿಕ ಧರ್ಮ ಪಾಪಿಗಳು, ಚಾಂಡಾಲರು, ನೀಚರು ಎಂದು ಸಮಾಜದಿಂದ ಹೊರಗಿಟ್ಟಿದ್ದರು ಅವರನ್ನೇ ಧಾರ್ಮಿಕ ಜೀವಿಗಳನ್ನಾಗಿಸುತ್ತಾರೆ ಎಂದು ಹೇಳಿದ ವಿರೇಶ ಬಡಿಗೇರ, ಅವರು ದುರ್ಯೋಧನನನ್ನು ಮಹಾದುಷ್ಟನೆಂದು ಅರ್ಥದಲ್ಲಿ ಚಿತ್ರಿತವಾಗಿದ್ದು, ರನ್ನ ದುರ್ಯೋಧನನನ್ನು ಅಭಿಮಾನದಿಂದ ಸುಯೋಧನ, ಛಲದಂಕ ಮಲ್ಲನೆಂದು ಕರೆದು ಉದಾತ್ತೀಕರಿಸಿದ್ದಾನೆ. ಇದು ಗಮನಿಸಬೇಕಾದ ಅಂಶವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವೈದ್ಯ ಸಾಹಿತಿ ಡಾ.ಶಿವಾನಂದ ಕುಬಸದ ಮಾತನಾಡಿ, ರನ್ನನ ಗಧಾಯುದ್ಧದ ವೈಚಿತ್ರ್ಯ ಏನೆಂದರೆ ಕಥೆ ಅವನದಲ್ಲ, ಸಂವಿಧಾನ ಅವನದಲ್ಲ, ಸನ್ನಿವೇಶ ರಚನೆಯೂ ಪೂರ್ತಿಯಾಗಿ ಅವನದಲ್ಲ. ಆದರೂ ಒದುತ್ತಾ ಒದುತ್ತಾ ಹೋದಂತೆ ರೋಮಾಂಚನಗೊಳಿಸಿ ಸಂಪೂರ್ಣ ಆವರಿಸಿಕೊಳ್ಳುವ ರಸಾಗ್ನಿತೀರ್ಥ ಆಗಿದೆ. ಆ ಕಾರಣಕ್ಕಾಗಿಯೇ ರನ್ನ ಸಂಪೂರ್ಣವಾಗಿ ನಮ್ಮವನಾಗಿ ಶಕ್ತಿಕವಿ ಆಗಿದಾನೆ ಎಂದು ಬಣ್ಣಿಸಿದರು.

ಗಧಾಯುದ್ಧ ರನ್ನ ಕವಿ ದುರ್ಯೋಧನನಿಗಾಗಿ ಸೃಷ್ಟಿಸಿದ ಸ್ಮಾರಕದಂತೆ ಗೋಚರಿಸುತ್ತದೆ ಎಂದು ಬಣ್ಣಿಸಿದ ಡಾ.ಕುಬಸದ ಹತ್ತನೇ ಶತಮಾನದ ಜೈನಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದು ಹೇಳಿದರು. ಹಂಪಿ ಕನ್ನಡ ವಿವಿ ಯ ಪ್ರಸಾರಾಂಗ ನಿರ್ದೇಶಕರಾದ ಡಾ.ಮಾಧವ ಪರಾಜೆ ಅಧ್ಯಕ್ಷತೆ ವಹಿಸಿದ್ದರು.

ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಸಚಿವರು: ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರನ್ನ ವೈಭವ ಕಾರ್ಯಕ್ರಮದ ಭಾಗವಾಗಿ ಶನಿವಾರ ರನ್ನ ಭವನದ ಅಜಿತ ಸೇನಾಚಾರ್ಯ ವೇದಿಕೆಯಲ್ಲಿ ನಡೆದ ರನ್ನ ಕಾವ್ಯದರ್ಶನದ ವಿಚಾರ ಸಂಕಿರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಪ್ರೇಕ್ಷಕರ ಸಾಲಿನಲ್ಲಿ ಆಸಿನರಾಗಿ ರನ್ನನ ಕಾವ್ಯದರ್ಶನ ಆಲಿಸಿದರು.ವೈದಿಕ ಭಾರತ ಮತ್ತು ಜೈನ ಭಾರತದ ಪ್ರಭಾವವೇ ಗದ್ಯದ ಸೊಗಸಾಗಿದ್ದು, ರಾಮನ ಕಥೆಯನ್ನು ಸಂಸ್ಕೃತ ವಾಕ್ಯದಲ್ಲಿ ಬರೆದ ಜೈನರು ಕಳನಾಯಕರನ್ನು ಉದಾತ್ತೀಕರಿಸಿದ್ದಾರೆ. ರನ್ನ ಚಾರಿತ್ರ್ಯಿಕ ಪ್ರಜ್ಞೆ ಉಳ್ಳ ಕವಿಯಾಗಿದ್ದು, ವ್ಯಕ್ತಿತ್ವ ಕಟ್ಟುವಲ್ಲಿ ಕವಿಚತುರನಾಗಿದ್ದ ಎಂದು ಅವರು. ರಾಷ್ಟ್ರಕೂಟ, ಗಂಗ, ಚಾಲುಕ್ಯ ಅರಸರ ಸಾಂಸ್ಕೃತಿಕ ಪ್ರೀತಿಯನ್ನು ತೆರೆದಿಡುವ ರನ್ನ ರಾಷ್ಟ್ರಕೂಟರ, ಗಂಗರನ್ನು ಕಣ್ಣಾರೆ ಕಂಡವನಾಗಿದ್ದ .

- ಡಾ.ವೀರೇಶ ಬಡಿಗೇರ ಪ್ರಾಧ್ಯಾಪಕರು ಹಂಪಿ ಕನ್ನಡ ವಿವಿ