ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸರ್ವ ಕಾಲದಲ್ಲೂ ಸದಾಕಾಲ ಜೀವಂತವಾಗಿರುವ ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆ ಅಮರಶಿಲ್ಪಿ ಜಕಣಾಚಾರಿಯರು ಅಪಾರ ಕೊಡುಗೆ ನೀಡಿದ್ದಾರೆ. ಮಾತ್ರವಲ್ಲದೇ ಸಾಂಸ್ಕೃತಿಕ ರಾಯಭಾರಿಯಂತಿದ್ದಾರೆ. ಇಂತಹ ವ್ಯಕ್ತಿಗಳ ದಿನವನ್ನು ಸರ್ವ ಧರ್ಮದವರು ಆಚರಿಸುವ ಮೂಲಕ ಗೌರವಿಸಿದಾಗ ಮಾತ್ರ ದೇಶದಲ್ಲಿ ಸಮಾನತೆ ಸಾರಿದಂತಾಗುತ್ತದೆ ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅಭಿಪ್ರಾಯಪಟ್ಟರು.ಪಟ್ಟಣದ ಮಿನಿವಿಧಾನ ಸೌಧದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಜಕಣಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಭಾರತ ಸೇರಿದಂತೆ ವಿಶ್ವದ ವಿವಿಧ ಕಡೆ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ. ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಇಲ್ಲಿರುವ ಶಿಲ್ಪಗಳೇ ಸಾಕ್ಷಿ. ಕರ್ನಾಟಕದ ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆ ವಿಶ್ವಕರ್ಮರ ಪ್ರಸ್ತುತತೆಯನ್ನು ಪ್ರತಿಬಿಂಬಿಸುತ್ತವೆ. ನಶಿಸಿಹೋಗುತ್ತಿರುವ ವಿಶ್ವಕರ್ಮರ ಕುಲಕಸುಬುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ, ಇಂದಿನ ವಿಜ್ಞಾನ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಮೈಗೂಡಿಸಿಕೊಂಡು ಮುಂದುವರಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮಾತನಾಡಿ, ಇಂದು ವಿಶ್ವವಿಖ್ಯಾತ ಶಿಲ್ಪಿಯ ಸಂಸ್ಮರಣೆ ಎಲ್ಲೆಡೆ ನಡೆಯುತ್ತಿದೆ. ವಿಶ್ವಕರ್ಮರನ್ನು ವಿಶ್ವರೂಪ, ದಕ್ಷಿಣಾಚಾರ್ಯ, ಜಕಣಾಚಾರ್ಯ, ಸ್ಥಪತಿ ಇನ್ನಿತರ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ. ಸ್ಥಪತಿ ಎಂದರೇ ಶಿಲ್ಪಿಗಳಲ್ಲಿ ಅಗ್ರಗಣ್ಯ ಎಂದರ್ಥ. ವಾಸ್ತು ಪ್ರಕಾರ ಶಿಲ್ಪ ರಚಿಸುವವರನ್ನು ಸ್ಥಪತಿ ಎನ್ನಲಾಗುತ್ತದೆ. ಸ್ಥಪತಿಯಾದವನು ತನ್ನ ಹೆಸರನ್ನು ಎಲ್ಲೂ ಪ್ರಸ್ತುತಪಡಿಸುವುದಿಲ್ಲ ಎಂದರು.ಸೃಷ್ಟಿಯ ಮೂಲಕರ್ತೃವಾಗಿರುವ ಜಕಣಾಚಾರಿಯವರು ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸರಿಸಿದೆ. ಪ್ರಪಂಚದ ಎಲ್ಲ ವಿದ್ಯೆಗಳ ಮೂಲವಾಗಿರುವ ಜಕಣಾಚಾರಿ ಅವರನ್ನು ಜಗತ್ತಿನ ಮೊದಲ ಮುಖ್ಯ ಎಂಜಿನಿಯರ್ ಎಂದು ಕರೆಯಬಹುದು. ಜಕಣಾಚಾರಿಯವರು ಸಾಮಾನ್ಯ ಜನರಿಗೆ ದೇವರ ಪರಿಕಲ್ಪನೆ ನೀಡುವ ಮಧ್ಯಸ್ಥಿಕೆದಾರರಾಗಿದ್ದರು. ವಿಶ್ವಕರ್ಮರ ಶಿಲ್ಪಕಲೆ ಅಮರವಾಗಿದ್ದು, ಶಿಲ್ಪಕಲೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ವಿಶ್ವಕರ್ಮ ಸಮುದಾಯ ತಮ್ಮ ಕುಲಕಸುಬುಗಳ ಜೊತೆಗೆ ಶಿಕ್ಷಣ ಪಡೆದು ಸಂಘಟಿತರಾಗಬೇಕು. ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಸಮುದಾಯದ ಇತರರಲ್ಲೂ ಜಾಗೃತಿ ಮೂಡಿಸಬೇಕು. ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮುದಾಯ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.ಈ ವೇಳೆ ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಪ್ರತಿಭಾ ಅಂಗಡಗೇರಿ, ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಮಲ್ಲಣ್ಣ ಪತ್ತಾರ(ತಾರನಾಳ), ದಲಿತ ಮುಖಂಡ ಹರೀಷ ನಾಟಿಕಾರ, ಪುರಸಭೆ ಆಶ್ರಯ ಕಮಿಟಿ ನಾಮನಿರ್ದೇಶಿತ ಸದಸ್ಯ ವೀರುಪಾಕ್ಷಿ ಪತ್ತಾರ(ಇಟಗಿ), ನಿವೃತ್ತ ಎಎಸ್ಐ ಕೆ.ಎಸ್.ಬಡಿಗೇರ, ವಿಜಯಕುಮಾರ ಬಡಿಗೇರ, ಆನಂದ ಪತ್ತಾರ, ಸಂಗೀತ ಗವಾಯಿ ಚಂದ್ರಶೇಖರ ಪತ್ತಾರ, ಸುರೇಶ ಪತ್ತಾರ, ಗುಂಡು ಬಡಿಗೇರ, ಮೌನೇಶ ಹಡಲಗೇರಿ, ಶಿವು ನಂದರಗಿ, ದೇವೇಂದ್ರ ಪತ್ತಾರ( ಬಳಬಟ್ಟಿ), ಕಾಶಿನಾಥ ಬಡಿಗೇರ(ಹೊಕ್ರಾಣಿ), ನಾರಾಯಣ ತಾರಿವಾಳ, ಮೌನೇಶ ಇಟಗಿ, ಗುರುರಾಜ ಇಟಗಿ ಸೇರಿದಂತೆ ಹಲವರು ಇದ್ದರು.