ಸಾರಾಂಶ
ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ।ವಿಶ್ವಕರ್ಮರು ಮುಖ್ಯವಾಹಿನಿಗೆ ಬರಬೇಕು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ನೀಡಿರುವ ಕೊಡುಗೆ ಅಗಾಧವಾದುದು. ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆ ವಿಶ್ವಕರ್ಮರ ಪ್ರಸ್ತುತತೆಯನ್ನು ಎತ್ತಿ ಹಿಡಿದಿದೆ ಎಂದು ಸಾಮಾಜಿಕ ಚಿಂತಕ ಬಿ.ಪಿ.ರತೀಶ್ ಆಚಾರ್ಯ ಹೇಳಿದರು.
ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಬುಧವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಸದಾಕಾಲಕ್ಕೂ ಜೀವಂತವಾಗಿರುವ ಭಾರತೀಯ ಶಿಲ್ಪಕಲಾ ಕೌಶಲಕ್ಕೆ ಅಮರಶಿಲ್ಪಿ ಜಕಣಾಚಾರಿಯವರು ಅಪಾರ ಕೊಡುಗೆ ನೀಡಿರುವ ಕಾರಣ ಇಂದಿಗೂ ಶಿಲ್ಪಕಲೆಗಳು ಜೀವಂತವಾಗಿವೆ. ಇಂದು ವಿಶ್ವವಿಖ್ಯಾತ ಶಿಲ್ಪಿಯ ಸಂಸ್ಮರಣೆ ಎಲ್ಲೆಡೆ ನಡೆಯುತ್ತಿದೆ. ವಿಶ್ವಕರ್ಮರನ್ನು ವಿಶ್ವರೂಪ, ಜಕಣಾಚಾರ್ಯ ಎಂಬ ಹೆಸರುಗಳಿಂದ ಗುರುತಿಸಲಾಗುತ್ತಿದೆ ಎಂದರು.
ಸೃಷ್ಟಿಯ ಮೂಲಕತೃವಾಗಿರುವ ಜಕಣಾಚಾರಿಯರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸರಿಸಿದೆ. ಪ್ರಪಂಚದ ಎಲ್ಲ ವಿದ್ಯೆಗಳ ಮೂಲವಾಗಿರುವ ಜಕಣಾಚಾರಿ ಅವರನ್ನು ಜಗತ್ತಿನ ಮೊದಲ ಮುಖ್ಯ ಎಂಜಿನಿಯರ್ ಎನ್ನಬಹುದು. ಜಕಣಚಾರಿಯವರು ಸಾಮಾನ್ಯ ಜನರಿಗೆ ದೇವರ ಪರಿಕಲ್ಪನೆ ನೀಡುವ ಮಧ್ಯಸ್ಥಿಕೆದಾರರಾಗಿದ್ದರು ಎಂದು ಹೇಳಿದರು.ಶಿಲ್ಪಕಲೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ವಿಶ್ಚಕರ್ಮ ಸಮುದಾಯ ತಮ್ಮ ಕುಲ ಕುಸುಬುಗಳ ಜೊತೆಗೆ ಶಿಕ್ಷಣ ಪಡೆದು ಸಂಘಟಿತರಾಗಬೇಕು. ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಅಲ್ಲದೇ ಸಮುದಾಯ ಇತರರಲ್ಲೂ ಜಾಗೃತಿ ಮೂಡಿಸಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾಸಭಾದ ಅಧ್ಯಕ್ಷ ಹೆಚ್. ಆರ್.ಉಮಾಶಂಕರ್, ವಿಶ್ವಕರ್ಮರ ಕೊಡುಗೆಗಳು ಯಾವುದೇ ಒಂದು ಧರ್ಮ, ಜಾತಿ, ಕುಲಕ್ಕೆ ಸೀಮಿತವಾಗಿಲ್ಲ. ಸಮಾಜವು ಪಂಚ ಕಸಬುಗಳ ಮುಖಾಂತರ ಸಾವಿರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.ಜಕಣಚಾರ್ಯರು ಉತ್ತಮ ಕಲಾಕೃತಿಗಳನ್ನು ನಿರ್ಮಿಸಿ ನಾಡಿನ ಅಲಂಕಾರ ಹೆಚ್ಚಿಸಿದ್ದಾರೆ. ಅವರ ಪರಿಶ್ರಮದ ಫಲವಾಗಿ ನಾಡಿನಾದ್ಯಂತ ಕಟ್ಟಿಗೆ, ಕಲ್ಲು ಬಂಡೆಗಳಿಂದ ತಯಾರಿಸಿದ ಶಿಲ್ಪಕಲೆ ಹಾಗೂ ಕಲಾಕೃತಿಗಳನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಯಾತ್ರಿಕರು ಆಗಮಿಸುವಂತೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಸ್.ಕೆ.ಶಂಕರಯ್ಯಚಾರ್, ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಭೀಮಾಚಾರ್, ಸುವರ್ಣಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಧೀರ್ಕುಮಾರ್, ಮುಖಂಡರುಗಳಾದ ಚಂದ್ರಶೇಖರ್, ಜಯಣ್ಣಚಾರ್, ಜಗದೀಶ್, ಮತ್ತಿತರರು ಉಪಸ್ಥಿತರಿದ್ದರು.