ಕುಶಾಲನಗರ ಹೆದ್ದಾರಿ ಕಾಮಗಾರಿ ತಿಂಗಳಾಂತ್ಯಕ್ಕೆ ಆರಂಭ

| Published : Feb 05 2024, 01:49 AM IST

ಸಾರಾಂಶ

92 ಕಿ.ಮೀ ಉದ್ದದ ನಾಲ್ಕು ಪಥದ ರಸ್ತೆಯ ಜೊತೆ ಸೇವಾ ರಸ್ತೆಗಳೂ ಇರಲಿವೆ. 1,351.67 ಎಕರೆ (547 ಹೆಕ್ಟೇರ್) ಭೂಸ್ವಾಧೀನ ಪ್ರಕ್ರಿಯೆಯಲ್ಲಿ 691.89 ಎಕರೆ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, 477 ಕೋಟಿ ರೂ, ಪರಿಹಾರ ನೀಡಲಾಗಿದೆ ಎಂದರು.ಉಳಿದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಎದುರಾಗಿರುವ ತೊಂದರೆಗಳನ್ನು ಬಗೆಹರಿಸಲಾಗುತ್ತಿದೆ

- - ಪ್ರತಾಪ್ ಸಿಂಹ

ಕನ್ನಡಪ್ರಭ ವಾರ್ತೆ ಮೈಸೂರು

ಶ್ರೀರಂಗಪಟ್ಟಣ– ಕುಶಾಲನಗರ ರಾಷ್ಟ್ರೀಯ ಹೆದ್ದಾರಿ– 275ರ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತಿದ್ದು, ತಿಂಗಳಾಂತ್ಯಕ್ಕೆ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಅವರು, 92 ಕಿ.ಮೀ ಉದ್ದದ ನಾಲ್ಕು ಪಥದ ರಸ್ತೆಯ ಜೊತೆ ಸೇವಾ ರಸ್ತೆಗಳೂ ಇರಲಿವೆ. 1,351.67 ಎಕರೆ (547 ಹೆಕ್ಟೇರ್) ಭೂಸ್ವಾಧೀನ ಪ್ರಕ್ರಿಯೆಯಲ್ಲಿ 691.89 ಎಕರೆ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, 477 ಕೋಟಿ ರೂ, ಪರಿಹಾರ ನೀಡಲಾಗಿದೆ ಎಂದರು.

ಉಳಿದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಎದುರಾಗಿರುವ ತೊಂದರೆಗಳನ್ನು ಬಗೆಹರಿಸಲಾಗುತ್ತಿದೆ. ಕೆಲವು ರೈತರ ಬಳಿ ಹಕ್ಕುಪತ್ರ, ಸಾಗುವಳಿ ಚೀಟಿ ಇಲ್ಲ. ವ್ಯಾಜ್ಯಗಳೂ ಇವೆ. ಇವುಗಳನ್ನು ಬಗೆಹರಿಸುವುದು ಸವಾಲಾಗುತ್ತಿದ್ದು, ಶೀಘ್ರ ಬಗೆಹರಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೆದ್ದಾರಿಯಲ್ಲಿ ಪಿರಿಯಾಪಟ್ಟಣ ಹಾಗೂ ಕುಶಾಲನಗರ ಭಾಗದಲ್ಲಿ 135 ಎಕರೆ ಅರಣ್ಯ ಭೂಮಿಯೂ ಇತ್ತು. ಜ.29 ರಂದು ಪರಿಸರ ಅನುಮತಿಯೂ ಸಿಕ್ಕಿದೆ. ಯೋಜನಾ ವೆಚ್ಚವು 4130 ಕೋಟಿ ರೂ. ಆಗಿದ್ದು, 1100 ಕೋಟಿ ಭೂಸ್ವಾಧೀನ ಪರಿಹಾರ ನೀಡಲಾಗುತ್ತದೆ ಎಂದರು.

ಶ್ರೀರಂಗಪಟ್ಟಣದ ಪಾಲಹಳ್ಳಿಯಿಂದ ಕಾಮಗಾರಿ ಆರಂಭವಾಗಲಿದೆ. ಕೊಡಗು ಜಿಲ್ಲೆಯಲ್ಲಿ 2.3 ಕಿ.ಮೀ ರಸ್ತೆಯಿದ್ದು, ಮೈಸೂರು ಜಿಲ್ಲೆಯಲ್ಲಿ 75.9 ಕಿಮೀ, ಮಂಡ್ಯದಲ್ಲಿ 14 ಕಿ.ಮೀ ರಸ್ತೆ ಇರಲಿದೆ. ಸಂಪಾಜೆ ನಂತರ ಮತ್ತೆ ನಾಲ್ಕು ಪಥದ ರಸ್ತೆ ಆಗಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ಮಾತನಾಡಿ, ರಾಮನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಚೇರಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಗುವುದು. ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಲಾಗಿದೆ. ಕೆಲವೆಡೆ ಭೂಮಿ ನೀಡಲು ವಿರೋಧ ವ್ಯಕ್ತವಾಗಿದೆ. ಭೂ ಪರಿಹಾರ ಒಂದೇ ರೀತಿಯಲ್ಲಿ ನೀಡುವಂತೆ ಕೇಳುತ್ತಿದ್ದಾರೆ. ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, 9 ಲಕ್ಷದಿಂದ 25 ಲಕ್ಷದವರೆಗೂ ಪರಿಹಾರ ನೀಡಲಾಗಿದೆ. ಮಾಲೀಕರಿಗೆ ತಾರತಮ್ಯ ಇಲ್ಲದಂತೆ 18 ಲಕ್ಷಕ್ಕೆ ನಿಗದಿಗೊಳಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಭೂ ಸ್ವಾಧೀನಾಧಿಕಾರಿ ಶಿವೇಗೌಡ ಮಾತನಾಡಿ, ಹಂಗಾಮಿ ಸಾಗುವಳಿಯ 9 ಪ್ರಕರಣಗಳು, ಹೆಚ್ಚುವರಿ ಪರಿಹಾರ ಕೋರಿ 70 ಅರ್ಜಿಗಳು ಬಂದಿವೆ. ಇದರಲ್ಲಿ 20 ಪ್ರಕರಣಗಳು ಇತ್ಯರ್ಥವಾಗಿವೆ. ಉಳಿದನ್ನು ಬಗೆಹರಿಸಿದರೆ ಉಳಿದ ಭೂಮಿ ಹಸ್ತಾಂತರವಾಗಲಿದೆ ಎಂದರು.

ಕೆಎನ್ಆರ್ಕನ್ಸ್ ಟ್ರಕ್ಷನ್ ದಿಲೀಪ್ ಕುಮಾರ್ ಸಿನ್ಹಾ ಇದ್ದರು.