ಸಾರಾಂಶ
ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ 80 ಲಕ್ಷ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಎರಡನೇಯ ಹಂತದ ಜಲ ಜೀವನ ಮಿಶನ್ ಯೋಜನೆಯ ನೀರು ಸರಬ ರಾಜು ಕಾಮಗಾರಿಗಳು ಕಾಟಾಚಾರಕ್ಕೆ ಮುಗಿಸಿ ಮಹತ್ವಕಾಂಕ್ಷಿ ಯೋಜನೆಯೊಂದು ಜನರಿಂದ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ, ಔರಾದ್
ಮನೆ ಮನೆಗೂ ನಳ ನೀಡುವ ಗೃಹಿಣಿಯರ ಅಡುಗೆ ಮನೆವರೆಗೆ ನೀರು ಕೊಡುವ ಮಹತ್ವಕಾಂಕ್ಷಿ ಜಲ ಜೀವನ ಮಿಶನ್ ತಾಲೂಕಿನಲ್ಲಿ ಹಳ್ಳ ಹಿಡಿದಿದೆ.ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ 80 ಲಕ್ಷ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಎರಡನೇಯ ಹಂತದ ಜಲ ಜೀವನ ಮಿಶನ್ ಯೋಜನೆಯ ನೀರು ಸರಬ ರಾಜು ಕಾಮಗಾರಿಗಳು ಕಾಟಾಚಾರಕ್ಕೆ ಮುಗಿಸಿ ಮಹತ್ವಕಾಂಕ್ಷಿ ಯೋಜನೆಯೊಂದು ಜನರಿಂದ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯಂಗಳದಲ್ಲಿ ನೀರು ಕೋಡಬೇಕಾದ ಗುತ್ತಿಗೆದಾರ ಊರ ರಸ್ತೆಯಲ್ಲಿ ಒಂದೇ ಕಡೆಯಲ್ಲಿ ಸಾಮೂಹಿಕವಾಗಿ ನಳಗಳು ಸ್ಥಾಪಿಸಿ ನಾಪತ್ತೆಯಾಗಿದ್ದಾರೆ. ನಮ್ಮ ಮನೆಗೆ ನಳಸಂಪರ್ಕ ಕೊಡಿ ಎಂದ್ರೆ ಗ್ರಾಮದ ಬಡಾವಣೆಯೊಂದರಲ್ಲಿ ಸಾಮೂಹಿಕವಾಗಿ 5 ನಳಗಳು ಒಂದೇ ಕಡೆ ಸ್ಥಾಪಿಸಿದ್ದಾರೆ. ಅಲ್ಲದೆ, ಅದಕ್ಕೆ ಪೈಪ್ಲೈನ್ ಕನೆಕ್ಷನ್ ಕೂಡ ನೀಡಿಲ್ಲ. ಗ್ರಾಮದ ಬಹುತೇಕರ ಮನೆಗಳ ಮುಂದೆ ಇದೇ ರೀತಿ ಮಾಡಿದ್ದಾರೆ. ಇದರಿಂದ ಈ ಯೋಜನೆಯಿಂದ ನಮಗೆ ಮತ್ತೆ ಬಿಂದಿಗೆ ತೆಗೆದು ಕೊಂಡು ನೀರು ತರುವಂಥ ಸ್ಥಿತಿಯನ್ನು ಗುತ್ತಿಗೆದಾರ ನಿರ್ಮಾಣ ಮಾಡಿದ್ದಾರೆ ಎಂದು ಸ್ಥಳೀಯರಾದ ಜ್ಞಾನೇಶ್ವರ ಬಿರಾದಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಯೋಜನೆಯ ನಿರ್ವಹಣೆ ಹೊಣೆಗಾರಿಕೆ ಹೊತ್ತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಕಾಮಗಾರಿಯನ್ನು ಕಂಡೂ ಕಾಣದಂತೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾಮಗಾರಿ ಮೊತ್ತ 80 ಲಕ್ಷ ಅನುದಾನದಲ್ಲಿ ಅಂದಾಜು 65 ಲಕ್ಷ ರು. ಅನುದಾನ ಗುತ್ತಿಗೆದಾರ ಪಡೆದುಕೊಂಡಿದ್ದಾರೆ. ಇನ್ನೂ ಗ್ರಾಮದಲ್ಲಿ ಪೈಪ್ ಲೈನ್ ಅಳವಡಿಕೆ, ಮಿಟರ್ ಅಳವಡಿಕೆ, ನೀರಿನ ಗುಣಮಟ್ಟ ತಪಾಸಣೆ ಯಾವುದೇ ಕೆಲಸಗಳನ್ನೂ ಪೂರ್ಣ ಮಾಡದೆ ಅನುದಾನ ಬಿಡುಗಡೆ ಮಾಡಿರುವ ಅಧಿಕಾರಿಗಳು ಮೇಲುಸ್ತುವಾರಿ ವಹಿಸುವಲ್ಲಿ ನಿರ್ಲಕ್ಷ್ಯ ಎಸಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಸ್ಥಳೀಯರು ಕೆಂಡಕಾರಿದ್ದಾರೆ.ಸೂಕ್ತ ಕ್ರಮದ ಭರವಸೆ: ಕೌಡಗಾಂವ್ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಜೆಜೆಎಂ ಕಾಮಗಾರಿ ಸ್ಥಳ ಪರಿಶಿಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಸುಭಾಷ ಧುಳಗುಂಡೆ ಅವರು ಭರವಸೆ ನೀಡಿದ್ದಾರೆ.ದೇಶವೇ ಜಲ ಜೀವನ ಮಶಿನ್ ಯೋಜನೆಯ ಮಹತ್ವ ಸಾರುತ್ತಿರುವಾಗ ತಾಲೂಕಿನಲ್ಲಿ ಕಾಟಾಚಾರ ಯೋಜನೆಯಾಗಿ ಎದ್ದು ಕಾಣುತ್ತಿದ್ದು, ಹಿರಿಯ ಅಧಿಕಾರಿ ಗಳು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂಬ ವಿಶ್ವಾಸ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.