ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯಶಸ್ವಿ: ಶಾಂತನಗೌಡ

| Published : Aug 16 2025, 12:00 AM IST

ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯಶಸ್ವಿ: ಶಾಂತನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿಯೇ ಜಲಜೀವನ್ ಮಿಷನ್ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ರಾಜ್ಯದ 92 ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದು, ದಾವಣಗೆರೆ ಜಿಲ್ಲೆಗೆ 50 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಹೊನ್ನಾಳಿಯಲ್ಲಿ 7 ಹಾಗೂ ನ್ಯಾಮತಿ 12 ಒಟ್ಟು 19 ಗ್ರಾಮಗಳಲ್ಲಿ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನ ಆಗಿರುವುದು ವಿಶೇಷ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದ್ದಾರೆ.

- ಸೋಗಿಲು ಗ್ರಾಮದಲ್ಲಿ 24/7 ಶುದ್ಧ ಕುಡಿಯುವ ನೀರು ಗ್ರಾಮ ಘೋಷಣೆ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕರ್ನಾಟಕದಲ್ಲಿಯೇ ಜಲಜೀವನ್ ಮಿಷನ್ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ರಾಜ್ಯದ 92 ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದು, ದಾವಣಗೆರೆ ಜಿಲ್ಲೆಗೆ 50 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಹೊನ್ನಾಳಿಯಲ್ಲಿ 7 ಹಾಗೂ ನ್ಯಾಮತಿ 12 ಒಟ್ಟು 19 ಗ್ರಾಮಗಳಲ್ಲಿ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನ ಆಗಿರುವುದು ವಿಶೇಷ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ನ್ಯಾಮತಿಯ ಸೋಗಿಲು ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಚಟ್ನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಜನರಿಗೆ ದಿನದ 24 ಗಂಟೆಯೂ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗ್ರಾಮ ಘೋಷಣೆ ಕಾರ್ಯಕ್ರಮ ಉದ್ಘಾಟನೆ ಮತ್ತು ಜಲಜೀವನ್ ಮಿಷನ್ ಯೋಜನೆ ನಲ್ಲಿಗಳಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ ಅವರು ಮಾತನಾಡಿದರು.

ಈ ಯೋಜನೆ ಮಹಿಳೆಯರಿಗೆ ವಿಶೇಷ ವರದಾನ. ಈ ಹಿಂದೆ ಸಚಿವರಾಗಿದ್ದ ದಿವಂಗತ ನಜೀರ್ ಸಾಬ್ ಅವರು ಗ್ರಾಮೀಣರಿಗೆ ಕುಡಿಯುವ ನೀರು ಒದಗಿಸುವ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಅಲ್ಲದೇ, ಕೊಳವೆಬಾವಿಗಳನ್ನು ಕೊರೆಯಿಸುವ ಯೋಜನೆ ಮೂಲಕ ಜನರಿಗೆ ನೀರು ಒದಗಿಸುವ ಕೆಲಸ ಮಾಡಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಜನತೆ ಅಭಿಮಾನದಿಂದ ನೀರ್ ಸಾಬ್ ಎಂದು ಕರೆಯುತ್ತಿದ್ದರು ಎಂದು ಸ್ಮರಿಸಿದ ಅವರು, ಜನರಿಗೆ ನೀರು ಹಿತಮಿತ ಬಳಕೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಅವಳಿ ತಾಲೂಕುಗಳಲ್ಲಿ 8 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆಯೇ ಇಲ್ಲದಂತೆ ಮಾಡಲಾಗುವುದು. ಜೊತೆಗೆ ಕೆರೆ ತುಂಬಿಸುವ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಪಾಪಾಲಕ ಎಂಜಿನಿಯರ್ ಸೋಮ್ಲಾನಾಯ್ಕ ಅವರು ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಮತಿ ತಾಪಂ ಇಒ ರಾಘವೇಂದ್ರ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನವೀನ, ಸದಸ್ಯರಾದ ರೇಖಾನಾಯ್ಕ, ಮಂಜಪ್ಪ, ಮಲ್ಲೇಶಪ್ಪ, ಜಲಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಜಗದೀಶ್ ಪಿಡಿಒ ವಿಜಯಕುಮಾರ್, ಗ್ರಾಪಂ ಕಾರ್ಯದರ್ಶಿ ಜಯಪ್ಪ, ಸ್ತ್ರೀಶಕ್ತಿ ಸಂಘದ ಸದಸ್ಯರು, ಚಟ್ನಹಳ್ಳಿ, ಸೋಗಿಲು ಗ್ರಾಮಗಳ ಮುಖಂಡರು ಇದ್ದರು.

- - -

-15ಎಚ್.ಎಲ್.ಐ2:

ಸೋಗಿಲು ಗ್ರಾಮದಲ್ಲಿ ಶುಕ್ರವಾರ ಜಲಜೀವನ್ ಮಿಷನ್ ಯೋಜನೆಯಡಿ 24/7 ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.